
ಮಡಿಕೇರಿ ಜೂ.1 NEWSD DESK : ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಕಡ್ಡಾಯವಾಗಿ ಬೆಳೆಸಿ ಎಂದು ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪ್ರಥಮ ಸಮ್ಮೇಳನ ಅಧ್ಯಕ್ಷರಾದ ಟಿ.ಎಸ್.ಗೋಪಾಲ್ ಅವರು ಕರೆ ನೀಡಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯ ಜನತಾ ಪ್ರೌಢಶಾಲಾ ಮೈದಾನದ ಕೂರ್ಗ್ ಸ್ಟಾರ್ ಚೆಕ್ಕೇರ ಅಪ್ಪಯ್ಯ ವೇದಿಕೆಯಲ್ಲಿ ಸೋಮವಾರ ನಡೆದ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ತನ್ನದೇ ಆದ ಪ್ರಾಚೀನ ಇತಿಹಾಸ ಹೊಂದಿದೆ. ದಕ್ಷಿಣ ಭಾರತದ ದ್ರಾವಿಡ ಭಾಷೆಯಲ್ಲಿ ಕನ್ನಡ ಸೊಗಸಾದ ಭಾಷೆಯಾಗಿದ್ದು, ಮಕ್ಕಳಿಗೆ ಕನ್ನಡ ಭಾಷೆಯನ್ನು ಸರಳೀಕರಿಸಿ ಕಲಿಸುವಂತಾಗಬೇಕು ಎಂದು ಸಲಹೆ ಮಾಡಿದರು. ನಾಡಿನ ಭಾಷೆಯಾದ ಕನ್ನಡವನ್ನು ಹೆಚ್ಚು ಹೆಚ್ಚು ಕಲಿಯಬೇಕು. ಮಾತೃ ಭಾಷೆ ಜೊತೆಗೆ ನಾಡಿನ ಭಾಷೆಯನ್ನು ಕಲಿಸಬೇಕು ಎಂದು ಟಿ.ಎಸ್.ಗೋಪಾಲ್ ಅವರು ಹೇಳಿದರು. ದಕ್ಷಿಣ ಕೊಡಗಿನ ಭಾಗದಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವುದರಿಂದ ಕನ್ನಡ, ಕೊಡವ, ಮಲೆಯಾಳ, ಆದಿವಾಸಿ ಭಾಷೆಗಳನ್ನು ಮಾತನಾಡುತ್ತಾರೆ. ಜೊತೆಗೆ ಅಧ್ಯಯನಕ್ಕೆ ಸಂಬಂಧಿಸಿದಂತೆ ಕನ್ನಡ, ಇಂಗ್ಲೀಷ್, ಹಿಂದಿಯನ್ನು ಸಹ ಕಲಿಯುತ್ತಾರೆ. ಮಕ್ಕಳಿಗೆ ಭಾಷೆ ಕಲಿಕೆಗೆ ಒತ್ತು ನೀಡಬೇಕು. ಆದರೆ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಮ್ಮೇಳನಾಧ್ಯಕ್ಷರು ಒತ್ತಿ ಹೇಳಿದರು.
