
ಮಡಿಕೇರಿ ಜೂ.20 NEWS DESK : ಮಕ್ಕಂದೂರು ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಲೇರಿಯಾ ವಿರೋಧ ಮಾಸಾಚಾರಣೆ ಹಾಗೂ ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಮುಂಜಾಗ್ರತಾ ಕ್ರಮಗಳ ಕುರಿತು ಆರೋಗ್ಯ ಅರಿವು ಮೂಡಿಸಲಾಯಿತು. ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಿಂದ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಅವರು ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಮಾಹಿತಿ ನೀಡುತ್ತಾ ಮಲೇರಿಯಾ, ಡೆಂಗ್ಯೂ ಜ್ವರ ಸೇರಿದಂತೆ ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆ ಕುರಿತು ತಿಳಿಸಿ ರೋಗ ಲಕ್ಷಣಗಳು ಮತ್ತು ಮಹತ್ವದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಲಾಯಿತು. ಹಾಗೆಯೇ ಶಾಲಾ ಅಡಿಗೆ ಕೊಠಡಿ ಪರಿಸರ, ಪರಿಕರಗಳ ಸ್ವಚ್ಚತೆ, ಅಯೋಡಿನ್ ಯುಕ್ತ ಉಪ್ಪಿನ ಮಹತ್ವ ಬಗ್ಗೆ ಶಿಕ್ಷಣ ನೀಡಿದರು. ಮಕ್ಕಳಿಗೆ ಮನೆ ಮತ್ತು ಶಾಲೆ ಅವರಣದಲ್ಲಿ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ ಮೂಲದಲ್ಲಿ ಲಾರ್ವಾ ನಿರ್ಮೂಲನೆ ಮಾಡುವ ಮೂಲಕ ಡೆಂಗ್ಯೂನಂತಹ ಜ್ವರ ನಿಯಂತ್ರಿಸಲು ಮುಂದಾಗುವಂತೆ ಹಾಗೂ ಮನೆಯಲ್ಲಿ ಶೇಖರಿಸುವ ನೀರಿನ ತೊಟ್ಟಿ ಡ್ರಮ್ಮುಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಚಗೊಳಿಸಿ ಒಣಗಿಸಿ ನೀರು ತುಂಬಿಸುವುದು ಮತ್ತು ಮುಚ್ಚಳದಿಂದ ಮುಚ್ಚುವಂತೆ ತಿಳಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ಮಾತನಾಡಿ 14 ವರ್ಷದಿಂದ 15 ವರ್ಷ ಒಳಪಟ್ಟ ಹೆಣ್ಣುಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಪ್ಪಿಸಲು ಎಚ್ಪಿವಿ ವ್ಯಾಕ್ಸಿನೇಷನ್ ನೀಡಿಸುವಂತೆ ಪೋಷಕರಿಗೆ ಮನವೊಲಿಸಲು ತಿಳಿಸಿದರು. 100 ಡೇಸ್ ಟಿಬಿ ಕ್ಯಾಂಪೇನ್ನ ಬಗ್ಗೆ ಮತ್ತು ನಶಮುಕ್ತ ಭಾರತ ಅಭಿಯಾನದ ಮಹತ್ವದ ಹಾಗೂ ಇದೇ ತಿಂಗಳ 28 ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮದಲ್ಲಿ 0-5 ವರ್ಷದ ಎಲ್ಲಾ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಆರೋಗ್ಯ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕರಾದ ಹರೀಣಾಕ್ಷಿ ಪಿ. ಅವರು ಮಾತನಾಡಿದರು. ಶಾಲಾ ಶಿಕ್ಷಕರಾದ ವನಜಾಕ್ಷಿ, ಪೂರ್ಣಿಮಾ ಮತ್ತು ರತಿ ಕುಮಾರಿ, ಸಹನ ಎಂ. ಅವರು ಹಾಜರಿದ್ದರು.









