
ಮಡಿಕೇರಿ ಮೇ 26 NEWS DESK : ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಮಡಿಕೇರಿ ನಗರಸಭೆಯ ಬಿಜೆಪಿ ಆಡಳಿತ ಮಂಡಳಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಜನಸಾಮಾನ್ಯರನ್ನು ವಂಚಿಸಿರುವುದಾಗಿ ಆರೋಪಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಎಸ್.ಪ್ರಕಾಶ್ ಆಚಾರ್ಯ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಟಿ.ಪಿ.ರಮೇಶ್ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ನಗರಸಭಾ ಕಚೇರಿಯವರೆಗೆ ಕಾಂಗ್ರೆಸ್ ಪ್ರಮುಖರು ಮತ್ತು ಸದಸ್ಯರು ಷೆÉೂೀಷಣೆಗಳ ಸಹಿತ ಪ್ರತಿಭಟನೆ ನಡೆಸಿ, ತಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆಯ ಮುಂಭಾಗ ಕೆಲ ಕಾಲ ಪ್ರತಿಭಟನೆ ನಡೆದ ಬಳಿಕ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಆಡಳಿತ ಪಕ್ಷದೊಳಗಿನ ಹೊಂದಾಣಿಕೆಯ ಕೊರತೆಯಿಂದ ಮಡಿಕೇರಿ ನಗರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.ಉತ್ತಮ ಆಡಳಿತದ ನಿರೀಕ್ಷೆಯಲ್ಲಿ ಬಹುಮತ ನೀಡಿದ ಜನರಿಗೆ ಬಿಜೆಪಿ ಮೋಸ ಮಾಡಿದೆ ಎಂದು ಆರೋಪಿಸಿದರು. ಮಡಿಕೇರಿ ಕ್ಷೇತ್ರದ ಶಾಸಕರು ಒದಗಿಸಿರುವ ವಿಶೇಷ ಅನುದಾನದಿಂದಷ್ಟೆ ನಗರದಲ್ಲಿಂದು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಮುಂಗಾರು ಸಮೀಪಿಸಿದರೂ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ತಡೆಗೋಡೆ ಮತ್ತು ರಸ್ತೆಗಳ ಕಾಮಗಾರಿ ಆರಂಭಗೊಂಡಿಲ್ಲ.ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಈ ಯಾವುದೇ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಬಿಜೆಪಿ ಆಡಳಿತ ಯಾವುದೇ ಪ್ರಯತ್ನವನ್ನು ನಡೆಸುತ್ತಿಲ್ಲ. ಮುಂಬರುವ ನಗರಸಭಾ ಚುನಾವಣೆಯಲ್ಲಿ ಇವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ಸ್ಪಷ್ಟಪಡಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಟಿ.ಪಿ.ರಮೇಶ್ ಮಾತನಾಡಿ, ಮಡಿಕೇರಿ ನಗರಸಭೆಯಲ್ಲಿ ಬಿಜೆಪಿಯ ಈ ಆಡಳಿತದ ಅವಧಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಜನಸಾಮಾನ್ಯರ ಅಗತ್ಯ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯದೆ ಅಭಿವೃದ್ಧಿ ಹೀನ ಪರಿಸ್ಥಿತಿಯನ್ನು ಕಾಣುತ್ತಿರುವುದಾಗಿ ತೀಕ್ಷ್ಣವಾಗಿ ನುಡಿದರು. ಮಳೆಗಾಲಕ್ಕೂ ಮುನ್ನ ನಡೆಯಬೇಕಾಗಿರುವ ತೋಡು ಮತ್ತು ಚರಂಡಿಗಳ ಸ್ವಚ್ಛತಾ ಕಾರ್ಯ ಇನ್ನೂ ನಡೆದಿಲ್ಲ. ಜಲ್ ಜೀವನ್ ಮಿಷನ್ ಯೋಜನೆಯಿಂದ ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಗಳನ್ನು ಸರಿಪಡಿಸಿಲ್ಲ. ನಗರಸಭೆಯ ಕಚೇರಿಯಲ್ಲಿ ಫಾರಂ ನಂ.3 ಸೇರಿದಂತೆ ಯಾವುದೇ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲವೆಂದು ಆರೋಪಿಸಿ, ಬಿಜೆಪಿ ಆಡಳಿತ ತನ್ನ ಧೋರಣೆಗಳನ್ನು ಬದಲಿಸಿಕೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮತ್ತಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗೆ ಇಳಿಯಲಿದೆಯೆಂದು ಎಚ್ಚ್ಚರಿಕೆಯನ್ನಿತ್ತರು. : ಪೌರಾಯುಕ್ತರಿಗೆ ಮನವಿ ಸಲ್ಲಿಕೆ : ಪ್ರತಿಭಟನೆಯ ಬಳಿಕ ಪೌರಾಯುಕ್ತ ರಮೇಶ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಮನವಿಯಲ್ಲಿ ಪ್ರಮುಖವಾಗಿ ಬಡವರ್ಗದ ಮಂದಿಗೆ ನಿವೇಶನ ನೀಡುವಲ್ಲಿ ಬಿಜೆಪಿ ಆಡಳಿತ ವಿಫಲವಾಗಿದೆ, ಯಾವುದೇ ವಾರ್ಡ್ನಲ್ಲಿ ತಡೆಗೋಡೆ ನಿರ್ಮಾಣವಾಗದಿರುವುದು, ನಗರದ ಕಸವನ್ನು ಸ್ಟೋನ್ ಹಿಲ್ನ ತ್ಯಾಜ್ಯ ವಿಲೇವಾರಿ ಜಾಗದ ಬದಲಾಗಿ ಸುಬ್ರಹ್ಮಣ್ಯ ನಗರದ ಮಳ್ಭಾಗದಲ್ಲಿ ಸುರಿಯುತ್ತಿರುವ ಬಗ್ಗೆ, ಅಸಮರ್ಪಕ ಬೀದಿ ದೀಪಗಳ ಬಗ್ಗೆ ಪ್ರಸ್ತಾಪಿಸಲಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್, ಉಪಾಧ್ಯಕ್ಷರುಗಳಾದ ಸದಾ ಮುದ್ದಪ್ಪ, ಮುನೀರ್ ಮಾಚರ್, ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಜಯಂತಿ ಶೆಟ್ಟಿ, ಉದಯ ಕುಮಾರ್, ಪ್ರಮುಖರಾದ ಮಿನಾಜ್ó ಪ್ರವೀಣ್, ಕೆ.ಜಿ.ಪೀಟರ್, ಚಂದ್ರಶೇಖರ್, ಪ್ರತಿಭಟನೆಯನ್ನು ಬೆಂಬಲಿಸಿದ ಕೊಡಗು ಅಭಿವೃದ್ಧಿ ಸಮಿತಿಯ ಪ್ರಸನ್ನ ಭಟ್ ಮೊದಲಾದವರು ಪಾಲ್ಗೊಂಡಿದ್ದರು.









