
ವಿರಾಜಪೇಟೆ ಮೇ 29 NEWS DESK : ಅನ್ಯ ಭಾಷೆ ಹೊಂದಿರುವ ಮಕ್ಕಳಲ್ಲಿ ಬೋಧಕರು ನೈಜ ಭಾಷೆಯ ಮನೋಭಾವನೆ ಬರುವಂತೆ ನೋಡಿಕೊಂಡು ಬೋಧಿಸಬೇಕಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆ ಕಾವೇರಿ ಕಾಲೇಜು ಹಾಗೂ ದಲಿತ ಸಾಹಿತ್ಯ ಪರಿಷತ್ ನುಡಿ ಉತ್ಸವ ಮತ್ತು ಕೊಡಗು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗಡಿ ಪ್ರದೇಶಗಳ ಪಠ್ಯ ಕ್ರಮದಲ್ಲಿ ಕನ್ನಡ ಭಾಷ ನೀತಿ ಹಾಗೂ ಬಹುಭಾಷ ವಾಸ್ತವಿಕತೆಗಳ ಮರುಚಿಂತನೆ ಎನ್ನುವ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಕನ್ನಡ ಭಾಷೆ ಸಾವಿರಾರು ವರ್ಷದ ಇತಿಹಾಸ ಇರುವ ಭಾಷೆ. ಇದಕ್ಕೆ 2008 ರಲ್ಲಿ ಶಾಸ್ತ್ರೀಯ ಸ್ಥಾನ ಬಂದಿರುವುದು ಹೆಮ್ಮೆ ಗೌರವ ಎಂದು ಹೇಳಿಕೊಂಡರೆ ಸಾಲದು. ಈ ಪುರಾತನ ಭಾಷೆಯಲ್ಲಿ ಸಾಹಿತ್ಯ, ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ ಆಳವಾಗಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸ ಆಗಬೇಕು. ಇಂದು ಆಯೋಜಿಸಿರುವ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮವಲ್ಲ. ಇದು ನಮ್ಮ ಸಾಹಿತ್ಯ ಪರಂಪರೆ ಸಂಸ್ಕೃತಿ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ವಿಚಾರ ಸಂಕಿರಣವಾಗಿದೆ ಎಂದರು. ನುಡಿ ಎನ್ನುವುದು ನಮ್ಮ ನಮ್ಮ ಸಂಕೇತ ಅದು ಸಂಸ್ಕೃತಿ ಪರಂಪರೆ ಮೌಲ್ಯಗಳನ್ನು ತಾರಕಕ್ಕೆ ಕೊಂಡ್ಯೊಯುತ್ತದೆ. ನಮ್ಮ ಎಲ್ಲಾ ವಿದ್ಯಾಲಯದ ಕನ್ನಡ ಪ್ರಾಧ್ಯಪಕರು ಈ ರೀತಿಯ ಕಾರ್ಯಕ್ರಮ ಆಯೋಜಿಸಿದರೆ ನಮ್ಮ ಪರಂಪರೆ ಪದ್ದತಿಯನ್ನು ಬಿಂಬಿಸಲು ಸಹಕಾರಿಯಾಗುತ್ತದೆ. ಕೊಡಗು ಎರಡು ರಾಜ್ಯವನ್ನು ಬೆಸೆಯುವ ಮತ್ತು ಭಾಷೆಯ ಸಂಗಮ ಭೂಮಿಯಾಗಿದೆ. ಈ ಸಂಸ್ಕೃತಿಯ ಸಂದ್ಯ ಜಾಗದಲ್ಲಿ ಸಹಬಾಳ್ವೆಯನ್ನು ಅರ್ಥಪೂರ್ಣವಾಗಿ ಕಟ್ಟಿ ಕೊಡುವ ಸಾಮರ್ಥ್ಯ ಕನ್ನಡಕ್ಕೆ ಇದೆ. ಜೊತೆಗೆ ನಮ್ಮ ರಾಜ್ಯದಲ್ಲಿ ಕನ್ನಡದಲ್ಲಿ ವೈವಿದ್ಯಮಯ ಭಾಷೆಗಳಿದ್ದು ಅದನ್ನು ಅರಿತು ಬೋಧಕರು ಬೋಧಿಸಬೇಕು .