
ಮಡಿಕೇರಿ ಮೇ 23 NEWS DESK : ಸುಂಟಿಕೊಪ್ಪ ಸಮೀಪದ ಹೇರೂರು ಗ್ರಾಮದಲ್ಲಿ ಆದಿವಾಸಿಗಳು ವಾಸವಿರುವ ಪ್ರದೇಶದಲ್ಲಿ ಚರ್ಚ್ ನಡೆಸಲೆಂದು ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆ ವಶಕ್ಕೆ ಪಡೆದು, ಸರಕಾರಿ ಕಾರ್ಯಚಟುವಟಿಕೆಗಳಿಗೆ ಬಳಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದನ್ನು ಸ್ವಾಗತಿಸುವುದಾಗಿ ಹೇರೂರು ಗ್ರಾಮಸ್ಥರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾದ ಪ್ರಮುಖ ಹಾಗೂ ಗ್ರಾಮಸ್ಥ ಚಂದ್ರಶೇಖರ್ ಹೇರೂರು ಅವರು ಅನಾರೋಗ್ಯಪೀಡಿತರಾಗುವ ಆದಿವಾಸಿಗಳನ್ನು ಗುಣಮುಖರನ್ನಾಗಿ ಮಾಡುವ ನೆಪದಲ್ಲಿ ಮನಪರಿವರ್ತಿಸಿ ಮತಾಂತರ ಮಾಡಲಾಗುತ್ತಿದೆ. ಆದಿವಾಸಿಗಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದರಿಂದ ಈ ಭಾಗದಲ್ಲಿರುವ ಹಾಡಿ ಜನರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸಲು ಆಸ್ಪತ್ರೆಯನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು. ಹೇರೂರು ಹಾಡಿಯಲ್ಲಿ 380ಕ್ಕೂ ಹೆಚ್ಚಿನ ಆದಿವಾಸಿಗಳು ನೆಲೆಸಿದ್ದಾರೆ. ಇಲ್ಲಿಗೆ ನಾಕೂರು ಶಿರಂಗಾಲ ಗ್ರಾಮ ಪಂಚಾಯ್ತಿಯಿಂದ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ, ಶೌಚಾಲಯಗಳನ್ನು ಒದಗಿಸಲಾಗಿದೆ. ಇವರುಗಳು ವಾಸಿಸುತ್ತಿರುವ ಪ್ರದೇಶ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದಾಗಿದೆ. ಮುಗ್ಧ ಆದಿವಾಸಿಗಳನ್ನು ಹಣಕಾಸಿನ ನೆರವನ್ನು ನೀಡುವ ಆಮಿಷಗಳನ್ನೊಡ್ಡಿ ಮತಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೆ ಅಲ್ಲಿರುವ ಬಹುತೇಕರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ. ಹೀಗಿದ್ದೂ ಅವರು ಪರಿಶಿಷ್ಟ ಪಂಗಡದ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು. ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು, ಕನಿಷ್ಠ ತಿಂಗಳಿಗೊಮ್ಮೆಯಾದರು ಹಾಡಿಗೆ ಭೇಟಿ ನೀಡಿ, ಅಲ್ಲಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಚರ್ಚ್ಗೆಂದು ಅನಧಿಕೃತವಾಗಿ ನಿರ್ಮಿಸಿದ ಕಟ್ಟಡವನ್ನು ಆಸ್ಪತ್ರೆಯಾಗಿ ಪರಿವರ್ತಿಸಿ ಯೋಗ್ಯ ಆರೋಗ್ಯ ಸೇವೆಯನ್ನು ನೀಡಲು ಮುಂದಾಗಬೇಕೆಂದು ಚಂದ್ರಶೇಖರ್ ಒತ್ತಾಯಿಸಿದರು. ನಾಕೂರು ಶಿರಂಗಾಲ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರು ಹಾಗೂ ಹೇರೂರು ವಿಭಾಗದ ಮಾಜಿ ಸದಸ್ಯ ಜಗನ್ನಾಥ ಎಂ.ಸಿ ಅವರು ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟ ಪ್ರದೇಶದಲ್ಲಿ ಆದಿವಾಸಿ ಕುಟುಂಬಗಳಿಗೆ ಸರಕಾರದಿಂದಲೇ ಮನೆಗಳನ್ನು ನಿರ್ಮಿಸಿ, ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಇಲ್ಲಿನ ಆದಿವಾಸಿಗಳು ಸ್ಥಳೀಯರೊಂದಿಗೆ ಆತ್ಮೀಯ ಒಡನಾಟದಲ್ಲಿದ್ದಾರೆ, ಒಗ್ಗಟ್ಟಿನಿಂದ ಇದ್ದಾರೆ. ಹೀಗಿದ್ದೂ ಆದಿವಾಸಿಗಳ ಮನ ಪರಿವರ್ತಿಸಿ ಮತಾಂತರಕ್ಕೆ ಪ್ರಚೋದಿಸಿದ್ದಾರೆ ಎಂದರು. *ಪೂಜೆ ಮಾಡುತ್ತಿಲ್ಲ* ಹಾಡಿಯ ಬಹುತೇಕ ಆದಿವಾಸಿಗಳು ಪ್ರಸ್ತುತ ಮತಾಂತರಗೊಂಡಿದ್ದು, ಹಿಂದೆ ತಾವು ಅನುಸರಿಸಿಕೊಂಡು ಬರುತ್ತಿದ್ದ ಪ್ರಕೃತಿ ಪೂಜೆ ಪುನಸ್ಕಾರ, ಆಚಾರ ವಿಚಾರಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಗ್ರಾಮದ ಬಸವೇಶ್ವರ ದೇವಸ್ಥಾನದ ಸಾಕಷ್ಟು ಕೆಲಸ ಕಾರ್ಯಗಳನ್ನು ಹಿಂದೆ ಆದಿವಾಸಿಗಳು ನಿರ್ವಹಿಸುತ್ತಿದ್ದರು. ಆದರೆ ಇಂದು ಪೂಜೆಯಲ್ಲಿ ಕೂಡ ಪಾಲ್ಗೊಳ್ಳುತ್ತಿಲ್ಲ, ಮೂಲ ಆಚರಣೆಗಳನ್ನು ಕೈಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಹೇರೂರು ಗ್ರಾಮದ ಅಧ್ಯಕ್ಷ ಬಿ.ಎಸ್.ವಸಂತ, ಗ್ರಾಮಸ್ಥರಾದ ಕೆ.ಎಸ್.ರಮೇಶ್, ಚರಣ್ ತೆಕ್ಕಡೆ ಹಾಗೂ ಗಗನ್ ಮಂದೋಡಿ ಉಪಸ್ಥಿತರಿದ್ದರು.