ಯಾವುದೇ ಭಾಷೆಯನ್ನು ಸರಳವಾಗಿ ಅಕ್ಷರವನ್ನು ಮಕ್ಕಳಿಗೆ ಕಲಿಸಬೇಕು. ನಾಡು ನುಡಿ ಬಗ್ಗೆ ಅಭಿಮಾನ ಇರಬೇಕು. ಕನ್ನಡ ಭಾಷೆ, ಸಾಹಿತ್ಯಕ್ಕೆ ಒತ್ತು ನೀಡಬೇಕು. ಕನ್ನಡ ಪ್ರೇಮವನ್ನು ಎಲ್ಲೆಡೆ ಬೆಳೆಸಬೇಕು ಎಂದು ಸಮ್ಮೇಳನಾಧ್ಯಕ್ಷರು ವಿವರಿಸಿದರು. ಪ್ರಾದೇಶಿಕ ಭಾಷೆ ಜೊತೆಗೆ ಇತರ ಭಾಷೆಗಳನ್ನು ಕಲಿಯುವುದರಲ್ಲಿ ಯಾವುದೇ ತಪ್ಪಿಲ್ಲ. ವರ್ತಮಾನದಲ್ಲಿ ಇಂಗ್ಲೀಷ್ ವ್ಯವಹಾರಿಕವಾಗಿ ಅಂತರರಾಷ್ಟ್ರೀಯ ಮಾನ್ಯತೆ ಗಳಿಸಿರುವ ಭಾಷೆಯಾಗಿದ್ದು, ಎಲ್ಲಾ ಭಾಷೆಯನ್ನು ಕಲಿಯುವಂತಾಗಬೇಕು. ಆದರೆ ಹೊರಗಿನಿಂದ ನಾಡಿಗೆ ಬಂದವರೂ ಸಹ ಕನ್ನಡ ಕಲಿಯುವಂತಾಗಬೇಕು ಮತ್ತು ಕಲಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಕನ್ನಡವನ್ನು ಸಲೀಸಾಗಿ ಮಾತನಾಡುವ ಮಕ್ಕಳು ಓದಿ ಬರೆಯಲು ಕಷ್ಟ ಪಡುತ್ತಿರುವ ಬಗ್ಗೆ ಕೇಳಿ ಬರುತ್ತಿದೆ. ಮನೆಯಲ್ಲಿಯೇ ಕನ್ನಡ ಕಲಿಯುವ ಕೆಲಸ ಆಗಬೇಕು. ಹ್ರಸ್ವಸ್ವರ-ದೀರ್ಘ ಸ್ವರ, ಅಲ್ಪಪ್ರಾಣ-ಮಹಾಪ್ರಾಣ ಹೀಗೆ ಉಚ್ಛರಣೆಯ ಬಗ್ಗೆ ಮಾಹಿತಿ ನೀಡುವಂತಾಗಬೇಕು ಎಂದರು.
ಪ್ರತಿಯೊಂದು ಭಾಷೆಯು ಇತರ ಭಾಷೆಗಳಿಂದ ಅನೇಕ ಪದಗಳನ್ನು ಸಾಹಿತ್ಯಕ್ಕೆ ಪೋಷಕವಾದ ಅಂಶಗಳನ್ನು ಪಡೆಯುವುದು ಸ್ವಾಭಾವಿಕವಾಗಿದ್ದು, ಅವುಗಳನ್ನು ಬಳಸಿಕೊಂಡು ಭಾಷೆಯನ್ನು ಇನ್ನಷ್ಟುಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ಮಾಡಿದರು. ಕೊಡಗು ಹಿಂದೆ ವಿಶಾಲವಾದ ಪ್ರದೇಶವಾಗಿತ್ತು. ಕೊಡಗಿಗೆ ಭವ್ಯವಾದ ಇತಿಹಾಸವಿದ್ದು, ಹುದಿಕೇರಿ ಭಾಗವನ್ನು ಕಿಗ್ಗಟ್ಟುನಾಡು ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಹಲವು ಸಾಹಿತಿಗಳು, ಕವಿಗಳು ಕನ್ನಡ ಭಾಷೆ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಚೆಕ್ಕೇರ ಅಪ್ಪಯ್ಯ ಅವರು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು. ಕೊಡಗಿನ ಇತಿಹಾಸದ ಬಗ್ಗೆ ಹಲವು ಸಾಹಿತಿಗಳು ಬರೆದಿದ್ದಾರೆ. ಅಂತವರನ್ನು ಸದಾ ಸ್ಮರಿಸಬೇಕು. ಅಳಿವಿನ ಅಂಚಿನಲ್ಲಿರುವ ಭಾಷೆಯನ್ನು ಬೆಳೆಸಲು ಮತ್ತಷ್ಟು ಕಾರ್ಯಕ್ರಮ ರೂಪಿಸಬೇಕು. ಮಕ್ಕಳಿಗೆ ಮಾತೃ ಭಾಷೆಯ ಬಗ್ಗೆ ಪ್ರೀತಿ ಗೌರವ ಹೆಚ್ಚಿಸಬೇಕು