
ಮಡಿಕೇರಿ NEWS DESK ಮೇ 31 : ಅಕ್ರಮ ಮತದಾರರ ಗುರುತಿನ ಚೀಟಿಗಳನ್ನು ರದ್ದುಗೊಳಿಸಲು ‘ವಿಶೇಷ ತೀವ್ರ ಪರಿಷ್ಕರಣೆ’ ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಸ್ಥಳೀಯ ಆದಿಮಸಂಜಾತ ಕೊಡವರ ಚುನಾವಣಾ ಹಕ್ಕುಗಳ ರಕ್ಷಣೆ ಮಾಡಬೇಕು, 2027ರ ಜನಗಣತಿ ಹಾಗೂ ರಾಷ್ಟ್ರೀಯ ಜಾತಿ ಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಒದಗಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜೂ.3 ರಂದು ಮಡಿಕೇರಿಯಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸಲಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೆಳಿಗ್ಗೆ 10.30 ಗಂಟೆಗೆ ಸತ್ಯಾಗ್ರಹ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಗೃಹ ಸಚಿವರು, ಅಧ್ಯಕ್ಷರು, ಜನಸಂಖ್ಯಾ ಬದಲಾವಣೆ ಕುರಿತ ಉನ್ನತ ಮಟ್ಟದ ಸಮಿತಿ (High Level Committee on Demographic Change ) (H-LCDC), ಭಾರತ ಸರ್ಕಾರ, ನವದೆಹಲಿ, ಜನಗಣತಿ ಆಯುಕ್ತರು ಹಾಗೂ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಮತದಾರರ ಪಟ್ಟಿಯಲ್ಲಿ ಸಂಶಯಾಸ್ಪದ ಪೌರತ್ವ ಹೊಂದಿ ವವರನ್ನು ಸೇರ್ಪಡೆಗೊಳಿಸುತ್ತಿರುವುದರಿಂದ ಕೊಡವ ಭೂಮಿಯು ದೊಡ್ಡ ಪ್ರಮಾಣದ ಜನಸಂಖ್ಯಾ ಬದಲಾವಣೆಯನ್ನು ಎದುರಿಸುತ್ತಿದೆ. ಈ ಅಕ್ರಮ ಮತದಾರರ ಗುರುತಿನ ಚೀಟಿಗಳೇ ಕೊಡವರ ರಾಜಕೀಯ ಅಸ್ತಿತ್ವದ ವಿರೂಪಕ್ಕೆ ಮೂಲ ಕಾರಣವಾಗಿದೆ. ಆದ್ದರಿಂದ ಪ್ರತಿಯೊಬ್ಬ ಮತದಾರನನ್ನು ಭೌತಿಕವಾಗಿ ಪರಿಶೀಲಿಸಲು ಕೊಡಗು ಜಿಲ್ಲೆಯಲ್ಲಿ ಬೂತ್ ಮಟ್ಟದ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆಸಬೇಕು. ಕೊಡವ ಭೂಮಿಯ ಮಣ್ಣಿಗೆ ಸಂಬಂಧಿಸಿದ 1971ರ ಪೂರ್ವದ ಸಿಂಧು ಪೌರತ್ವ/ಪೂರ್ವಜರ ದಾಖಲೆಗಳನ್ನು ಸಲ್ಲಿಸಲು ವಿಫಲರಾಗುವ ಎಲ್ಲಾ ಅಕ್ರಮ ಮತದಾರರನ್ನು ತಕ್ಷಣವೇ ಪಟ್ಟಿಯಿಂದ ಕೈಬಿಡಬೇಕು. ಅಕ್ರಮ ಮತದಾರರನ್ನು ಸೇರಿಸಲು ನೆರವಾದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ವಿರುದ್ಧ ಕಠಿಣ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಬೇಕು. ಸ್ಥಳೀಯ ಆದಿಮಸಂಜಾತ ಕೊಡವರ ಹೆಸರುಗಳ ರದ್ಧತಿಯನ್ನು ತಡೆಗಟ್ಟುವುದು ಮತ್ತು ಅವರ ಕಾನೂನುಬದ್ಧತೆಯನ್ನು ದೃಢೀಕರಿಸಬೇಕು. ವಲಸೆ, ಉದ್ಯೋಗ ಮತ್ತು ಭೂ ದಾಖಲೆಗಳ ಕೊರತೆಯಿಂದಾಗಿ, ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ನೈಜ ಕೊಡವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವ ಹುನ್ನಾರ ನಡೆಯುವ ಸಂಭವ ಹೆಚ್ಚಾಗಿದೆ. ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಅಡಿಯಲ್ಲಿ ‘ವಿಶೇಷ ಕೊಡವ ಪರಿಶೀಲನಾ ಕೋಶ’ವನ್ನು ಸ್ಥಾಪಿಸಬೇಕು. ಈ ಕೋಶವು ವಂಶಾವಳಿ, ಕುಟುಂಬ-ಒಕ್ಕ, ಮನೆ-ಪೆದ, ಕುಲದ ದಾಖಲೆಗಳು ಮತ್ತು ಸಮುದಾಯದ ದೃಢೀಕರಣದ ಆಧಾರದ ಮೇಲೆ ನೈಜ ಕೊಡವ ಮತದಾರರನ್ನು ಗುರುತಿಸಬೇಕು. ಸೂಕ್ತ ಭೌತಿಕ ಪರಿಶೀಲನೆ ಮತ್ತು ವಿಚಾರಣೆಗೆ ಅವಕಾಶ ನೀಡದೆ ಯಾವುದೇ ಕಾರಣಕ್ಕೂ ಒಬ್ಬನೇ ಒಬ್ಬ ಕೊಡವ ಮತದಾರನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬಾರದು. 2027ರ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಂ ಕೊಡವರು ಪ್ರತ್ಯೇಕ ಆದಿಮಸಂಜಾತ ಏಕ-ಜನಾಂಗೀಯ ಪ್ರಜಾಸಮೂಹವಾಗಿದ್ದು, ಅವರು ಯಾವುದೇ ಇತರ ಗುಂಪಿನ ಉಪಜಾತಿಯಲ್ಲ. ಮುಂಬರುವ 2027 ರ ರಾಷ್ಟ್ರೀಯ ಜನಗಣತಿ ಮತ್ತು ರಾಷ್ಟ್ರೀಯ ಜಾತಿ ಗಣತಿಯಲ್ಲಿ “ಕೊಡವ” ಜನಾಂಗಕ್ಕೆ ಪ್ರತ್ಯೇಕ ಕೋಡ್ ಮತ್ತು ಕಾಲಂ ನೀಡಬೇಕು. ಭಾರತದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರು ಕೊಡವರ ಪಾರಂಪರಿಕ ವಂಶಾವಳಿ ಮತ್ತು ವಿಶಿಷ್ಟ ಜನಾಂಗೀಯತೆಯ ಕುರಿತಾದ ಪ್ರಸಿದ್ಧ ಮಾನವಶಾಸ್ತ್ರಜ್ಞ ಡಾ. ಎಂ.ಎ. ಕಲಾಂ ಅವರ ಸಂಶೋಧನಾ ಪ್ರಬಂಧವನ್ನು ಹಾಗೂ 1871-72 ರಿಂದ 1931 ರವರೆಗಿನ ಐತಿಹಾಸಿಕ ಜನಗಣತಿ ದಾಖಲೆಗಳನ್ನು ಪ್ರಮಾಣೀಕರಣವಾಗಿ ಪರಿಗಣಿಸಬೇಕು. ಡಾ. ಸುಬ್ರಮಣಿಯನ್ ಸ್ವಾಮಿಯವರು ಕರ್ನಾಟಕ ಉಚ್ಚ ನ್ಯಾಯಾಲಯದ ಮುಂದೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಶಯದಂತೆ, ಕೊಡವರನ್ನು “ಆದಿಮಸಂಜಾತ ಬುಡಕಟ್ಟು ಜನಾಂಗ” ಎಂದು ಗುರುತಿಸಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವನ್ನು ನೀಡಬೇಕು. ಸಂವಿಧಾನದ ವಿಧಿ 25 ಮತ್ತು 26 ರ ಅಡಿಯಲ್ಲಿ ಕೊಡವರ ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವಾದ ‘ತೋಕ್ ಸಂಸ್ಕಾರ ಮತ್ತು ಆಯುಧ ಹಕ್ಕನ್ನು’ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಪರಿಗಣಿಸಬೇಕು. ವಿಶ್ವಸಂಸ್ಥೆಯ ಆದಿಮಸಂಜಾತ ಆಸ್ತಿ ಹಕ್ಕುಗಳ ಅಡಿಯಲ್ಲಿ ಕೊಡವರ ಪಾರಂಪರಿಕ ಭೂಮಿಯನ್ನು ಸಂರಕ್ಷಿಸಬೇಕು. ಸಿಕ್ಕಿಂನ ‘ಸಂಘ’ ಮಾದರಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಸಂಸತ್ ಮತ್ತು ವಿಧಾನಸಭಾ ಕ್ಷೇತ್ರವನ್ನು ಮರುವಿಂಗಡಿಸಬೇಕು. ಕೊಡವ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಮತ್ತು ‘ದೇವಟ್ ಪರಂಬ್’ ಜನಾಂಗೀಯ ಹತ್ಯಾಕಾಂಡವನ್ನು ವಿಶ್ವಸಂಸ್ಥೆಯ ಹೋಲೋಕಾಸ್ಟ್ ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕು. ವಿಕೃತ ಇತಿಹಾಸಕಾರನೊಬ್ಬ ಕೊಡವರ ಇತಿಹಾಸವನ್ನು ಅತ್ಯಂತ ವಿಕೃತ ನಿರೂಪಣೆಗಳೊಂದಿಗೆ ಕಲುಷಿತಗೊಳಿಸಿದ್ದಾನೆ. ಈ ನಿಂದನಾತ್ಮಕ ಇತಿಹಾಸವನ್ನು ಅಧಿಕೃತವಾಗಿ ರದ್ದುಗೊಳಿಸಬೇಕು ಮತ್ತು ಆ ವಿನಾಶಕಾರಿ ಬೇಜವಾಬ್ದಾರಿ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸತ್ಯಾಗ್ರಹದ ಸಂದರ್ಭ ಒತ್ತಾಯಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.








