
ಮಡಿಕೇರಿ NEWS DESK ಜೂ.5 : ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಪ್ರತಿ ಗ್ರಾ.ಪಂ ಮಟ್ಟದಲ್ಲಿ “ಭಾರತ್ ಜೋಡೋ ಯುವ ಸಂಘ” ವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಇದು ರಾಜಕೀಯ ಪ್ರೇರಿತ ಸಂಘಟನೆಯಾಗಿದ್ದು, ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು “ಭಾರತ್ ಜೋಡೋ ಯುವ ಸಂಘ” ವನ್ನು ಮುನ್ನಡೆಸಲು ಸರಕಾರದ ಮೂಲಕ ತಲಾ 10 ಲಕ್ಷ ರೂ. ಬಿಡುಗಡೆ ಮಾಡುವುದಾಗಿ ನೂತನ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಇದು ಜನರು ಪಾವತಿಸಿದ ತೆರಿಗೆ ಹಣವಾಗಿದ್ದು, ಯಾವುದೇ ಕಾರಣಕ್ಕು ಈ ರೀತಿಯ ರಾಜಕೀಯ ಲಾಭದ ದೃಷ್ಟಿಕೋನದ ಸಂಘಗಳಿಗೆ ವಿನಿಯೋಗ ಮಾಡಬಾರದು ಮತ್ತು ಗ್ರಾಮಗಳಲ್ಲಿ ಸಂಘರ್ಷಕ್ಕೆ ಕಾರಣವಾಗಬಲ್ಲ ಸಂಘಟನೆಗಳನ್ನು ಸರಕಾರ ರಚಿಸಬಾರದು ಎಂದು ಒತ್ತಾಯಿಸಿದ್ದಾರೆ. ಈ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಹಗಲುಗನಸಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಭಾರತ್ ಜೋಡೋ” ಯಾತ್ರೆಯನ್ನು ದೇಶವ್ಯಾಪಿ ಕೈಗೊಂಡು ರಾಜಕೀಯ ಲಾಭ ಗಳಿಸುವಲ್ಲಿ ವಿಫಲರಾಗಿದ್ದರು. ಈ ಯಾತ್ರೆಗೆ ಕಾಂಗ್ರೆಸ್ ಪಕ್ಷದ ಹಣ ವಿನಿಯೋಗವಾಗಿತ್ತು. ಆದರೆ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿರುವ “ಭಾರತ್ ಜೋಡೋ ಯುವ ಸಂಘ” ಗಳಿಗೆ ಜನರ ತೆರಿಗೆ ಹಣವನ್ನು ನೀಡಲಾಗುತ್ತಿದ್ದು, ಇದು ಖಂಡನೀಯ. ಸರಕಾರ ತಕ್ಷಣ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ಪಕ್ಷದ ಸಂಘಟನೆಗಾಗಿ ಮತ್ತು ಮುಂಬರುವ ಚುನಾವಣೆಗಳಲ್ಲಿ ಲಾಭ ಗಳಿಸುವುದಕ್ಕಾಗಿ “ಭಾರತ್ ಜೋಡೋ” ಹೆಸರಿನಲ್ಲಿ ಸಂಘವನ್ನು ರಚಿಸಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ. ಈ ರೀತಿಯ ಸಂಘಗಳ ಸ್ಥಾಪನೆಯಿಂದ ಗ್ರಾಮಗಳಲ್ಲಿ ದ್ವೇಷ ಮತ್ತು ಅಶಾಂತಿಯ ವಾತಾವರಣ ಸೃಷ್ಟಿಯಾಗುವ ಆತಂಕವಿದೆ. ಇದಕ್ಕೆ ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲವೆಂದು ಕಂಠಿ ಕಾರ್ಯಪ್ಪ ಎಚ್ಚರಿಕೆ ನೀಡಿದ್ದಾರೆ. ರಾಜಕೀಯ ಪ್ರೇರಿತ ಸಂಘಟನೆಯ ರಚನೆಗಾಗಿ ತಲಾ 10 ಲಕ್ಷ ರೂ.ಗಳನ್ನು ನೀಡುವ ಬದಲು ರಾಜ್ಯದ ಜನರ ಮೇಲೆ ಹೊರಿಸಿರುವ ತೆರಿಗೆ ಹೊರೆಯನ್ನು ಕಡಿಮೆ ಮಾಡಲಿ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲಿ. ಯುವ ಸಮೂಹದ ಪ್ರಗತಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ಅಷ್ಟು ಕಾಳಜಿ ಇದ್ದರೆ ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕ್ ಮತ್ತು ಸಹಕಾರ ಸಂಘಗಳ ಮೂಲಕ ಬಡ್ಡಿ ರಹಿತ ಸಾಲವನ್ನು ನೀಡಲಿ ಎಂದು ಒತ್ತಾಯಿಸಿದ್ದಾರೆ.








