
ಮಡಿಕೇರಿ NEWS DESK ಜೂ.5 : ಅರಣ್ಯ ಪ್ರದೇಶದಲ್ಲಿರುವ ತೇಗ, ನೀಲಗಿರಿ ಮತ್ತು ಅಕೇಶಿಯ ಮರಗಳನ್ನು ತೆರವುಗೊಳಿಸಿ ವನ್ಯಜೀವಿಗಳ ಆಹಾರಕ್ಕೆ ಪೂರಕವಾದ ಮರಗಳನ್ನು ಬೆಳೆಸಲು ಯೋಜನೆ ರೂಪಿಸಬೇಕು. ಆ ಮೂಲಕ ವನ್ಯಜೀವಿಗಳ ದಾಳಿಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಷನ್ ಸಂಘಟನೆ ಕೊಡಗು ಜಿಲ್ಲಾಧಿಕಾರಿಗಳು ಹಾಗೂ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸಂಘಟನೆಯ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರ ನೇತೃತ್ವದಲ್ಲಿ ಅಧಿಕಾರಿಗಳನ್ನು ಭೇಟಿಯಾದ ಪ್ರಮುಖರು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಮತ್ತಿತರ ಜಿಲ್ಲೆಗಳಲ್ಲಿ ಕಾಡು ಪ್ರಾಣಿ ಹಾಗೂ ಮಾನವ ಸಂಘರ್ಷ ಅತಿಯಾಗುತ್ತಿದೆ. ಕಾಡಾನೆ, ಹುಲಿ ಸೇರಿದಂತೆ ವನ್ಯಜೀವಿಗಳ ದಾಳಿಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಮತ್ತು ಕೃಷಿ ಫಸಲು ನಾಶವಾಗುತ್ತಿದೆ. ಈ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಅರಣ್ಯ ಭಾಗದಲ್ಲಿ ಆಹಾರ ಹಾಗೂ ನೀರಿನ ಕೊರತೆ ಎದುರಾಗಿರುವುದೇ ವನ್ಯಜೀವಿಗಳ ಉಪಟಳಕ್ಕೆ ಕಾರಣವಾಗಿದೆ. ಕಾಡು ಪ್ರಾಣಿಗಳಿಗೆ ಬೇಕಾದ ಆಹಾರಕ್ಕೆ ಪೂರಕವಾದ ಗಿಡ ಮರಗಳನ್ನು ಬೆಳೆಸುವ ಬದಲು ಪ್ರಕೃತಿಗೆ ವಿರುದ್ಧವಾದ ತೇಗ, ನೀಲಗಿರಿ, ಅಕೇಶಿಯ ಮರಗಳನ್ನು ಬೆಳೆಸಲಾಗಿದೆ. ತೇಗದ ಮರದ ಕೆಳಗೆ ಹುಲ್ಲು ಕೂಡ ಹುಟ್ಟುವುದಿಲ್ಲ. ಕರ್ನಾಟಕದಾದ್ಯಂತ ಉಪಯೋಗಕ್ಕೆ ಬಾರದ ಮರಗಳನ್ನು ಬೆಳೆಸಿ ಪ್ರಾಣಿಗಳಿಗೆ ಆಹಾರವಿಲ್ಲದಂತೆ ಮಾಡಲಾಗಿದೆ. ಕಾಡಿನಲ್ಲಿ ಆಹಾರ ಸಿಗದಿದ್ದಾಗ ಪ್ರಾಣಿಗಳು ನಾಡಿಗೆ ದಾಳಿ ಮಾಡಿ ಸಾರ್ವಜನಿಕರ ಪ್ರಾಣ ಹಾನಿ ಮಾಡುತ್ತಿವೆ, ಕೃಷಿ ಬೆಳೆಯನ್ನು ನಾಶ ಪಡಿಸುತ್ತಿವೆ. ಕೋತಿಗಳ ಉಪಟಳದಿಂದ ತೆಂಗು, ಅಡಿಕೆ, ಮಾವು ಕೃಷಿ ನಾಶವಾಗುತ್ತಿದೆ. ಕಾಡು