
ಸೋಮವಾರಪೇಟೆ ಮೇ 23 NEWS DESK : ಗ್ಯಾರಂಟಿ ಯೋಜನೆಯ ಪ್ರಾಧಿಕಾರ ಸಮಿತಿ ಸಭೆ ಅಧ್ಯಕ್ಷರಾದ ಜಿ.ಎಂ.ಕಾಂತರಾಜು ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ 1032 ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆ ಆಗಿದ್ದು, ಅದರಲ್ಲಿ 261 ಅರ್ಜಿದಾರರು, ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರೆಂದು ಅರ್ಜಿ ಸ್ವೀಕೃತಗೊಂಡಿದೆ. ಇದರ ಪೈಕಿ 102 ಪ್ರಕರಣಗಳನ್ನು ಮರು ಸ್ಥಾಪಿಸಲಾಗಿದೆ. ಉಳಿದ ಪ್ರಕರಣಗಳಿಗೆ ಅಗತ್ಯ ದಾಖಲೆಗಳನ್ನು ಹಾಜರು ಪಡಿಸುವಂತೆ ನೋಟೀಸು ನೀಡಲಾಗಿದೆ ಎಂದು ಆಹಾರ ನಿರೀಕ್ಷಕಿ ಯಶಸ್ವಿನಿ ಸಭೆಗೆ ತಿಳಿಸಿದರು. ವೈದ್ಯಕೀಯ ತುರ್ತು ಚಿಕಿತ್ಸೆಗೆ ಅರ್ಜಿ ಸಲ್ಲಿಸಲು ಹಾಗೂ ಪಡಿತರ ಚೀಟಿ ತಿದ್ದುಪಡಿಗಾಗಿ 2027ರ ಮಾರ್ಚ್ 31ರವರೆಗೆ ಸÀರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಯುವನಿಧಿ ಯೋಜನೆಯಡಿ ಜನವರಿ 2024ರಿಂದ ಫೆಬ್ರವರಿ 2026ರವರೆಗೆ ಒಟ್ಟು 1,64,74,500 ರೂ.ಗಳನ್ನು ಯುವನಿಧಿ ಹಣ ನೀಡಲಾಗಿರುತ್ತದೆ ಎಂದು ಉದ್ಯೋಗಾಧಿಕಾರಿ ಮಂಜುನಾಥ್ ತಿಳಿಸಿದರು. ಗೃಹಲಕ್ಷ್ಮೀ ಯೋಜನೆಯಡಿ ಡಿಸೆಂಬರ್ 2025ರಿಂದ ಫೆಬ್ರವರಿ 2026ರವರೆಗೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿರುತ್ತದೆ. ಮಾರ್ಚ್ 2026ರಿಂದ ಮೇ.2026ರವರೆಗೆ ಪಾವತಿಗೆ ಬಾಕಿ ಇದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುಧೋಳ್ ಸಭೆಗೆ ತಿಳಿಸಿದರು.









