ಮಡಿಕೇರಿ ಫೆ.13 : ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಿಂದ 64 ಸ್ನಾತಕ-ಸ್ನಾತಕೋತ್ತರ ಪದವಿ, ಡಿಪ್ಲೋಮಾ ಶಿಕ್ಷಣಕ್ಕೆ ಅವಕಾಶವನ್ನು ಒದಗಿಸಲಾಗಿದೆ. ಅಲ್ಲದೆ ಆಯಾ ಪ್ರಾದೇಶಿಕ ಕೇಂದ್ರಗಳಲ್ಲೆ ಶಿಕ್ಷಣಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಮಡಿಕೇರಿ ಸೇರಿದಂತೆ ರಾಜ್ಯದ 23 ಜಿಲ್ಲಾ ಕೇಂದ್ರ್ರಗಳಲ್ಲಿ ಪ್ರದೇಶಿಕ ಕೇಂದ್ರ್ರಗಳನ್ನು ತೆರೆಯಲಾಗಿದೆ. ಆ ಮೂಲಕ ಶಿಕ್ಷಣ ಪ್ರತಿಯೊಬ್ಬರಿಗೆ ತಲುಪಿಸಬೇಕೆನ್ನುವ ಚಿಂತನೆಗಳಡಿ ಮುಕ್ತ ವಿವಿ ಕಾರ್ಯತತ್ಪರವಾಗಿದೆ ಎಂದರು.
‘ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ’ ಎಂಬ ಘೋಷ ವಾಕ್ಯದೊಂದಿಗೆ ಸ್ಥಾಪನೆಯಾಗಿರುವ ಮುಕ್ತ ವಿವಿ, 18 ವರ್ಷದಿಂದ 80 ವರ್ಷ ವಯೋಮಾನದವರೆಗಿನ ಲಕ್ಷಾಂತರ ಮಂದಿಗೆ ವಿದ್ಯೆ ನೀಡಿ, ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.
ಮುಕ್ತ ವಿಶ್ವ ವಿದ್ಯಾನಿಲಯದ ವಾರ್ಷಿಕ, ಸೆಮಿಸ್ಟರ್ ಪರೀಕ್ಷೆಗಳು ಮಡಿಕೇರಿಯ ಪ್ರಾದೇಶಿಕ ಕೇಂದ್ರದಲ್ಲೇ ನಡೆಯುತ್ತವೆ. ಮುಕ್ತ ವಿವಿಯ ವಾರಾಂತ್ಯ ಸಂಪರ್ಕ ತರಗತಿಗಳನ್ನು ಮತ್ತು ವಿಜ್ಞಾನ ವಿಷಯಗಳಿಗೆ ಪ್ರಾಯೋಗಿಕ ತರಗತಿಗಳನ್ನು ಕಲಿಕಾರ್ಥಿ ಸಹಾಯ ಕೇಂದ್ರದಲ್ಲಿ ನಡೆಸಲು ಕ್ರಮವಹಿಸಲಾಗುತ್ತಿದೆಯೆಂದು ಮಾಹಿತಿ ನೀಡಿದರು.
::: ಹೊಸ ಕೋರ್ಸ್ಗಳ ಸೇರ್ಪಡೆ :::
ಮುಕ್ತ ವಿವಿಯು ಪ್ರಸಕ್ತ ಸಾಲಿನಿಂದ ಸಮಾಜ ಕಾರ್ಯ (ಎಂ.ಎಸ್.ಡಬ್ಯು.), ಪ್ರವಾಸೋದ್ಯಮ, ಭೂವಿಜ್ಞಾನ ಮತ್ತು ಇನ್ನಿತರೆ ಹೊಸ ಕೋರ್ಸ್ಗಳನ್ನು ಸಏರ್ಪಡೆ ಮಾಡಿದ್ದು, ಪ್ರವೇಶಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆಯಂದು ಮಾಹಿತಿ ನೀಡಿದರು.
ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ (ಭೌತಿಕ ಶಿಕ್ಷಣ-ರೆಗ್ಯುಲರ್) ಒಂದು ಕೋರ್ಸ್ ಮತ್ತು ದೂರಶಿಕ್ಷಣದಲ್ಲಿ (ಮುಕ್ತ ವಿವಿ) ಇನ್ನೊಂದು ಕೋರ್ಸ್ನ್ನು ಏಕಕಾಲದಲ್ಲೇ ಮಾಡಲು ಅವಕಾಶ ಒದಗಿಸಲಾಗಿದೆಯೆಂದು ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.
::: ನೇರ ಪ್ರವೇಶ :::
ಇತರ ಕಾಲೇಜಿನಲ್ಲಿ ಅಥವಾ ರೆಗ್ಯಲರ್ ಆಗಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಂಗ ಮಾಡಿ ಕಾರಣಾಂತರಗಳಿಂದ ಓದಲು ಆಗದಿದ್ದರೆ ಅಥವಾ ರೆಗ್ಯುಲರ್ ಆಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಆರ್ಹತಾ ಮಾನದಂಡಗಳನ್ನು ಪೂರೈಸಿ 2ನೇ ಮತ್ತು 3ನೇ ವರ್ಷಕ್ಕೆ ಮುಕ್ತ ವಿವಿಯಲ್ಲಿ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಅಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಬಹುದೆಂದರು.
::: ಮಡಿಕೇರಿಯಲ್ಲಿ ಪ್ರಾದೇಶಿಕ ಕೇಂದ್ರ :::
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮಡಿಕೇರಿ ನಗರದಲ್ಲಿ 2021ರಲ್ಲಿ ಡಿಸೆಂಬರ್ ತಿಂಗಳಲ್ಲಿ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸುವುದರ ಮೂಲಕ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಸದರಿ ಕೇಂದ್ರವು ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇರುವ ಹಳೇ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದೆ. ಈ ಕಛೇರಿಯಲ್ಲಿ ನುರಿತ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಗೆ ಕರಾಮುವಿವಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.
::: ಪ್ರವೇಶಾತಿ ಪ್ರಾರಂಭ :::
ಪ್ರಸ್ತುತ 2022-23ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಪ್ರವೇಶಾತಿ ಪ್ರಕಟಣೆಯು ಪ್ರಸಕ್ತ ಸಾಲಿನ ಜ.17 ರಿಂದ ಪ್ರಾರಂಭವಾಗಿದ್ದು, ಪ್ರವೇಶಾತಿ ಪ್ರಕ್ರಿಯೆಗಳು ನಡೆಯುತ್ತಿವೆ.ಮಾ.31 ಪ್ರವೇಶಾತಿಗೆ ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಕರ್ನಾಡಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಡಿಕೇರಿ ಪ್ರಾದೇಶಿಕ ಕೇಂದ್ರ, ಸರಕಾರಿ ಪ್ರಾಥಮಿಕ ಶಾಲೆ ಹಳೇ ಕಟ್ಟಡ ಜೂನಿಯರ್ ಕಾಲೇಜು ಆವರಣ ಮಡಿಕೇರಿ-571201 ದೂರವಾಣಿ ಸಂಖ್ಯೆ:- 08272-201147, 8073342310, 9141938803 ಅನ್ನು ಸಂಪರ್ಕಿಸಬಹುದು.
ಮುಂದಿನ ದಿನಗಳಲ್ಲಿ ಮಡಿಕೇರಿ ಪ್ರಾದೇಶಿಕ ಕೇಂದ್ರವನ್ನು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇರುವ ಫೀ.ಮಾ.ಕೆ.ಎಂ ಕಾರ್ಯಪ್ಪ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದೆಂದು ತಿಳಿಸಿದರು.
::: ಶುಲ್ಕ ರಿಯಾಯಿತಿ :::
ಮುಕ್ತ ವಿವಿಯು ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೋ, ಕ್ಯಾಬ್ ಚಾಲಕರು ಮತ್ತು ಅವರ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ, ಕೆಎಸ್ಆರ್ಟಿಸಿ, ಬಿಎಚಿಟಿಸಿ, ಎನ್ಡಬ್ಲ್ಯುಕೆಸ್ಆರ್ಟಿಸಿ, ಕೆಕೆಆರ್ಟಿಸಿ ನೌಕರರಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಒದಗಿಸುತ್ತಿರುವುದಾಗಿ ಹೇಳಿದರು.
::: ಶುಲ್ಕ ವಿನಾಯಿತಿ :::
ತೃತೀಯ ಲಿಂಗದ ವಿದ್ಯಾರ್ಥಿಗಳಿಗೆ, ದೃಷ್ಠಿಹೀನ ವಿದ್ಯಾರ್ಥಿಗಳಿಗೆ (ಬಿಇಡಿ, ಎಂಬಿಎ ಹೊರತುಪಡಿಸಿ), ಕೋವಿಡ್-19ರ ಸಾಂಕ್ರಾಮಿಕ ರೋಗದಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಪ್ರವೇಶಾತಿ ನೀಡಲಾಗುತ್ತದೆಂದು ಸಷ್ಟಪಡಿಸಿದರು.
ಕಾನೂನು ವ್ಯಾಸಂಗ ಆರಂಭಕ್ಕೆ ಪ್ರಯತ್ನ- ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಯಲದಲ್ಲಿ ಕಾನೂನು ಶಾಸ್ತ್ರ ಅಧ್ಯಯನಕ್ಕೆ (ಎಲ್ಎಲ್ಬಿ) ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಪ್ರಯತ್ನಗಳನ್ನು ಮಾಡಲಾಗುತ್ತದೆಂದು ತಿಳಿಸಿದರು.
::: ಜಾಗಕ್ಕೆ ಪ್ರಯತ್ನ :::
ಜಿಲ್ಲೆಯಲ್ಲು ಮುಕ್ತ ವಿವಿಯ ಮೂಲಕ ಶಿಕ್ಷಣಾರ್ಥಿಗಳಿಗೆ ಅಗತ್ಯ ತರಗತಿಗಳನ್ನು, ಪಾಠ ಪ್ರವಚನಗಳನ್ನು ಒದಗಿಸುವುದಕ್ಕೆ ಪೂರಕವಾದ ವ್ಯವಸ್ಥೆ ಕಲ್ಪಿಸಲು ಒಂದರಿಂದ ಎರಡು ಏಕರೆ ಜಾಗದ ಅಗತ್ಯವಿದ್ದು, ಆ ನಿಟ್ಟಿನ ಪ್ರಯತ್ನಗಳು ನಡೆದಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಕ್ತ ವಿವಿಯ ಕಾರ್ಯನಿರ್ವಾಹಕ ಅಭಿಯಂತರ ಭಾಸ್ಕರ್ ಹಾಗೂ ಮಡಿಕೇರಿ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಮುಕ್ಕಾಟೀರ ಸ್ಮಿತಾ ಸುಬ್ಬಯ್ಯ ಉಪಸ್ಥಿತರಿದ್ದರು.







