
ಚೆಟ್ಟಳ್ಳಿ ಮೇ 23 NEWS DESK : ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಸುಖ-ಶಾಂತಿ, ನೆಮ್ಮದಿ ಪ್ರಾಪ್ತಿಯಾಗುವುದರೊಂದಿಗೆ ಮನೆಯ ವಾತಾವರಣವು ಬೆಳಗುವುದೆಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಅಭಿಪ್ರಾಯಪಟ್ಟಿದ್ದಾರೆ. ಚೇರಂಬಾಣೆಯ ಬೇಂಗ್ನಾಡ್ ಕೊಡವ ಸಮಾಜದಲ್ಲಿ ಆಯೋಜಿಸಿದ್ದ 10ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಎಂಬುವುದು ಜ್ಞಾನದ ದೀವಿಗೆಯಿದ್ದಂತೆ. ಇದರಿಂದ ಓದುಗರ ಜ್ಞಾನ ವೃದ್ಧಿಸುವುದು. ಕೊಡವರ ವಿಚಾರವಾಗಿ ಕಾವೇರಿ ಪುರಾಣ, ಸ್ಕಂದ ಪುರಾಣಗಳಲ್ಲಿ ಉಲ್ಲೇಖವಿದ್ದು, 2ನೇ ಶತಮಾನದ ತಮಿಳು ಸಂಘದ ಸಾಹಿತ್ಯದಲ್ಲಿಯೂ ಉಲ್ಲೇಖಿಸಲಾಗಿದೆ. ಇಂತಹ ಜನಾಂಗದ ಸಾಹಿತ್ಯ, ಸಂಸ್ಕೃತಿಯ ವಿಚಾರವಾಗಿ ಪ್ರತಿಯೊಬ್ಬರೂ ಅರಿತಿರಬೇಕು. ಮಕ್ಕಳನ್ನು ಕೊಡವಾಮೆಯ ಪಥದಲ್ಲಿ ಬೆಳೆಸುವುದು ಒಂದು ಕರ್ತವ್ಯ ಅಥವಾ ಜವಾಬ್ದಾರಿಯಾಗಿಬಾರದು, ಇದೊಂದು ಜೀವನ ಕ್ರಮವಾಗಿರಬೇಕು ಎಂದರು. ಬಾಲ್ಯದಲ್ಲಿಯೇ ಬಾಳೋಪಾಟ್, ಕೊಡಗಿನ ಚರಿತ್ರೆ, ಪೂರ್ವಜರ ಸಾಧನೆಗಳು ಹಾಗೂ ಸಂಸ್ಕೃತಿಯ ಬಗ್ಗೆ ಅರಿತಿದ್ದರೆ ಭವಿಷ್ಯದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ದಕ್ಷತೆಯ ಬದುಕು ರೂಪುಗೊಳ್ಳಲು ಕಾರಣವಾಗುವುದು. ಬೇಂಗ್ನಾಡ್ ಜನರಲ್ಲಿ ಸಾಹಿತ್ಯದ ಬಗ್ಗೆ ಇರುವ ಒಲವಿಗೆ ಇಲ್ಲಿನ ಕೊಡವ ಸಮಾಜದಲ್ಲಿ ಸ್ಥಾಪನೆಗೊಂಡಿರುವ 10ನೇ ಪುಸ್ತಕ ಪತ್ತಾಯ ಸಾಕ್ಷಿ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು. ಕೊಡಗಿನ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯೇ ಕೊಡವ ಜನಾಂಗದ ಭಾಷೆ, ಸಂಸ್ಕೃತಿಯಿಂದ ಬೆಳೆದುಬಂದಿದ್ದು, ಇಂತಹ ಭಾಷೆ ಹಾಗೂ ಸಾಹಿತ್ಯದ ಮಹತ್ವವನ್ನು ಹೊರಜಗತ್ತಿಗೆ ತೋರಿಸಿಕೊಟ್ಟ ಮಹನೀಯರಲ್ಲಿ ಬ್ರಿಟಿಷ್ ವಿದ್ವಾಂಶ ಬಿ.