
ಮಡಿಕೇರಿ ಮೇ 21 NEWS DESK : ನವದೆಹಲಿಯಲ್ಲಿ ಮೇ 24 ರಂದು ನಡೆಯಲಿರುವ ಅಖಿಲ ಭಾರತ ಬುಡಕಟ್ಟು ಜನಾಂಗದ ಬೃಹತ್ ಸಮಾವೇಶದಲ್ಲಿ ಭಾಗವಹಿಸಲು ಕೊಡಗಿನಿಂದ ಹೊರಟ 110 ಗಿರಿಜನ ಪ್ರತಿನಿಧಿಗಳ ಸಭೆಯು ಗೊಣಿಕೊಪ್ಪ ದುರ್ಗಾ ಭೋಜಿ ಹಾಲ್ ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಿರಿಜನ ಸುರಕ್ಷಾ ವೇದಿಕೆ ಕೊಡಗು ಜಿಲ್ಲಾ ಘಟಕದ ಸಂಚಾಲಕರಾದ ಪಣಿಯರವರ ಭಾಗ್ಯ ಮೋಹನ್, ಮಹಾನ್ ಜನನಾಯಕ ಬಿರ್ಸಾ ಮುಂಡಾರವರ 150ನೇ ಜನ್ಮ ಜಯಂತಿ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಲಾಗುತ್ತಿರುವ ಈ ಮಹಾ ಸಂಗಮದಲ್ಲಿ ದೇಶದ ಐದು ನೂರಕ್ಕೂ ಹೆಚ್ಚು ಗಿರಿಜನ ಸಮುದಾಯಗಳಿಂದ ಮೂರು ಲಕ್ಷಕ್ಕೂ ಅಧಿಕ ಗಿರಿಜನ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಕೊಡಗು ಜಿಲ್ಲೆಯ 6 ಗಿರಿಜನ ಜನಜಾತಿಯ 110 ಪ್ರತಿನಿಧಿಗಳು ಸೇರಿದಂತೆ ರಾಜ್ಯದ 1250 ಪ್ರತಿನಿಧಿಗಳು ವಿಶೇಷ ರೈಲಿನ ಮೂಲಕ ದೆಹಲಿಗೆ ತೆರಳುತ್ತಿದ್ದಾರೆ ಎಂದರು. ಗಿರಿಜನ ಸಮುದಾಯಗಳ ಸಾಂಸ್ಕೃತಿಕ ಅಸ್ತಿತ್ವ, ಧಾರ್ಮಿಕ ಪರಂಪರೆ ಹಾಗೂ ಸಾಮಾಜಿಕ ಮಾಲ್ಯಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪರಿಚಯಿಸುವ ಅಪರೂಪದ ಅವಕಾಶ ಇದಾಗಲಿದೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ದೆಹಲಿಯ ಐದು ವಿಭಿನ್ನ ಪ್ರದೇಶಗಳಿಂದ ಭವ್ಯ ಸಾಂಸ್ಕೃತಿಕ ಶೋಭಾಯಾತ್ರೆ ನಡೆಯಲಿದ್ದು, ಗಿರಿಜನ ಬುಡಕಟ್ಟು ಸಮುದಾಯಗಳ ವೈವಿಧ್ಯಮಯ ವೇಷಭೂಷಣ, ಕಲಾ ಪರಂಪರೆ, ಜನಪದ ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನು ದೇಶದ ಮುಂದೆ ತೆರೆದಿಡಲಿದೆ. ಬಳಿಕ ಕೆಂಪು ಕೋಟೆ ಮೈದಾನದಲ್ಲಿ ಶೋಭಾಯಾತ್ರೆ ಒಂದಾಗಲಿದೆ. ನಂತರ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದರು. ಕೇಂದ್ರ ಸಚಿವ ಅಮಿತ್ ಷಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಗಿರಿಜನ ಮುಖಂಡರು, ಚಿಂತಕರು, ಸ್ವಾಮಿಜಿಗಳು, ಕಲಾವಿದರು ಹಾಗೂ ಸಮಾಜದ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಗಿರಿಜನ ಮುಖಂಡರಾದ ಸಿದ್ದಪ್ಪನವರು ಮಾತನಾಡಿ, ಸ್ವಾತಂತ್ರ್ಯ ನಂತರ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಇಷ್ಟೋಂದು ಬೃಹತ್ ಪ್ರಮಾಣದಲ್ಲಿ ಒಂದೆಡೆ ಗಿರಿಜನ ಪ್ರತಿನಿಧಿಗಳು ಸಮಾಗಮವಾಗುತ್ತಿರುವುದು ವಿಷೇಶವಾಗಿದ್ದು, ದೇಶದಲ್ಲಿ ಅಂದಾಜು 700ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರಿದ್ದು ಇವರಲ್ಲಿ ಹಲವರು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸಂಸ್ಕೃತಿ, ಪರಂಪರೆ ಹಾಗೂ ಹಕ್ಕುಗಳ ರಕ್ಷಣೆಗಾಗಿ ಸಂಘಟಿತ ಸಮಾವೇಶದ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನವಾಗಿದೆ ಎಂದು ಹೇಳಿದರು. ಪ್ರಾಂತ ವನವಾಸಿ ಕಲ್ಯಾಣ ಅಧ್ಯಕ್ಷರಾದ ಚಕ್ಕೇರ ಮನು ಕಾವೇರಪ್ಪ ಮಾತನಾಡಿ, ದೆಹಲಿಯ ಸಮಾವೇಶದಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳಿಗೂ ಶುಭ ಹಾರೈಸಿದರು. ಜೇನುಕುರುಬ ಸಮುದಾಯದ ಪ್ರತಿನಿಧಿಗಳಾದ ಆರ್.ಕೆ.ಚಂದ್ರ, ದೇವರಕಾಡು ನಿತ್ಯ, ಸೋಲಿಗರ ಉಮೇಶ್, ಅಂಚೆತಿಟ್ಟು ಸಂಜೀವ, ಮರಾಠಿ ಸಮುದಾಯದ ಪರಮೇಶ್ವರ್, ವಾಲ್ಮೀಕಿ ಸಮುದಾಯದ ಮುತ್ತುರಾಜ್, ಪ್ರಮುಖರಾದ ಅಮ್ಮುಣಿ, ಚೋಮು, ಶಶಿಕಲಾ, ಜಯಲಕ್ಷ್ಮಿ, ಭೋಜ, ರಿಧೀಶ್ ಮತ್ತಿತರರು ಹಾಜರಿದ್ದರು.









