
ಮಡಿಕೇರಿ NEWS DESK ಜೂ.3 : ಕರ್ನಾಟಕ ರಾಜಕೀಯದ ಮಹತ್ವದ ಘಟ್ಟದಲ್ಲಿ, ಜನಪರ ಆಡಳಿತದ ಶಕ್ತಿಯಾಗಿ ನಿಂತಿರುವ ಕಾಂಗ್ರೆಸ್ ಪಕ್ಷದ ನಾಯಕತ್ವ ಹೊಸ ದಿಕ್ಕಿನತ್ತ ಸಾಗುತ್ತಿರುವುದು ಕಾರ್ಯಕರ್ತರಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಈ ಸುಸಂದರ್ಭದಲ್ಲಿ ಕೊಡಗು ಜಿಲ್ಲೆಯ ಶಾಸಕದ್ವಯರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಮುಸ್ಲಿಮರಿಗೆ ವಿಧಾನ ಪರಿಷತ್ ನಲ್ಲಿ ಮತ್ತು ನಿಗಮ ಮಂಡಳಿಗಳಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಕೆಪಿಸಿಸಿ ಸದಸ್ಯ ಕೆ.ಎ.ಯಾಕುಬ್ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಡವರ ಪರವಾದ ಧ್ವನಿ, ಸಾಮಾಜಿಕ ನ್ಯಾಯದ ಪ್ರಬಲ ಪ್ರತಿಪಾದಕ, ನುಡಿದಂತೆ ನಡೆದ ಜನನಾಯಕ ಸಿದ್ದರಾಮಯ್ಯನವರು ರಾಜ್ಯ ರಾಜಕಾರಣದಲ್ಲಿ ಮೂಡಿಸಿರುವ ಛಾಪು ಸದಾ ಅಜರಾಮರ. ಅವರ ಅನುಭವ, ದೂರದೃಷ್ಟಿ ಮತ್ತು ಜನಪರ ಚಿಂತನೆ ಮುಂದಿನ ದಿನಗಳಲ್ಲಿಯೂ ಕರ್ನಾಟಕಕ್ಕೆ ದಾರಿದೀಪವಾಗಿರಲಿ ಎಂಬುವುದು ನಮ್ಮ ಹಾರೈಕೆಯಾಗಿದೆ ಎಂದು ತಿಳಿಸಿದ್ದಾರೆ.
ಸಂಕಷ್ಟದ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಮುನ್ನಡೆಸಿದ, ಸಂಘಟನೆಯ ಶಕ್ತಿಯಾಗಿ ದುಡಿದ, ಕಾರ್ಯಕರ್ತರ ನಂಬಿಕೆಯ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಮುಂದಿನ ನಾಯಕತ್ವದ ಅವಕಾಶ ದೊರೆಯುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಅವರ ಚುರುಕು ಆಡಳಿತ, ಸಂಘಟನೆ ಸಾಮರ್ಥ್ಯ ಮತ್ತು ಅಭಿವೃದ್ಧಿ ಪರ ಚಿಂತನೆ ಕರ್ನಾಟಕವನ್ನು ಇನ್ನಷ್ಟು ಬಲಿಷ್ಠ ದಾರಿಯಲ್ಲಿ ಮುನ್ನಡೆಸಲಿ ಎನ್ನುವುದು ನಮ್ಮ ಆಶಯವಾಗಿದೆ. “ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಹೊಸ ಚೈತನ್ಯ ಮತ್ತು ಹೊಸ ಭರವಸೆ ನೀಡಿರುವ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಜನಮನ ಗೆದ್ದ ನಾಯಕ ಎ.ಎಸ್.ಪೊನ್ನಣ್ಣ ಅವರು ಜನಪರ ಕೆಲಸಗಳು, ಅಭಿವೃದ್ಧಿ ಪರ ಚಿಂತನೆ ಮತ್ತು ನಿಸ್ವಾರ್ಥ ಸೇವೆಯ ಮೂಲಕ ಜನರ ಅಪಾರ ವಿಶ್ವಾಸವನ್ನು ಗಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರಕಾರದಲ್ಲಿ ಕೊಡಗಿನ ಅಭಿವೃದ್ಧಿಯ ವೇಗ ಹೆಚ್ಚಿಸಲು ಇಬ್ಬರು ಶಾಸಕರಿಗೆ ಸಚಿವ ಸ್ಥಾನ ದೊರೆಯಬೇಕು. ಅದೇ ರೀತಿ, ರಾಜ್ಯದ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ದೃಷ್ಟಿಯಿಂದ ಕೊಡಗಿನ ಮುಸ್ಲಿಂ ಸಮುದಾಯಕ್ಕೂ ಕರ್ನಾಟಕ ಸರಕಾರದಲ್ಲಿ ಗೌರವಯುತವಾಗಿ ವಿಧಾನ ಪರಿಷತ್ ಸ್ಥಾನ ಅಥವಾ ಸಂಪುಟ ದರ್ಜೆಯ ನಿಗಮ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕೆ.ಎ.ಯಾಕುಬ್ ಕೋರಿದ್ದಾರೆ. ಇದು ಕೇವಲ ಒಂದು ಆಶಯವಲ್ಲ, ಕೊಡಗಿನ ಎಲ್ಲಾ ಮುಸ್ಲಿಂ ಜಮಾಅತ್ಗಳ ಬಹುಕಾಲದ ನ್ಯಾಯಸಮ್ಮತ, ಭಾವನಾತ್ಮಕ ಮತ್ತು ಅತಿ ದೊಡ್ಡ ಬೇಡಿಕೆಯೂ ಆಗಿದ್ದು, ಈ ಬಾರಿ ಪೂರ್ಣಗೊಳ್ಳಬಹುದು ಎನ್ನುವುದು ಮುಸ್ಲಿಂ ಸಮುದಾಯದ ನಂಬಿಕೆಯೂ ಆಗಿದೆ. ನಾಯಕತ್ವ ಬದಲಾಗಬಹುದು, ಆದರೆ ಜನಪರ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಹೋರಾಟ ಎಂದಿಗೂ ಬದಲಾಗದು ಎಂದು ಅವರು ತಿಳಿಸಿದ್ದಾರೆ.








