ಸೋಮವಾರಪೇಟೆ ಮೇ 30 : ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹತೋಟಿಗೆ ಬಂದರೆ, ಸಾರ್ವಜನಿಕರು, ರೈತರು ನೆಮ್ಮದಿಯ ಬದುಕು ಕಂಡುಕೊಳ್ಳಬಹುದು ಎಂದು ಶಾಸಕ ಮಂತರ್ಗೌಡ ಅಭಿಪ್ರಾಯಿಸಿದರು.
ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೇಸಿ ವೇದಿಕೆಯಲ್ಲಿ ಕ್ಷೇತ್ರದ ಮತದಾರರಿಗೆ ಆಯೋಜಿಸಲಾಗಿದ್ದ ಕೃತಜ್ಞತಾ ಸಮರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಸಾರ್ವಜನಿಕರಿಂದ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದರು.
ಕಳೆದ 25 ವರ್ಷಗಳಿಂದ ಮಡಿಕೇರಿ ಕ್ಷೇತ್ರಕ್ಕೆ ಒಳಪಡುವ ಕಂದಾಯ ಇಲಾಖೆ ಸೇರಿದಂತೆ ಸಾರ್ವಜನಿಕರಿಗೆ ತುಂಬಾ ಅವಶ್ಯಕತೆಯ ಕೆಲಸಗಳು ಇರುವ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂಬ ದೂರಿದೆ. ಮುಂದೆ ಇವುಗಳಿಗೆ ಅವಕಾಶ ಇರುವುದಿಲ್ಲ. ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಸರ್ಕಾರಿ ಸೇವೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾವಂತರೆನಿಸಿಕೊಂಡಿರುವ ಸರ್ಕಾರಿ ನೌಕರರು ಸ್ಪಂದಿಸಬೇಕು ಎಂದರು.
ಮುಂದಿನ ಐದು ವರ್ಷದ ಆಡಳಿತ ಹೇಗೆ ನಡೆಸಬೇಕೆಂಬ ಚಿಂತನೆ ಮಾಡಿದ್ದೇನೆ. ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳು ಹಾಗೂ ಜನಪರ ಯೋಜನೆಗಳನ್ನು ಮತದಾರರಿಗೆ ಪ್ರಾಮಾಣಿಕವಾಗಿ ತಲುಪಿಸುವುದೇ ನನ್ನ ಗುರಿ ಎಂದರು.
ಮುಂದಿನ ಜಿ.ಪಂ, ತಾ.ಪಂ ಸಹಕಾರ ಸಂಘಗಳ ಚುನಾವಣೆ ಸಮೀಪಿಸುತ್ತಿದ್ದು ಪಕ್ಷದ ಎಲ್ಲಾ ಕಾರ್ಯಕರ್ತರು ಇಂದಿನಿಂದಲೇ ಕಾರ್ಯೋನ್ಮುಕರಾಗಬೇಕೆಂದು ಕರೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಎಂದಿಗೂ ಜಾತಿ ಹಾಗೂ ಧರ್ಮದ ರಾಜಕಾರಣ ಮಾಡುವುದಿಲ್ಲ. ಬದಲಾಗಿ ಶಾಂತಿ, ಸಹಬಾಳ್ವೆ, ಸಾಮರಸ್ಯದ ಮೂಲಕವೇ ನಾವು ಜನರ ಸೇವೆ ಮಾಡುತ್ತೇವೆ. ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಖಂಡಿತಾ ಈಡೇರಿಸಲಿದೆ. ಕೊಡಗಿನ ಅಭಿವೃದ್ದಿಗೆ ಮುನ್ನುಡಿ ಬರೆಯಲಾಗಿದೆ ಎಂದರು
ಕೆಪಿಸಿಸಿ ವಕ್ತಾರ ಚಂದ್ರಮೌಳಿ ಮಾತನಾಡಿ, ಬಿಜೆಪಿ ಮುಕ್ತ ಕೊಡಗು ಆಗಬೇಕಾದ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೇ ಮುಂದಿನ ಚುನಾವಣೆಗೆ ತಯಾರಿ ನಡೆಸಬೇಕು. ಕೊಡಗಿನಲ್ಲಿ ಕಾಂಗ್ರೆಸ್ಗೆ ಅಧಿಕಾರ ನೀಡಿದ ಜಿಲ್ಲೆಯ ಪ್ರಜ್ಞಾವಂತ ಮತ್ತು ವಿದ್ಯಾವಂತ ಮತದಾರರು ಬಿಜೆಪಿಯ ಭ್ರಷ್ಠಾಚಾರದಿಂದ ಬೇಸತ್ತು ಬದಲಾವಣೆ ಬಯಸಿದ್ದರು. ಮುಂದಿನ ದಿನಗಳಲ್ಲಿ ಕಳಪೆ ಕಾಮಗಾರಿ ನಡೆಸಿದ್ದ ಬಹುತೇಕ ಗುತ್ತಿಗೆದಾರರು ಜೈಲು ಕಂಬಿ ಎಣಿಸಲಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯೆ ಕೆ.ಪಿ.ಚಂದ್ರಕಲಾ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಮುಖಂಡರಾದ ಈಶ್ವರ್ ಚಂದ್ರ ಸಾಗರ್, ಶಾಂತವೇರಿ ವಸಂತ್, ಹಣಕೋಡು ಸುರೇಶ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಕ್ಷದ ವಿವಿಧ ಘಟಕಗಳ ಮುಖಂಡರಾದ ಬಿ.ಈ. ಜಯೇಂದ್ರ, ಕೆ.ಎ.ಯಾಕೂಬ್, ಎಚ್.ಎ.ನಾಗರಾಜು, ಎಸ್.ಎಂ.ಚಂಗಪ್ಪ, ಪಕ್ಷದ ವಕ್ತಾರ ತೆನ್ನೀರ ಮೈನಾ ಮತ್ತಿತರರು ಇದ್ದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ಪಕ್ಷದ ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ಕಾರ್ಯಕರ್ತರು ಪಟ್ಟಣದ ಮುಖ್ಯಬೀದಿಗಳಲ್ಲಿ ಪಟಾಕಿ ಸಿಡಿಸಿ ಹರ್ಷೋದ್ಘಾರ ವ್ಯಕ್ತಪಡಿಸಿದರು. ತೆರೆದ ವಾಹನದಲ್ಲಿ ಶಾಸಕ ಮಂತರ್ಗೌಡ ಹಾಗೂ ಪಕ್ಷದ ಮುಖಂಡರು ಇದ್ದರು. ಮೆರವಣಿಗೆಯಲ್ಲಿ ಉತ್ತರ ಕೊಡಗಿನ ಪ್ರಸಿದ್ದ ಸುಗ್ಗಿ ಕುಣಿತ ವಿಶೇಷ ನೃತ್ಯದ ಮೂಲಕ ಗಮನ ಸೆಳೆಯಿತು.









