
ಮಡಿಕೇರಿ ಜೂ.27 NEWS DESK : ಮಡಿಕೇರಿಯ ಜಿಲ್ಲಾ ನ್ಯಾಯಾಲಯ ಮತ್ತು ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ಹಿನ್ನೆಲೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಶುಕ್ರವಾರ ರಾತ್ರಿ 9.55ರ ಸಮಯದಲ್ಲಿ ಔಟ್ ಲುಕ್ ಮೇಲ್ ಮೂಲಕ ಸಂದೇಶ ರವಾನಿಸಲಾಗಿದೆ. ಜಿಲ್ಲಾ ನ್ಯಾಯಾಧೀಶರಿಗೆ ಈ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದ್ದು, ದುರ್ಗಾ ಸ್ಟಾಲಿನ್ ಎಂಬುವವರು ಪ್ರವಾದಿ ಅವರನ್ನು ಅವಹೇಳನ ಮಾಡಿದ್ದಾರೆ ಎಂದು ಸಂದೇಶದಲ್ಲಿ ಬರೆಯಲಾಗಿದೆ. ಮಾತ್ರವಲ್ಲದೆ ತಮಿಳುನಾಡು ಮಾಜಿ ಸಿ.ಎಂ ಸ್ಟಾಲಿನ್ ಅವರ ಬಗ್ಗೆಯೂ ಆರೋಪಗಳನ್ನು ಮಾಡಿರುವುದು ಕಂಡು ಬಂದಿದೆ. ಒಟ್ಟು 5 ಸಿಲಿಕಾನ್ ಬಾಂಬ್ ಇಡಲಾಗಿದೆ ಎಂದು ಉಲ್ಲೇಖಿಸಲಾಗಿದ್ದು, 5 ಸಿಲಿಕಾನ್ ಬಾಂಬ್ ಗಳ ಪೈಕಿ 3 ಬಾಂಬ್ಗಳ್ನು ರೆಕಾರ್ಡ್ ಕೊಠಡಿಯಲ್ಲಿ ಮತ್ತು 2 ಬಾಂಬ್ ಗಳನ್ನು ಕೋರ್ಟ್ನ ಮೊದಲ ಮಹಡಿಯ ಈ-ಸೇವಾ ಕೇಂದ್ರದಲ್ಲಿಡಲಾಗಿದೆ. ಮಧ್ಯಾಹ್ನ 2.20 ಗಂಟೆಗೆ ನ್ಯಾಯಾಧೀಶರನ್ನು ಕೋರ್ಟ್ನಿಂದ ಖಾಲಿ ಮಾಡಿಸಬೇಕು ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಕೋರ್ಟ್ ಅಧಿಕಾರಿಗಳು ಈ ಸಂದೇಶ ನೋಡಿದ ತಕ್ಷಣ ನ್ಯಾಯಾಧೀಶರ ಗಮನಕ್ಕೆ ತಂದಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಕೋರ್ಟ್ ಮತ್ತು ಕೇಂದ್ರೀಯ ವಿದ್ಯಾಲಯದಲ್ಲಿ ತೀವ್ರ ತಪಾಸಣೆ ನಡೆಸಲಾಯಿತು. ಕೊಡಗು ಜಿಲ್ಲಾ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ ಮತ್ತು ಶ್ವಾನ ದಳದ 2 ತಂಡಗಳು ಏಕ ಕಾಲದಲ್ಲಿ ನ್ಯಾಯಾಲಯದ ಕಟ್ಟಡ ಮತ್ತು ಕೇಂದ್ರೀಯ ವಿದ್ಯಾಲಯಲಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕೋರ್ಟ್ ಸಿಬ್ಬಂದಿಗಳು, ವಕೀಲರು, ನ್ಯಾಯಾಧೀಶರು ಹಾಗೂ ವಿದ್ಯಾಲಯದ ಸಿಬ್ಬಂದಿಗಳು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿ ಎಲ್ಲಾ ಕಡೆಗಳಲ್ಲಿ ತೀವ್ರ ಶೋಧ ನಡೆಸಲಾಯಿತು. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬರಲಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುವುದು ಖಚಿತವಾಯಿತು. ನಂತರ ನ್ಯಾಯಾಲಯ ಹಾಗೂ ಕೇಂದ್ರೀಯ ವಿದ್ಯಾಲಯಕ್ಕೆ ತೆರಳಲು ಪೊಲೀಸರು ಅನುಮತಿಸಿದರು. ಇದು 3ನೇ ಬಾಂಬ್ ಬೆದರಿಕೆಯ ಸಂದೇಶವಾಗಿದ್ದು, ಈ ಹಿಂದೆ ಫೆ.16, ಜೂ.23ರಂದು ಕೂಡ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಮಡಿಕೇರಿ ನ್ಯಾಯಾಲಯಕ್ಕೆ ಬಂದಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಸಿ.ಟಿ.ಜೋಸೆಫ್ ಅವರು 3ನೇ ಬಾರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇದೊಂದು ಹುಸಿ ಬಾಂಬ್ ಬೆದರಿಕೆ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಾಗಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.