ಹಂದಿಗಳ ಉಪಟಳದಿಂದ ಗೆಡ್ಡೆ ಗೆಣಸು, ಭತ್ತ ಮತ್ತಿತರ ಬೆಳೆ ನಷ್ಟವಾಗುತ್ತಿದೆ. ಕಾಡಾನೆಗಳ ಆತಂಕದಿAದ ಕಾರ್ಮಿಕರು ತೋಟದ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರು ಕೃಷಿ ಕಾರ್ಯವನ್ನು ಬಿಟ್ಟು ಪರ್ಯಾಯ ಉದ್ಯೋಗವನ್ನು ಅರಸಿಕೊಂಡು ಊರಿಂದ ಊರಿಗೆ ಅಲೆಯುವ ದುಸ್ಥಿತಿ ಬರಬಹುದು ಎಂದು ಹರೀಶ್ ಜಿ.ಆಚಾರ್ಯ ಆತಂಕ ವ್ಯಕ್ತಪಡಿಸಿದರು. ವನ್ಯಜೀವಿಗಳ ಜೀವನ ಕ್ರಮದ ಮೇಲೆ ದುಷ್ಪರಿಣಾಮ ಬೀರುವ ತೇಗ, ನೀಲಗಿರಿ, ಅಕೇಶಿಯ ಮರಗಳನ್ನು ಸಂಪೂರ್ಣ ತೆರವುಗೊಳಿಸಬೇಕು. ಈ ಮರಗಳಿಗೆ ಪರ್ಯಾಯವಾಗಿ ವನ್ಯಜೀವಿಗಳಿಗೆ ಆಹಾರ ಪೂರೈಸಬಹುದಾದ ಹುಲ್ಲು, ಬಿದಿರು, ಹಣ್ಣಿನ ಮರಗಳನ್ನು ಅಭಿವೃದ್ಧಿ ಪಡಿಸಲು ಬೃಹತ್ ಯೋಜನೆಯನ್ನು ರೂಪಿಸಬೇಕು. ಈ ಸಸ್ಯರಾಶಿಗಳಿಗೆ ಸಂಬoಧಿಸಿದ ಬೀಜಗಳನ್ನು ಮಳೆಗಾಲದ ಸಂದರ್ಭ ಹೆಲಿಕಾಫ್ಟರ್ ಮೂಲಕ ಅರಣ್ಯ ಪ್ರದೇಶಕ್ಕೆ ಹಾಕಬೇಕು. ಪ್ರಾಣಿಗಳ ಕುಡಿಯುವ ನೀರಿಗಾಗಿ ಅರಣ್ಯದಲ್ಲಿ ಕೆರೆಗಳನ್ನು ನಿರ್ಮಿಸಬೇಕು. ವನ್ಯಜೀವಿಗಳ ಬದುಕಿಗೆ ವಿರುದ್ಧವಾದ ಕೈಗಾರಿಕಾ ಯೋಜನೆಗಳನ್ನು, ವಿದ್ಯುತ್ ಮಾರ್ಗಗಳನ್ನು, ರೈಲು ಮಾರ್ಗಗಳನ್ನು ಮತ್ತು ಪ್ರವಾಸೋದ್ಯಮದ ಕಟ್ಟಡಗಳನ್ನು ನಿರ್ಮಿಸುವುದನ್ನು ಸ್ಥಗಿತಗೊಳಿಸಬೇಕು. ಈ ರೀತಿಯ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ವನ್ಯಜೀವಿಗಳ ದಾಳಿ ತಡೆಗೆ ಸರಕಾರ ವೈಜ್ಞಾನಿಕ ರೀತಿಯ ವಿಶೇಷ ಯೋಜನೆಯನ್ನು ರೂಪಿಸಿ ಬೃಹತ್ ಮೊತ್ತದ ಅನುದಾನವನ್ನು ಮೀಸಲಿರಿಸಬೇಕು ಎಂದು ಒತ್ತಾಯಿಸಿದರು. ಮನವಿ ಸಲ್ಲಿಸುವ ಸಂದರ್ಭ ಸಂಘಟನೆಯ ವಿರಾಜಪೇಟೆ ತಾಲ್ಲೂಕು ಉಪಾಧ್ಯಕ್ಷ ವಾಂಚೀರ ವಿಠಲ್ ನಾಣಯ್ಯ, ಮೂರ್ನಾಡು ಅಧ್ಯಕ್ಷ ಅಮ್ಮಣಂಡ ತಿಮ್ಮಯ್ಯ ಸತೀಶ್, ಉಪಾಧ್ಯಕ್ಷ ಚೆಟ್ಟಿಮಾಡ ಸುನಿಲ್, ಸಲಹೆಗಾರ ಡಾ.ಜಗತ್ ತಿಮ್ಮಯ್ಯ, ಸದಸ್ಯ ಅಮ್ಮಣಂಡ ಪೂಣಚ್ಚ ಮತ್ತಿತರರು ಹಾಜರಿದ್ದರು.








