
ಮಡಿಕೇರಿ NEWS DESK ಜೂ. 5: ಇತ್ತೀಚೆಗೆ ಬಳ್ಳಾರಿಯ ಸಿರಿಗೇರಿಯಲ್ಲಿ ನಡೆದ ಸಮಾರಂಭದಲ್ಲಿ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರಿಗೆ ಪ್ರತಿಷ್ಠಿತ “ಪಿ. ಲಂಕೇಶ್ ಮಾಧ್ಯಮ ಪ್ರಶಸ್ತಿ” ಪ್ರದಾನ ಮಾಡಲಾಯಿತು. ಸಿರಿಗೇರಿ ಅನ್ನಪೂರ್ಣ ಪ್ರಕಾಶನದವರು ವರ್ಷಂಪ್ರತಿ ರಾಜ್ಯದ ಉತ್ತಮ ಸಣ್ಣ ಪತ್ರಿಕೆಯ ಸಂಪಾದಕರಿಗೆ ಕೊಡ ಮಾಡುವ ಪ್ರಶಸ್ತಿಯನ್ನು, ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ. ಪ್ರದಾನ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು, ಪತ್ರಿಕೆಗಳು ದಮನಿತರ, ಶೋಷಿತರ, ಅವಕಾಶ ವಂಚಿತರ ಪರವಾಗಿ ಹೆಚ್ಚು ಕೆಲಸ ಮಾಡಬೇಕೆಂದು ಬಯಸಿದರು. ದಿವಂಗತ ಪಿ. ಲಂಕೇಶ್ ಅವರು ಸಾಮಾಜಿಕ ಕಳಕಳಿ ಹೊಂದಿದ್ದು, ಹರಿತ ಬರಹಕ್ಕೆ ಜಾಹೀರಾತು ಇಲ್ಲದೆಯೇ ಪತ್ರಿಕೆಯನ್ನು ಹೊರತಂದುದು ಒಂದು ಮಾದರಿ ಎಂದರು. ಲಂಕೇಶ್ ಮಾಧ್ಯಮ ಪ್ರಶಸ್ತಿ ಏಳು ದಶಕ ಕಂಡ ‘ಶಕ್ತಿ’ ದಿನಪತ್ರಿಕೆಗೆ ಸಲ್ಲುತ್ತಿರುವದು ಹೆಮ್ಮೆಯ ವಿಚಾರ ಎಂದು ಶ್ಲಾಘಿಸಿದರು. ಮಾಧ್ಯಮಗಳಿಂದ ಸೈಬರ್ ಕ್ರೈಂ, ಮಹಿಳೆ-ಮಕ್ಕಳಿಗೆ, ಅವಿದ್ಯಾವಂತರಿಗೆ ಆಗುವ ಅನ್ಯಾಯಗಳನ್ನು ಹತ್ತಿಕ್ಕಲು ಕೈ ಜೋಡಿಸಬೇಕು ಎಂದು ಪಲ್ಲವಿ ಕರೆ ನೀಡಿದರು. ಪ್ರಶಸ್ತಿಗಳು ಮುಂದಿನ ಜವಾಬ್ದಾರಿಯ ದಿಕ್ಸೂಚಿ ಎಂದು ನುಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಜಿ. ಅನಂತಶಯನ ಅವರು ಸಮಾಜದಲ್ಲಿ ಸ್ವಾಸ್ಥ್ಯ ಇರಬೇಕಾದರೆ ಪತ್ರಕರ್ತರು ತಮ್ಮನ್ನು ರಾಜಕಾರಣಿಗಳಿಗೆ, ಪ್ರಭಾವಿಗಳಿಗೆ ಮಾರಿಕೊಳ್ಳಕೂಡದು ಎಂದು ನುಡಿದರು. ಮಹಾನಗರಗಳಲ್ಲಿ ಇಂತಹ “ಶ್ರೀಮಂತ ಭಿಕ್ಷುಕರು” ಬಹಳವಿದ್ದಾರೆ ಎಂದರು. ಸಂಪೂರ್ಣ ಸಾಲದಲ್ಲಿ ಮುಳುಗಿದ್ದ ವರುಷಗಳನ್ನೂ “ಶಕ್ತಿ” ಕಂಡಿದ್ದು ಯಾವದೇ ಸಂದರ್ಭದಲ್ಲೂ, ಚಿಕ್ಕಾಸಿಗೂ ಕೈ ಒಡ್ಡದ, ಶುಭ್ರ ಚರಿತ್ರೆ ಶಕ್ತಿ ಕುಟುಂಬದ್ದು ಎಂದು ಒತ್ತಿ ನುಡಿದರು. ದಿ|| ಗೋಪಾಲಕೃಷ್ಣ ಅವರು ಆರಂಭಿಸಿದ ‘ಶಕ್ತಿ” ಯನ್ನು ಇಂದು ಸಹೋದರರಾದ ಜಿ. ರಾಜೇಂದ್ರ ಪ್ರಧಾನ ಸಂಪಾದಕರಾಗಿ, ಜಿ. ಚಿದ್ವಿಲಾಸ್ ಸಂಪಾದಕರಾಗಿ, ಯುವ ಪೀಳಿಗೆ ಪ್ರಜ್ವಲ್ ಹಾಗೂ ಪ್ರಜ್ಞಾ ಜೊತೆ ಯಶಸ್ವಿಯಾಗಿ ನಡೆಸುತ್ತಿರುವುದಾಗಿ ಹೇಳಿದರು. ರಾಜಕಾರಣಿಗಳ ನಡುವೆ ನಿಂತು ತನ್ನ ಪ್ರಭಾವ ಬೆಳೆಸಿಕೊಳ್ಳುವದಕ್ಕಿಂತ, ಸಮಾಜದ ಆಗು ಹೋಗುಗಳು, ಸಮಸ್ಯೆಗಳನ್ನು ನಿಷ್ಪಕ್ಷಪಾತವಾಗಿ ಪ್ರಕಟಿಸಿ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಅನಂತಶಯನ ಕಿವಿಮಾತು ಹೇಳಿದರು. ಸಿರಿಗೆರೆ ಪ್ರಕಾಶನದ ಕಾರ್ಯ ಚಟುವಟಿಕೆಗಳನ್ನು ಅವರು ಶ್ಲಾಘಿಸಿದರು. ಅಡಿಷನಲ್ ಎಸ್ಪಿ ನವೀನ್ ಕುಮಾರ್, ಶ್ರೀ ಶಂಭುಲಿoಗೇಶ್ವರ ದೇವಾಲಯದ ಧರ್ಮದರ್ಶಿ ಬಸವರಾಜ ಹೂಗಾರ ವೇದಿಕೆಯಲ್ಲಿ ಇದ್ದರು. ಪತ್ರಕರ್ತ, ಅನ್ನಪೂರ್ಣ ಪ್ರಕಾಶನದ ಸಿರಿಗೇರಿ ಉರಿಸ್ವಾಮಿ ನಿರೂಪಣೆ ಮಾಡಿದರು. ಶಕ್ತಿ ಕುಟುಂಬದ ಚಿರಂತನ್ ಚಿದ್ವಿಲಾಸ್, ಪತ್ರಕರ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.