ಕನ್ನಡ ಭಾಷೆಯನ್ನು ಬಲ ಪಡಿಸುವುದೆಂದರೆ ಅದು ಬೇರೆ ಭಾಷೆಯನ್ನು ವಿರೋಧಿಸುವುದಲ್ಲ. ಅನ್ಯ ಭಾಷೆಯನ್ನು ಗಡಿನಾಡಿನಲ್ಲಿ ಪಠ್ಯದಲ್ಲಿ ಸೇರಿಸಬೇಕು, ಬದಲಾವಣೆ ಆಗಬೇಕು ಎಂಬ ವಿಚಾರ ಸಂಕಿರಣದಲ್ಲಿ ಮೂಡಿ ಬರುವ ಚಿತಂನೆಯನ್ನು ಕಾರ್ಯರೂಪಕ್ಕೆ ತರಬೇಕು. ಗಡಿಯಲ್ಲಿ ವಿಭಿನ್ನ ಭಾಷೆಯ ಮಕ್ಕಳಿರುತ್ತಾರೆ. ಕಲಿಕೆಗೆ ಯಾವ ಭಾಷೆ ಎನ್ನುವ ಗೊಂದಲ ಇರುತ್ತದೆ. ಅಗತ್ಯ ಭಾಷೆ ಕಲಿಕೆಗೆ ನಾವು ಅವಕಾಶ ಮಾಡಿಕೊಡಬೇಕು. ಬಹು ಭಾಷೆಯಲ್ಲಿ ತರಗತಿಯನ್ನು ನಿಭಾಯಿಸುವ ಜವಬ್ದಾರಿ ಶಿಕ್ಷಕರದ್ದಾಗಿದೆ ಎಂದು ಡಾ ಅಶೋಕ ಸಂಗಪ್ಪ ಆಲೂರ ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ದ ಸಾ ಪ ನುಡಿ ಉತ್ಸವ ಸಮಿತಿ ಅಧ್ಯಕ್ಷ ಅರ್ಜುನ್ ಮೌರ್ಯ, ಕಳೆದ ನವೆಂಬರ್ ನಿಂದ ಈ ಸಾಲಿನ ನವಂಬರ್ ವರಗೆ 19 ಕಾರ್ಯಕ್ರಮ ನಡೆಸುವ ಉದ್ದೇಶ ಇದ್ದು 4 ಸಾರ್ವಜನಿಕ ಮತ್ತು ಉಳಿದವು ಕಾಲೇಜು ಮಟ್ಟದಾಗಿದೆ.ಇಲ್ಲಿ ಗಡಿನಾಡಿನಲ್ಲಿ ಪಠ್ಯ ಕ್ರಮದಲ್ಲಿ ಕನ್ನಡ ಉಪನ್ಯಾಸಕರು ಬೋಧಕರು ಅನ್ಯ ಭಾಷಿಕರಿಗೆ ಬೋಧನೆಯಲ್ಲಿ ಬದಲಾವಣೆ ಅಗತ್ಯ ಮತ್ತು ಈ ನಿಟ್ಟಿನಲ್ಲಿ ಬದಲಾವಣೆಯ ಆಗತ್ಯ ಏಕೆ ಎಂಬುದರ ಕುರಿತು ಚರ್ಚಿಸಲು ಇಂದಿನ ಈ ಸಂಕಿರಣ ಆಯೋಜಿಸಲಾಗಿದೆ. ಈ ಚರ್ಚೆ ಮೂಲಕ ಪಠ್ಯದಲ್ಲಿನ ಬದಲಾವಣೆ ಬಗ್ಗೆ ಸರಕಾರದ ಮಟ್ಟಕ್ಕೂ ತಲುಪಿಸುವ ಉದ್ದೇಶವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ವಿದ್ಯಾ ಸಂಸ್ಥೆ ಗೋಣಿಕೊಪ್ಪ ಇದರ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ ಮಾತನಾಡಿದರು. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ ಕೆ.ಜಿ.ವೀಣಾ ಉಪಸ್ಥಿತರಿದ್ದರು. ವಿರಾಜಪೇಟೆ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಇಂದಿನ ವಿಚಾರ ಸಂಕಿರಣದ ಆಯೋಜಕರಾದ ಬಿ ಬಿ ಸುನಿಲ್ ಕುಮಾರ್ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಪವಿತ್ರ ನಿರೂಪಿಸಿದರು. ಗೋಣಿಕೊಪ್ಪ ಕಾವೇರಿ ಕಾಲೇಜಿನ ಕನ್ನಡ ಉಪನ್ಯಾಸಕ ಲೆ ಡಾ ಅಕ್ರಮ್ ವಂದಿಸಿದರು. ಈ ಸಂದರ್ಭದಲ್ಲಿ ಕಾವೇರಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರುಗಳು,ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಪ್ರಾದ್ಯಾಪಕರು, ಶಿಕ್ಷಕರು,ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.








