
ಮಡಿಕೇರಿ NEWS DESK ಮೇ 20 : ಕೊಡಗು ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ, ಬಿಜೆಪಿಗೆ ಕಾರ್ಯಕರ್ತರ ನಾಯಕತ್ವವೇ ದೊಡ್ಡ ಶಕ್ತಿಯಾಗಿದೆ. ಬಿಜೆಪಿಗೆ ನಾಯಕತ್ವದ ಕೊರತೆ ಇರಬಹುದೆಂದು ಇತ್ತೀಚೆಗೆ ಮಡಿಕೇರಿ ಕ್ಷೇತ್ರದ ಶಾಸಕರು ನೀಡಿರುವ ಹೇಳಿಕೆ ಖಂಡನೀಯವೆoದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸದೃಢ ಹಿರಿಯ ಮುಖಂಡರ ನೇತೃತ್ವದಲ್ಲಿ ಬಿಜೆಪಿಯಲ್ಲಿರುವ ದೊಡ್ಡ ಸಂಖ್ಯೆಯ ಕಾರ್ಯಕರ್ತರೇ ನಾಯಕರಾಗಿದ್ದಾರೆ. ಆದರೆ ಕಾರ್ಯಕರ್ತರೇ ಇಲ್ಲದ ಕೊಡಗು ಕಾಂಗ್ರೆಸ್ ನಾಯಕತ್ವದ ಕೊರತೆಯನ್ನು ಎದುರಿಸುತ್ತಿದೆ. ಹೊರ ಜಿಲ್ಲೆಯಿಂದ ಬಂದು ಇಲ್ಲಿ ಶಾಸಕರಾಗಿರುವ ಮಡಿಕೇರಿ ಶಾಸಕರಿಗೆ ಇದು ಮರೆತು ಹೋಗಿದೆ. ಬಿಜೆಪಿ ಎಂದಿಗೂ ಆಮದು ನಾಯಕರನ್ನು ಶಾಸಕರನ್ನಾಗಿ ಮಾಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿಯ ನಾಯಕತ್ವದ ಬಗ್ಗೆ ಮಾತನಾಡಿ ಕಾಲಹರಣ ಮಾಡುವ ಬದಲು ತಮ್ಮ ಕ್ಷೇತ್ರದ ಅಭಿವೃದ್ಧಿಯ ಕುರಿತು ಶಾಸಕರು ಚಿಂತನೆ ಹರಿಸುವುದು ಸೂಕ್ತ. ಮಳೆಗಾಲ ಆರಂಭಗೊಳ್ಳಲು ಕೇವಲ ಎರಡು ವಾರಗಳಿರುವಾಗ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿರುವ ಶಾಸಕರ ಮೂರು ವರ್ಷಗಳ ಸಾಧನೆಯ ಬಗ್ಗೆ ಮಡಿಕೇರಿ ಕ್ಷೇತ್ರದ ಜನರಿಗೆ ಬೇಸರವಿದೆ. ರಸ್ತೆಗಳ ಅವ್ಯವಸ್ಥೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಪ್ರವಾಸಿತಾಣಗಳಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಇಲ್ಲದಾಗಿದೆ, ಅಧಿಕಾರಿಗಳ ಮೇಲೆ ಹಿಡಿತ ಸಾಧಿಸುವಲ್ಲಿ ಶಾಸಕರು ವಿಫರಾಗುತ್ತಿದ್ದಾರೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷö್ಯದಿಂದ ದುಬಾರೆ ಸಾಕಾನೆ ಶಿಬಿರದಲ್ಲಿ ಆನೆ ದಾಳಿಯಿಂದ ಅಮಾಯಕ ಮಹಿಳೆ ಸಾವಿಗೀಡಾಗಿದ್ದಾರೆ. ಪ್ರವಾಸಿಗರಿಂದ ಶುಲ್ಕದ ರೂಪದಲ್ಲಿ ಸಾವಿರಾರು ರೂಪಾಯಿ ಸಂಗ್ರಹಿಸುವ ಅರಣ್ಯ ಇಲಾಖೆ ಕನಿಷ್ಠ ಸುರಕ್ಷತಾ ವ್ಯವಸ್ಥೆಯನ್ನು ಕೂಡ ಕಲ್ಪಿಸಿಲ್ಲ. ಅಪಾಯಗಳು ಸಂಭವಿಸಿದಾಗ ತುರ್ತು ಸ್ಪಂದನೆಯ ಕಾರ್ಯಪಡೆಗಳಿಲ್ಲ. ಸಾಕಾನೆಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿರುವ ಕಂಠಿ ಕಾರ್ಯಪ್ಪ, ಈ ರೀತಿಯ ಕೊರತೆಗಳ ಬಗ್ಗೆ ಶಾಸಕರು ಅಧ್ಯಯನ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಬದಲು ಇತರ ಪಕ್ಷಗಳ ಯೋಗಕ್ಷೇಮದ ಬಗ್ಗೆ ಚಿಂತೆ ಮಾಡುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸುಂಟಿಕೊಪ್ಪ ಸಮೀಪ ಹೇರೂರು ಗ್ರಾಮದಲ್ಲಿ ಅಕ್ರಮ ಚರ್ಚ್ ತಲೆ ಎತ್ತಿದೆ. ಚರ್ಚ್ನ ಉದ್ಘಾಟನೆಗೆ ತಮಿಳುನಾಡಿನಿಂದ ಮತಾಂತರಿಗಳು ಬಂದಿದ್ದಾರೆ. ಇದು ಜಿಲ್ಲೆಯಲ್ಲಿ ಮತಾಂತರದ ಪಿಡುಗು ವ್ಯಾಪಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ, ಯಾವುದೇ ಆತಂಕವಿಲ್ಲದೆ ಅಕ್ರಮ ಚರ್ಚ್ ನಿರ್ಮಾಣಗೊಳ್ಳುತ್ತದೆ ಮತ್ತು ಮತಾಂತರ ನಡೆಯುತ್ತದೆ ಎಂದರೆ ಇದಕ್ಕೆ ಬೆಂಬಲವಾಗಿ ರಾಜ್ಯ ಸರಕಾರ ನಿಂತಿದೆ ಎನ್ನುವ ಅನುಮಾನ ಮೂಡುತ್ತದೆ. ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ರೀತಿಯ ಅಕ್ರಮಗಳ ಬಗ್ಗೆ ಶಾಸಕರು ಉತ್ತರ ನೀಡಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ. *ರೂ.50 ಲಕ್ಷ ಪರಿಹಾರ ನೀಡಿ* ದುಬಾರೆಯಲ್ಲಿ ಮೃತಪಟ್ಟ ಅಮಾಯಕ ಮಹಿಳೆಯ ಕುಟುಂಬಕ್ಕೆ ರಾಜ್ಯ ಸರಕಾರ ರೂ.50 ಲಕ್ಷ ಪರಿಹಾರ ನೀಡಬೇಕು, ಕ್ಷೇತ್ರದ ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರವಾಸಿತಾಣ ದುಬಾರೆಯಲ್ಲಿ ಶುಲ್ಕದ ರೂಪದಲ್ಲಿ ಪ್ರವಾಸಿಗರಿಂದ ಸಂಗ್ರಹವಾಗುತ್ತಿರುವ ಹಣದ ವಾರ್ಷಿಕ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು. ಆ ಮೂಲಕ ಅರಣ್ಯ ಸಚಿವರು ಹಾಗೂ ಶಾಸಕರು ಪಾರದರ್ಶಕತೆಯನ್ನು ಸಾಬೀತುಪಡಿಸಬೇಕು ಎಂದು ಕಂಠಿ ಕಾರ್ಯಪ್ಪ ಆಗ್ರಹಿಸಿದ್ದಾರೆ.








