

ಮಡಿಕೇರಿ ಜೂ.1 NEWS DESK : ಕಾಡಾನೆಗಳನ್ನು ಒಳಗೊಂಡಂತೆ ವನ್ಯಜೀವಿಗಳ ಆಹಾರಕ್ಕೆ ಪೂರಕವಾದ ಮರಗಳನ್ನು ಅರಣ್ಯ ಪ್ರದೇಶಗಳಲ್ಲಿ ಬೆಳೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಯನ್ನು ಒಳಗೊಂಡಂತೆ ಸರ್ಕಾರವನ್ನು ಆಗ್ರಹಿಸುವ ನಿಟ್ಟಿನಲ್ಲಿ ಜೂ.5 ರಂದು ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸುವ ಕಾರ್ಯಕ್ರಮ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹ್ಯೂಮನ್ ರೈಟ್ಸ್ ಇಂಟರ್ನ್ಯಾಷನಲ್ ಫೆಡರೇಷನ್ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮಾತನಾಡಿ, ಅಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದ ಮುಂಭಾಗ ಪಕ್ಷ ಭೇದಗಳಿಲ್ಲದೆ ಸಮಾವೇಶಗೊಂಡು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಿದ್ದೇವೆ. ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಇದನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕೊಡಗು ಜಿಲ್ಲೆಯನ್ನು ಒಳಗೊಂಡಂತೆ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ವಿಭಾಗಗಳಲ್ಲಿ ವನ್ಯ ಜೀವಿಗಳ ಉಪಟಳ ಹೆಚ್ಚಾಗುತ್ತಿದೆ. ಕಾಡಾನೆಗಳ ಹಾವಳಿಯಿಂದ ಜೀವಹಾನಿಯೊಂದಿಗೆ, ಫಸಲು ನಾಶ ಉಂಟಾಗಿ ಕೃಷಿಕ ಸಮೂಹ ಸಂಕಷ್ಟಕ್ಕೆ ಸಿಲುಕಿದೆ. ಹುಲಿ ದಾಳಿಯಿಂದ ಜೀವಹಾನಿಯ ಪ್ರಕರಣಗಳು ಸಾಕಷ್ಟು ನಡೆದಿದೆ. ಇವೆಲ್ಲವುಗಳಿಗೆ ಕಾರಣ ವನ್ಯಜೀವಿಗಳ ಆವಾಸ ಸ್ಥಾನವಾಗಿರುವ ಅರಣ್ಯ ಪ್ರದೇಶದಲ್ಲಿ ಅವುಗಳಿಗೆ ಅಗತ್ಯವಾದ ಆಹಾರ ದೊರಕದಿರುವುದೇ ಆಗಿದೆಯೆಂದು ಬೇಸರ ವ್ಯಕ್ತಪಡಿಸಿದರು. :: ಅರಣ್ಯ ಅಧಿಕಾರಿಗಳೆ ಹೊಣೆ :: ವನ್ಯಜೀವಿಗಳ ಹಾವಳಿಗೆ ಅರಣ್ಯ ಇಲಾಖಾ ಅಧಿಕಾರಿಗಳೆ ನೇರಹೊಣೆಯೆಂದು ತೀಕ್ಷ್ಣವಾಗಿ ನುಡಿದ ಹರೀಶ್ ಆಚಾರ್ಯ ಅವರು, ವನ್ಯಜೀವಿಗಳ ಆವಾಸ ಸ್ಥಾನವಾದ ಅರಣ್ಯ ಪ್ರದೇಶದಲ್ಲಿ ಅವುಗಳಿಗೆ ಆಹಾರ ಒದಗಿಸುವ ಗಿಡಮರಗಳ ಬದಲಾಗಿ ತೇಗ, ಅಕೇಶಿಯಾ, ನೀಲಗಿರಿ ತೋಪುಗಳನ್ನು ಬೆಳಸಿದ ಉದ್ದೇಶವಾದರು ಏನೆಂದು ಪ್ರಶ್ನಿಸಿ, ಈ ಗಿಡ ಮರಗಳಿಂದ ವನ್ಯ ಜೀವಿಗಳಿಗೆ ಅಗತ್ಯ ಆಹಾರ ದೊರಕುವುದಿಲ್ಲ. ಇಂತಹ ಮರಗಿಡಗಳಿಂದ ಲಾಭ ಪಡೆಯುವವರು ಯಾರೆನ್ನುವುದೇ ಅರ್ಥವಾಗದ ಪರಿಸ್ಥಿತಿ ಇರುವುದಾಗಿ ತಿಳಿಸಿದರು. ಕಾಡು ಹಂದಿಗಳು, ಕೋತಿಗಳ ಹಾವಳಿಯಿಂದ ಸಾಕಷ್ಟು ಕೃಷಿ ಫಸಲುಗಳಿಗೆ ಹಾನಿ ಉಂಟಾಗುತ್ತಿದೆ. ಕಾಡಾನೆ ಹಾವಳಿಯಿಂದ ಕೃಷಿ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ರೈತರು ಕೃಷಿ ಚಟುವಟಿಕೆಗಳಿಂದ ವಿಮುಖರಾಗುವ ಸಾಧ್ಯವಿದೆಯೆಂದು ಕಳವಳ ವ್ಯಕ್ತಪಡಿಸಿದರು. :: ಒಂದೇ ಬಗೆಯ ಗಿಡ ಮರಗಳನ್ನು ತೆಗೆಯಿರಿ :: ಅರಣ್ಯ ಪ್ರದೇಶಗಳಲ್ಲಿ ಪ್ರಸ್ತುತ ಕಂಡು ಬರುತ್ತಿರುವ ತೇಗ, ಅಕೇಶಿಯಾ, ನೀಲಗಿರಿ ಮರಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ, ಅದರ ಬದಲಾಗಿ ವನ್ಯ ಜೀವಿಗಳ ಆಹಾರಕ್ಕೆ ಬಳಕೆಯಾಗುವ ಗಿಡಮರಗಳನ್ನು ಬೆಳೆಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಒಂದೇ ಜಾತಿಯ ಮರಗಳನ್ನು ತೆಗೆದು, ಅದರಿಂದ ಬರುವ ಹಣವನ್ನು ಕಾಡಾನೆ ಬಾರದಂತೆ ಬೇಲಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. :: ರಾಜ್ಯಾದ್ಯಂತ ಆಂದೋಲನ :: ಸಂಘಟನೆಯ ವತಿಯಿಂದ ವನ್ಯ ಜೀವಿಗಳ ಬದುಕಿಗೆ ಪೂರಕವಾಗಿ ಅರಣ್ಯ ಪ್ರದೇಶಗಳಲ್ಲಿ ಅಗತ್ಯ ಗಿಡಮರಗಳನ್ನು ಬೆಳೆಯುವಂತೆ ಆಗ್ರಹಿಸಿ ರಾಜ್ಯ ವ್ಯಾಪಿ ಆಂದೋಲನ ನಡೆಸಲಾಗುತ್ತದೆಮದು ಸ್ಪಷ್ಟಪಡಿಸಿದರು. ನಗರದಲ್ಲಿ ಗೋಷ್ಠಿಯಲ್ಲಿ ಸಂಘಟನೆಯ ಸಲಹೆಗಾರರಾದ ವಾಂಚೀರ ವಿಠಲ ನಾಣಯ್ಯ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಸೋಮನಾಥ, ಸದಸ್ಯರಾದ ಬಿ.ಬಿ.ವಸಂತ ಉಪಸ್ಥಿತರಿದ್ದರು.









