ಮಡಿಕೇರಿ ಜ.23 : ಗಣರಾಜ್ಯೋತ್ಸವ ಪ್ರಯುಕ್ತ ಎಸ್ಕೆಎಸ್ಎಸ್ಎಫ್ ಸಂಘಟನೆ ವತಿಯಿಂದ ರಾಷ್ಟç ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಸಂದೇಶದೊಂದಿಗೆ ಮಡಿಕೇರಿಯಲ್ಲಿ ಮಾನವ ಸರಪಳಿ ಮತ್ತು ಸೌಹಾರ್ದ ಜಾಥಾ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು ದೇಶ ಹಾಗೂ ವಿದೇಶದ ವಿವಿಧ ಭಾಗಗಳಲ್ಲಿ ಜ.26 ರಂದು ಗಣರಾಜ್ಯೋತ್ಸವ ಪ್ರಯುಕ್ತ ಮಾನವ ಸರಪಳಿ ಮತ್ತು ಸೌಹಾರ್ದ ಜಾಥಾ ಆಯೋಜಿಸಲಾಗುತ್ತಿದೆ. ಮಡಿಕೇರಿಯಲ್ಲಿ ಅಂದು ಸಂಜೆ 4ಗಂಟೆಗೆ ಗಣಪತಿ ಬೀದಿಯಲ್ಲಿರುವ ಬದ್ರಿಯಾ ಮಸೀದಿಯಿಂದ ಕಾವೇರಿ ಕಲಾಕ್ಷೇತ್ರದ ವರೆಗೆ ಜಾಥಾ ನಡೆಯಲಿದೆ. ನಂತರ 14ನೇ ವರ್ಷದ ಬಹುಜನ ಸೌಹಾರ್ದ ಸಂಗಮ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಕೋಮುವಾದ, ದ್ವೇಷ ಹಬ್ಬಿಸಿ ದೇಶದ ಮಹನೀಯ ಪಾರಂಪರ್ಯವನ್ನು ಕಡಿಸಿಲು ಪ್ರಯತ್ನಿಸುತ್ತಿರುವ ವಿಧ್ವಂಸಕ ಶಕ್ತಿಗಳ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಶಾಂತಿಯುತ ವಾತಾವರಣ ಉಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ರಾಜಕೀಯ ಲಾಭಕ್ಕಾಗಿ ದೇಶದಲ್ಲಿ ಉಂಟಾಗುತ್ತಿರುವ ಅಶಾಂತಿಯ ಕುರಿತು ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಗುವುದು. ವಿವಿಧ ಧರ್ಮಗುರುಗಳು, ರಾಜಕೀಯ ಮತ್ತು ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಎಸ್ಕೆಎಸ್ಎಸ್ಎಫ್ ಸಂಘಟನೆಯು ದೇಶ ವಿದೇಶಗಳಲ್ಲಿ ಸಾಮಾಜಿಕ ಕಾರುಣ್ಯ ಕಾರ್ಯವೈಖರಿಗಳಲ್ಲಿ ಮುಂಚೂಣಿಯಲ್ಲಿ ಕಾರ್ಯಚರಿಸುತ್ತಿದೆ. ಅನಾಥರಿಗೆ, ನಿರ್ಗತಿಕರಿಗೆ, ರೋಗಿಗಳಿಗೆ ಆಶಾ ಕೇಂದ್ರವಾಗಿ ಕಾರ್ಯಾಚರಿಸುತ್ತಿದೆ. ಯುವ ಜನತೆಯನ್ನು “ಜ್ಞಾನ ವಿನಯ ಸೇವೆ” ಎಂಬ ಧ್ಯೇಯವಾಕ್ಯದಲ್ಲಿ ಮುನ್ನಡೆಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು 40 ಕ್ಕೂ ಅಧಿಕ ಶಾಖೆಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಎಂ.ತಮ್ಲಿಕ್ ಧಾರಿಮಿ, ಸಂಚಾಲಕ ಅಬ್ದುಲ್ ಕರೀಂ ಮುಸ್ಲಿಯಾರ್ ಸಿದ್ದಾಪುರ, ಉಪಾಧ್ಯಕ್ಷ ಉಮ್ಮರ್ ಮುಸ್ಲಿಯಾರ್ ನಲ್ವತ್ತೆಕ್ಕರೆ, ಸದಸ್ಯರುಗಳಾದ ಆರಿಫ್ ಫೈಝಿ ಒಂಟಿಯಂಗಡಿ ಹಾಗೂ ಶರಪುದ್ದೀನ್ ಸಿದ್ದಾಪುರ ಉಪಸ್ಥಿತರಿದ್ದರು.








