
ಕುಶಾಲನಗರ ಜೂ.22 NEWS DESK : ಬಸವಣ್ಣನವರ ವಚನಗಳು ಕೇವಲ ಓದು ಅಥವಾ ಉದ್ಯೋಗಕ್ಕಾಗಿ ಸೀಮಿತವಾಗದೆ, ಜೀವನದ ಮೌಲ್ಯಗಳಾಗಿ ಅಳವಡಿಸಿಕೊಳ್ಳಬೇಕು ಎಂದು ಪುಣೆಯ ಬಸವ ತಿಳವಳಿಕೆ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಚಿಕ್ಕಅಳುವಾರದ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿ ಆಯೋಜಿಸಿದ್ದ “ಸಾಂಸ್ಕೃತಿಕ ನಾಯಕ ಬಸವಣ್ಣ” ವಿಶೇಷ ಉಪನ್ಯಾಸ ಹಾಗೂ ವಚನ ಗಾಯನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ಮಾತನಾಡಿದರು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಬಸವಾದಿ ಶರಣರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಚನಗಳು ಸಮಾನತೆ, ಮಾನವೀಯತೆ ಹಾಗೂ ವೈಚಾರಿಕ ಕ್ರಾಂತಿಯ ಸಂದೇಶವನ್ನು ಸಾರಿದ್ದು, ಲಿಂಗಾಯತವು ಜಾತಿ ಅಥವಾ ಧರ್ಮವಲ್ಲ; ಅದು ಪ್ರಾಯೋಗಿಕ ಬದುಕಿನತ್ತ ಕೊಂಡೊಯ್ಯುವ ವೈಚಾರಿಕ ಆಂದೋಲನವಾಗಿದೆ ಎಂದು ಅವರು ಹೇಳಿದರು. ಜಗತ್ತಿನಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಗಳ ಅಸ್ತಿತ್ವ ಹಾಗೂ ಮಹಿಳಾ ಸ್ವಾತಂತ್ರ್ಯದ ಪರ ಧ್ವನಿ ಎತ್ತಿದವರಲ್ಲಿ ಬಸವಾದಿ ಶರಣರು ಪ್ರಮುಖರು. ಶರಣರು ಬೋಧನೆ ಮಾಡುವುದಕ್ಕಿಂತ ತಮ್ಮ ಬದುಕಿನ ಮೂಲಕವೇ ಆದರ್ಶವನ್ನು ತೋರಿಸಿದರು. ಅವರು ನುಡಿದಂತೆ ನಡೆದವರು ನಡೆದಂತೆ ನುಡಿದವರು. ದಾಸೋಹದ ತತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಮಾತ್ರವಲ್ಲ, ವಿಶ್ವನಾಯಕ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರು ಮಾತನಾಡಿ, ಬಸವಣ್ಣನವರ ವಚನಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಬಸವಾದಿ ಶರಣರ ಸಮಾನತೆ, ಶ್ರಮದ ಗೌರವ, ಮಾನವೀಯ ಮೌಲ್ಯಗಳು ಮತ್ತು ವೈಜ್ಞಾನಿಕ ಮನೋಭಾವವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಹಿಂದುಸ್ತಾನಿ ಗಾಯಕ **ಡಾ. ಮೃತ್ಯುಂಜಯ ಶೆಟ್ಟರ ಅವರು ವಚನ ಗಾಯನ ನಡೆಸಿಕೊಟ್ಟರು. ನಂತರ ಮಾತನಾಡಿದ ಅವರು, ಜಗತ್ತಿನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಮಹನೀಯರಲ್ಲಿ ಬಸವಣ್ಣ ಪ್ರಮುಖರು ಎಂದರು. ಅವರ ವಚನಗಳು ವಿಶ್ವದ ಹಲವು ದೇಶಗಳಲ್ಲಿ ಅಧ್ಯಯನ, ಭಾಷಾಂತರ ಮತ್ತು ಗಾಯನದ ಮೂಲಕ ಜನರಿಗೆ ತಲುಪಿವೆ. ಸಂಗೀತವು ಕೇವಲ ಮನರಂಜನೆಯ ಸಾಧನವಲ್ಲ; ಅದು ಮನಸ್ಸಿಗೆ ಬೆಳಕು ನೀಡುವ ಮಾಧ್ಯಮವಾಗಿದೆ. ಈ ನಿಟ್ಟಿನಲ್ಲಿ ಬಸವಣ್ಣನವರ ವಚನಗಳನ್ನು ಕೇವಲ ಒಂದು ಊರಿಗೆ ಜಿಲ್ಲೆಗೆ ಸೀಮಿತಗೊಳಿಸದೆ ಇಂದಿನ ಯುವಜನತೆ ಬಸವಣ್ಣನವರ ವಚನಗಳನ್ನು ಓದಿ ಅರ್ಥೈಸಿಕೊಂಡು ಬದುಕಿನದ್ದಕ್ಕೂ ಅನ್ವಯಿಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು ಮೌಲ್ಯಮಾಪನ ಡಾ. ಸುರೇಶ್ ಎಂ, ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪುಟ್ಟರಾಜಪ್ಪ, ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಸಂಗಮೇಶ, ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ರಮೇಶ್ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ಡಾ. ಜಮೀರ್ ಅಹಮದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.









