
ಮಡಿಕೇರಿ ಜೂ.15 NEWS DESK : ಮಡಿಕೇರಿ ನಗರದ ಭಾರತೀಯ ವಿದ್ಯಾಭವನದಲ್ಲಿ 2001 ರಲ್ಲಿ ಆರಂಭಗೊಂಡ “ಯೋಗ ಭಾರತಿ” ಯೋಗ ತರಬೇತಿ ಕೇಂದ್ರದ ರಜತ ಮಹೋತ್ಸವ ಸಮಾರಂಭ ಜೂ.17 ರಂದು ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ “ಯೋಗ ಭಾರತಿ”ಯ ಸಂಸ್ಥಾಪಕ ಹಾಗೂ ಯೋಗ ಗುರು ಕೆ.ಕೆ.ಮಹೇಶ್ ಕುಮಾರ್ ಅವರು ಬುಧವಾರ ನಗರದ ರೆಡ್ಬ್ರಿಕ್ಸ್ನ ಸತ್ಕಾರ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಅಪರ ಜಿಲ್ಲಾಧಿಕಾರಿ ಡಾ.ಸಹನ ಎಸ್.ಹಾದಿಮನಿ, ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ, ಯೋಗ ಭಾರತಿಯ ಪೋಷಕ ಡಾ.ಮನೋಹರ್ ಜಿ.ಪಾಟ್ಕರ್, ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಹಾಗೂ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ಜಿ. ಅವರುಗಳು ಪಾಲ್ಗೊಳ್ಳಲಿದ್ದಾರೆ. ಯೋಗದ ಮಹತ್ವದ ಕುರಿತು ಆಯುಷ್ ಇಲಾಖೆಯ ಡಾ.ಅರುಣ ಮಾಹಿತಿ ನೀಡಲಿದ್ದು, ಯೋಗ ಭಾರತಿ ಮತ್ತು ಯೋಗ ಸಂಧ್ಯಾ ತರಗತಿಯ ಯೋಗ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಲಿದೆ ಎಂದರು. ನಗರದ ಭಾರತೀಯ ವಿದ್ಯಾಭವನದಲ್ಲಿ 2001 ರಲ್ಲಿ ಆರಂಭಗೊಂಡ “ಯೋಗ ಭಾರತಿ” 25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಪ್ರತಿದಿನ ಬೆಳಗ್ಗೆ 5.30 ಗಂಟೆಗೆ ಯೋಗಾಭ್ಯಾಸ ನಡೆಯುತ್ತದೆ. ಕಳೆದ 10 ವರ್ಷಗಳಿಂದ ಮಹಿಳೆಯರಿಗಾಗಿ “ಯೋಗ ಸಂಧ್ಯಾ” ಹೆಸರಿನಲ್ಲಿ ಯೋಗ ತರಗತಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಹಿರಿಯರು, ಕಿರಿಯರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಯೋಗ ತರಬೇತಿಯ ಲಾಭ ಪಡೆಯುತ್ತಿದ್ದಾರೆ ಎಂದು ಮಹೇಶ್ ಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಯೋಗ ಶಿಕ್ಷಕಿ ಸರಿತ, ಪ್ರಮುಖರಾದ ಸಂಗೀತ, ಸುಧೀರ್, ಪ್ರಭಾಕರ್ ಹಾಗೂ ಸರೋಜಿನಿ ಉಪಸ್ಥಿತರಿದ್ದರು.