ಎಲ್.ರೈಸ್, ಜರ್ಮನ್ ಪಾದ್ರಿ ಮೋಗ್ಲಿಂಗ್, ರಾಬರ್ಟ್ ಕಾಲ್ಡ್ವೆಲ್ ಮುಂತಾದವರು ಮುಂಚೀಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅಂತೆಯೇ ಕೊಡವ ಭಾಷೆಯ ವಿಶೇಷತೆಯನ್ನು ಮನಗಂಡು ಹಲವಾರು ಸಂಶೋಧಕರು, ಸಾಹಿತಿಗಳು ಕನ್ನಡ, ಆಂಗ್ಲ ಭಾಷೆಯಲ್ಲಿ ಬರೆದಿರುವ ಕೃತಿಗಳು ಪ್ರತಿಯೊಬ್ಬರ ಮನೆಮನೆಗಳಲ್ಲಿ ಇರುವಂತಾಗಬೇಕಿದೆ. ಕೊಡವ ಪುಸ್ತಕ ಪತ್ತಾಯದಲ್ಲಿ ಇವೆಲ್ಲದರ ಲಭ್ಯತೆಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು. ನಿವೃತ್ತ ಮುಖ್ಯೋಪದ್ಯಾಯರಾದ ಅಯ್ಯಂಡ ರಾಮಕೃಷ್ಣ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪತ್ತಾಯ ಕೇವಲ ಪುಸ್ತಕಗಳ ಭಂಡಾರವಲ್ಲ, ಇದೊಂದು ಜ್ಞಾನ ಭಂಡಾರ. ಸರಸ್ವತಿಯು ನೆಲೆಸುವ ಸ್ಥಳವೆಂದರು. ಕೊಡಗಿನ ಕೃಷಿಗೆ ಸಂಬ0ಧಿಸಿದ0ತೆ ‘ಪತ್ತಾಯ’ವನ್ನು ಭತ್ತದ ದಾಸ್ತಾನಿರಿಸಲು ಬಳಸಲಾಗುತ್ತಿತ್ತು. ಇಂತಹ ಪತ್ತಾಯದಲ್ಲಿ ಭತ್ತವು ಖಾಲಿಯಾಗುತ್ತಿದ್ದರೂ ಪತ್ತಾಯ ಖಾಲಿ ಆಗದಂತೆ ನೋಡಿಕೊಳ್ಳುತ್ತಿದ್ದರು. ಅದು ಧಾನ್ಯಲಕ್ಷ್ಮೀಯ ತಾಣವಾಗಿತ್ತು. ಅದರಂತೆ ಅಕಾಡೆಮಿಯ ಪತ್ತಾಯವು ಸರಸ್ವತಿ ನೆಲೆಸಿರುವ ತಾಣವಾಗಿದೆ. ಇಲ್ಲಿ ಜ್ಞಾನವು ವೃದ್ಧಿಸುತ್ತಲೇ ಇರುತ್ತದೆ. ಇಂತಹ ಪತ್ತಾಯವು ಪ್ರತಿಯೊಂದು ಸಮಾಜದಲ್ಲಿ, ಐನ್ಮನೆಗಳಲ್ಲಿ, ಪುಸ್ತಕ ಪ್ರೇಮಿಗಳ ಮನೆಮನೆಗಳಲ್ಲಿ ಸ್ಥಾಪನೆಗೊಂಡಷ್ಟು ಸಮಾಜದಲ್ಲಿ ಜ್ಞಾನ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಅಕಾಡೆಮಿ ಅಧ್ಯಕ್ಷರಾದ ಮಹೇಶ್ ನಾಚಯ್ಯ ಹಾಗೂ ಸದಸ್ಯರ ಈ ಒಂದು ವಿನೂತನ ಯೋಜನೆಯು ಮಹತ್ವದ್ದಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಕೊಡವ ಭಾಷೆಯಲ್ಲಿ ಮೊಟ್ಟಮೊದಲಿಗೆ ಕೊಡಗಿನ ಆದಿಕವಿ ಅಪ್ಪನೆರವಂಡ ಅಪ್ಪಚ್ಚ ಕವಿಗಳ ನಾಲ್ ನಾಟಕ, ನಡಿಕೇರಿಯಂಡ ಚಿಣ್ಣಪ್ಪರ ಪಟ್ಟೋಲೆ ಪಳಮೆ, ತದನಂತರ ಮಂಡಿರ ಜಯಾ ಅಪ್ಪಣ್ಣ ವಿರಚಿತ ಭಾಮಿನಿ ಷಟ್ಪದಿಯಲ್ಲಿರುವ ಮೇರುಕೃತಿ ‘ಜಯಾ ಭಾರತ’, ಡಿ.