ಎಂದರು. ಮಕ್ಕಳನ್ನು ಸಾಹಿತ್ಯ ಸಮ್ಮೇಳನಕ್ಕೆ ಕಳುಹಿಸಬೇಕು. ಮಕ್ಕಳಲ್ಲಿ ಕನ್ನಡದ ಪ್ರೇಮ ಬೆಳೆಸಬೇಕು. ಕನ್ನಡ ಭಾಷೆ ಬಳಸುವಂತಾಗಲು ಪ್ರೋತ್ಸಾಹಿಸಬೇಕು. ವಿಷಯವನ್ನು ಮನನ ಮಾಡಿಕೊಳ್ಳಬೇಕು ಎಂದರು. ಸಾಹಿತ್ಯಪರ ಕಾರ್ಯಕ್ರಮಗಳಿಗೆ ಮಕ್ಕಳು ಹೋಗದಂತೆ ಸುತ್ತೋಲೆ ಹೊರಡಿಸಿದಲ್ಲಿ ಅದನ್ನು ವಾಪಸ್ಸು ಪಡೆಯಬೇಕು. ಸಾಹಿತ್ಯ ಚಟುವಟಿಕೆಯಲ್ಲಿ ಮಕ್ಕಳು ಪಾಲ್ಗೊಂಡಲ್ಲಿ ಯಾವುದೇ ರೀತಿಯ ನಷ್ಟವಿಲ್ಲ ಎಂದು ಟಿ.ಪಿ.ರಮೇಶ್ ಅವರು ಪ್ರತಿಪಾದಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಕನ್ನಡದ ಮನಸ್ಸುಗಳು ಒಂದಾಗಬೇಕು. ಕನ್ನಡ ಭಾಷೆ ಎಲ್ಲೆಡೆ ಪಸರಿಸಬೇಕು. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವುದರಿಂದ ಅಲ್ಲಿನ ಕನ್ನಡ ಸಂಸ್ಕೃತಿ, ಸ್ಥಳೀಯ ಭಾಷೆ ಬಗ್ಗೆ ಮಾಹಿತಿ ನೀಡಲು ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳೀಯ ಸಂಸ್ಕೃತಿ, ಕಲೆಗಳನ್ನು ಪ್ರತಿಬಿಂಭಿಸುವಲ್ಲಿ ಕವಿಗೋಷ್ಠಿ, ವಿಚಾರಗೋಷ್ಠಿಗಳು ನಡೆಯಲಿವೆ. ಯುವಜನರು ಸಾಹಿತ್ಯ ಅಭಿಮಾನ ಬೆಳೆಸಿಕೊಳ್ಳಲು ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯಾಗಿದೆ ಎಂದು ನುಡಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಚಿರಿಯಪ್ಪಂಡ ಸುರೇಶ್ ನಂಜಪ್ಪ ಅವರು ಮಾತನಾಡಿ ಹತ್ತನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ. ಕನ್ನಡ ಭಾಷೆ ಕಲಿಯುವುದಿರಿಂದ ಇತರೆ ಭಾಷೆ ಕಲಿಯಲು ಸಹಕಾರಿಯಾಗಿದೆ ಎಂದರು. ಮಾತೃ ಭಾಷೆ ಕಲಿಯುವುದರಿಂದ ಇತರೆ ಭಾಷೆ ಕಲಿಯಲು ಸಹಕಾರಿಯಾಗಿದೆ. ಗಡಿ ಭಾಗದಲ್ಲಿ ಕನ್ನಡ ಕಲಿಕೆ ಹೆಚ್ಚಾಗಿ ಆಗಬೇಕು. ಕೇರಳ ಗಡಿಭಾಗದಲ್ಲಿ ಹತ್ತಿರದಲ್ಲಿರುವ ಪ್ರದೇಶದಲ್ಲಿ ಕನ್ನಡ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಕನ್ನಡ ಭಾಷೆ ಜೊತೆಗೆ ಇತರೆ ಭಾಷೆ ಕಲಿಯುವಂತಾಗಬೇಕು ಎಂದು ಸಲಹೆ ಮಾಡಿದರು. ತಾ,ಪಂ.ಇಒ ಕೆ.ಆರ್.ರಾಜೇಶ್ ಅವರು ಮಾತನಾಡಿ ಕನ್ನಡವನ್ನು ಕಟ್ಟಿ ಬೆಳೆಸಬೇಕು. ಇತಿಹಾಸವನ್ನು ತಿಳಿದುಕೊಂಡು ಮುಂದೆ ಸಾಗಬೇಕು ಎಂದರು. ತಹಶೀಲ್ದಾರ್ ಸಂಜನಾ, ಪೊಲೀಸ್ ಉಪ ನಿರ್ದೇಶಕರಾದ ಮಹೇಶ್ ಕುಮಾರ್. ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೋಪಿ, ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೋಳೆರ ದಯಾಚಂಗಪ್ಪ, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಸಂಘಟನಾ ಕಾರ್ಯದರ್ಶಿ ಬಿ.ಎಂ.ವಾಸುರೈ, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಬಾಳೆಲೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರಭು ಕುಮಾರ್, ಜಿಮ್ಮಿ ಅಯ್ಯಣ್ಣ, ಚೆಕ್ಕೇರ ಸುದೀರ್, ದಿವ್ಯ ಕಾವೇರಮ್ಮ, ಪುಟ್ಟರಾಜು, ಇತರರು ಇದ್ದರು. ಹುದಿಕೇರಿಯ ಲಿಟ್ಲ್ ಪ್ಲವರ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಗೋಣಿಕೊಪ್ಪ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಸಮ್ಮೇಳನ ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಬಾನಂಗಡ ಅನೂಪ್ ಸ್ವಾಗತಿಸಿದರು. ಚಂದನಾ ಮತ್ತು ನಳಿನಿ ಅವರು ನಿರೂಪಿಸಿದರು. ದಯಾ ಚಂಗಪ್ಪ ವಂದಿಸಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಮುಖ್ಯ ರಸ್ತೆಗಾಗಿ ಸಾಗಿತು. ಮೆರವಣಿಗೆಯಲ್ಲಿ ಮಂಗಳ ವಾದ್ಯ, ಚಂಡೆ ವಾದ್ಯ, ಕಳಸ ಹೊತ್ತ ಮಹಿಳೆಯರು, ಗೊಂಬೆಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ಬ್ಯಾಂಡ್ ಸೆಟ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಜೀವಿನಿ ಮಹಿಳಾ ಒಕ್ಕೂಟ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ, ಅಂಗನವಾಡಿ ಸಂಘಟನೆ, ಸ್ತ್ರೀಶಕ್ತಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ಶಿಕ್ಷಕರುಗಳು, ಸಂಘ ಸಂಸ್ಥೆಗಳ ಮತ್ತು ಸಮಾಜಗಳ ಪ್ರತಿನಿಧಿಗಳು, ಆಟೋ ಮತ್ತು ವಾಹನ ಚಾಲಕರ ಸಂಘದವರು, ಎನ್ಸಿಸಿ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡದೊಂದಿಗೆ ಮೆರವಣಿಗೆ ನಡೆಯಿತು. ವಿವಿಧ ಇಲಾಖೆಗಳು ಮಾಹಿತಿ ಮಳಿಗೆ ನಿರ್ಮಿಸಿ, ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ, ಗಮನ ಸೆಳೆದರು.









