

ಮಡಿಕೇರಿ NEWS DESK ಮೇ 28 : ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕನಿಷ್ಠ ವೇತನಕ್ಕೆ ವೈಜ್ಞಾನಿಕ ರೂಪದ ನಿಯಮ ಜಾರಿಗೆ ತರಬೇಕು ಮತ್ತು ಕೇಂದ್ರ ಸರಕಾರ ಅನುಷ್ಠಾನಗೊಳಿಸುತ್ತಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ತಡೆದು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಮೇ 30 ರಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನ ಕೊಡಗು ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಚಲೋ ಹೋರಾಟವನ್ನು ರೂಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ಅವರು ರಾಜ್ಯದಲ್ಲಿ ಬೃಹತ್ ಸಂಖ್ಯೆಯಲ್ಲಿರುವ ಸಂಘಟಿತ, ಅಸಂಘಟಿತ ಮತ್ತು ಯೋಜನಾ ಕಾರ್ಮಿಕರ ಬದುಕನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಕೇಂದ್ರ ಸರಕಾರ ಜಾರಿಗೆ ತರುತ್ತಿರುವ 4 ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಸಂವಿಧಾನ ನೀಡಿರುವ ಅಧಿಕಾರವನ್ನು ರಾಜ್ಯ ಸರಕಾರ ಬಳಸಿಕೊಂಡು ಇದನ್ನು ತಡೆಯಬೇಕು. ಆ ಮೂಲಕ ಸೂಕ್ತ ತಿದ್ದುಪಡಿಗಳೊಂದಿಗೆ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು. ಏಪ್ರಿಲ್ 2025ರಲ್ಲಿ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಲಾಗಿದ್ದರೂ, ಇಲ್ಲಿಯವರೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ರಾಜ್ಯದಲ್ಲಿನ ಕಾರ್ಮಿಕರಿಗೆ ನೀಡಬೇಕಾದ ವೈಜ್ಞಾನಿಕ ರೂಪದ ಕನಿಷ್ಠ ವೇತನವನ್ನು ಅಂತಿಮಗೊಳಿಸಿಲ್ಲ. 2017ರ ನಂತರ 9 ವರ್ಷಗಳಿಂದ ಪುನರ್ವಿಮರ್ಶೆಯಾಗದಿರುವ ಕನಿಷ್ಠ ವೇತನವನ್ನು ಪೂರ್ವಾನ್ವಯವಾಗುವಂತೆ, ತುಟ್ಟಿಭತ್ಯೆಯೊಂದಿಗೆ, ವಲಯ 3ರಲ್ಲಿನ ಅಕುಶಲ ಕಾರ್ಮಿಕರಿಗೆ ಮಾಸಿಕ ರೂ.31 ಸಾವಿರದಂತೆ ನಿಗದಿ ಮಾಡಬೇಕು. ಪ್ರಕಟಿತ ಕನಿಷ್ಠ ವೇತನಕ್ಕಿಂತಲೂ ಕಡಿಮೆ ವೇತನ ಪಡೆಯುವ ಸರಕಾರಿ, ಖಾಸಗಿ ವಲಯಗಳಲ್ಲಿ, ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ನೌಕರರು ಹಾಗೂ ಎಲ್ಲಾ ಸ್ವರೂಪದ ಬಾಹ್ಯಮೂಲ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕರ ಪರವಾಗಿ ರಾಜ್ಯ ಸರಕಾರದ ತಿದ್ದುಪಡಿಗಳ ನಂತರವೇ ನಿಯಮಾವಳಿಗಳನ್ನು ರೂಪಿಸಿ ಜಾರಿಗೆ ತರಬೇಕು. ಖಾಯಂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಮೂಲಕ ಹಾಗೂ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊoಡು ಶನಿವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪಿ.ಆರ್.ಭರತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಅಧ್ಯಕ್ಷ ಎ.ಸಿ.ಸಾಬು, ಉಪಾಧ್ಯಕ್ಷ ಕೆ.ಕೆ.ಹರಿದಾಸ್, ಸರಕಾರಿ ಆಸ್ಪತ್ರೆ ಸ್ವಚ್ಛತಾ ನೌಕರರ ಸಂಘದ ಅಧ್ಯಕ್ಷೆ ಹೆಚ್.ಕೆ.ಜಾನಕಿ, ಗ್ರಾ.ಪಂ ನೌಕರರ ಸಂಘದ ಕುಶಾಲನಗರ ತಾಲ್ಲೂಕು ಕಾರ್ಯದರ್ಶಿ ಹೆಚ್.ಎಂ.ದಿನೇಶ್, ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ಪ್ರಮುಖರಾದ ಇಂದಿರಾ ಕೆ.ಸಿ ಉಪಸ್ಥಿತರಿದ್ದರು.