ಎನ್. ಕೃಷ್ಣಯ್ಯ ವಿರಚಿತ ಕೊಡಗಿನ ಇತಿಹಾಸವನ್ನು ಅಜ್ಜಿನಿಕಂಡ ಪ್ರಮೀಳ ನಾಚಯ್ಯ ತರ್ಜುಮೆಗೊಳಿಸಿದ ‘ಕೊಡಗ್ರ ಇತಿಹಾಸ’, ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಪಿ. ಅಪ್ಪಣ್ಣ, ನಾಗೇಶ್ ಕಾಲೂರರು ಸೇರಿದಂತೆ ಹಲವು ಸಾಹಿತಿಗಳ ಪುಸ್ತಕಗಳು ಕೊಡವ ಭಾಷೆಯಲ್ಲಿರುವುದು ಕೊಡವ ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆಯಾಗಿದೆ ಎಂದು ಹಲವರ ಸಾಹಿತ್ಯ ಕೃಷಿಯನ್ನು ಸ್ಮರಿಸಿದ ಅಯ್ಯಂಡ ರಾಮಕೃಷ್ಣರು, ಕೊಡವ ಭಾಷೆ-ಸಾಹಿತ್ಯ ಹಾಗೂ ಈ ನೆಲ-ಜಲದ ರಕ್ಷಣೆ-ಪೋಷಣೆ ಹಾಗೂ ಬೆಳವಣಿಯಲ್ಲಿ ಕೊಡವ ಪತ್ರಿಕೆಗಳ ಕೊಡುಗೆ ಮಹತ್ವದ್ದಾಗಿದೆ ಎಂದರು. ಕೊಡವ ಭಾಷೆಯಲ್ಲಿ ತನ್ನದೇ ಆದ ಹಲವು ಶಬ್ದಗಳಿದ್ದು ಅಂತಹವುಗಳ ಸದ್ಬಳಕೆ ಆಗಬೇಕಾಗಿದೆ. ಅವೆಲ್ಲವೂ ಪುಸ್ತಕಗಳ ಓದಿನಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಬೇಂಗ್ನಾಡ್ ಕೊಡವ ಸಮಾಜ ಅಧ್ಯಕ್ಷರಾದ ಬಾಚರಣಿಯಂಡ ದಿನೇಶ್ ಗಣಪತಿ ತಮ್ಮ ನುಡಿಗಳಲ್ಲಿ, ಕೊಡವ ಸಾಹಿತ್ಯ ಅಕಾಡೆಮಿಯಿಂದ ಸರಾಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು, ಪುಸ್ತಕ ಪತ್ತಾಯವು ಅಗ್ರಸ್ಥಾನದ್ದಾಗಿದೆ. ಬೇಂಗ್ನಾಡ್ ಕೊಡವ ಸಮಾಜದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದ ಪ್ರಯೋಜನವನ್ನು ಈ ನಾಡಿನ ಜನತೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯತೆಯೊಂದಿಗೆ ನಾಳಿನ ಒಳ್ಳೆಯ ಭವಿಷ್ಯಕ್ಕೆ ನಾಂದಿಯಾಗಿದೆ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆಗೆ ಸಾಹಿತ್ಯದ ಜ್ಞಾನ ಅವಶ್ಯವಿದ್ದು, ಉತ್ತಮ ಸಮಾಜ ನಿರ್ಮಾಣವನ್ನು ಇಂತಹ ಯೋಜನೆಯಿಂದ ಕಾಣಲು ಅನುವು ಮಾಡಿಕೊಟ್ಟಿರುವ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯರ ಸಮಾಜಮುಖಿ ಚಿಂತನೆ ಅಭಿನಂದನಾರ್ಹ ಎಂದರು. ನಿವೃತ್ತ ಶಿಕ್ಷಕಿ ಬಡ್ಡಿರ ನಳಿನಿ ಪೂವಯ್ಯ ಮಾತನ್ನಾಡಿ, ಪುಸ್ತಕ ಪತ್ತಾಯದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರರ ‘ಚಿಕ್ಕ ವೀರರಾಜೇಂದ್ರ’, ಐ.ಮಾ.ಮುತ್ತಣ್ಣರ ಕೃತಿಗಳು ಲಭ್ಯವಿರುವಂತಾದರೆ ಒಳ್ಳೆಯದು. ನಾನೂ ಓರ್ವ ಪುಸ್ತಕ ಪ್ರೇಮಿಯಾಗಿದ್ದು, ನಮ್ಮ ಸ್ವಗೃಹದಲ್ಲಿ ಒಂದು ಕೊಡವ ಪುಸ್ತಕ ಪತ್ತಾಯವನ್ನು ತೆರೆದುಕೊಳ್ಳಲು ಆಕಾಂಕ್ಷಿಯಾಗಿದ್ದೇನೆ ಎಂದರು.
ಈ ವೇಳೆ ನಾಪಂಡ, ಚೀಯಬೆರ, ಕೊಟ್ಟ್ಕತ್ತಿರ, ಮಣವಟ್ಟಿರ, ತೇಲಪಂಡ ಕುಟುಂಬಗಳಿಗೆ ಸಂಬ0ಧಪಟ್ಟ ಕುಟುಸ್ಥರ ಆಗಮನದಲ್ಲಿ ದುಡಿಗಳನ್ನು ವಿತರಿಸಲಾಯಿತು. ಕೊಡವ ಪುಸ್ತಕ ಪತ್ತಾಯ ಸ್ಥಾಪನೆಯ ಪ್ರಯುಕ್ತ ಹತ್ತು ಸಾವಿರ ಮೊತ್ತದ ಚೆಕ್ಕನ್ನು ಅಕಾಡೆಮಿ ಅಧ್ಯಕ್ಷರಿಗೆ ನೀಡಿದ ಮೇರೆಗೆ ಪತ್ತಾಯದ ನೋಂದಣಿ ಪತ್ರವನ್ನು ಬೇಂಗ್ನಾಡ್ ಕೊಡವ ಸಮಾಜ ಅಧ್ಯಕ್ಷರಿಗೆ ನೀಡಲಾಯಿತು. ಮೊದಲಿಗೆ ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ್ ಅತಿಥಿಗಳನ್ನು ಸ್ವಾಗತಿಸಿದರು. ಬೇಂಗ್ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸದಸ್ಯರು ಪ್ರಾರ್ಥಿಸಿದರು. ಅಕಾಡೆಮಿಯ ಸದಸ್ಯರುಗಳಾದ ಕಂಬೆಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕುಡಿಯರ ಎಂ. ಕಾವೇರಪ್ಪ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ಬೇಂಗ್ನಾಡ್ ತಕ್ಕರಾದ ತೇಲಪಂಡ ನಂದ, ಸಮಾಜ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಪೊಮ್ಮಕ್ಕಡ ಕೂಟದ ಸದಸ್ಯೆಯರು ಹಾಜರಿದ್ದು ನಾಪಂಡ ಸಿ. ಗಣೇಶ್ ವಂದಿಸಿದರು.
ವರದಿ : ಕರುಣ್ ಕಾಳಯ್ಯ









