ಮಡಿಕೇರಿ ಜೂ.6 : ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಾಕತ್ತೂರು ಗ್ರಾ.ಪಂ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಹಾಕತ್ತೂರು ಗ್ರಾ.ಪಂ ವ್ಯಾಪ್ತಿಯ ಉಳಿತ್ತಾಳ್ ವಾರ್ಡಿನ ಸದಸ್ಯರಾದ ಬಿ.ಎಸ್. ಶೀಲಾವತಿ ಮತ್ತು ತೊಂಬತ್ತುಮನೆ ವಾರ್ಡಿನಿಂದ ಆಯ್ಕೆಗೊಂಡಿದ್ದ ಎನ್.ಎಸ್.ಶೈನಿ ಅವರು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮತ್ತು ಪಕ್ಷದ ಮುಖಂಡರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಶಾಸಕರ ನಿವಾಸದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಾಕತ್ತೂರು ಗ್ರಾ.ಪಂ ಸದಸ್ಯರನ್ನು ಶಾಸಕರು ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.
ನಂತರ ಆತನಾಡಿದ ಎ.ಎಸ್.ಪೊನ್ನಣ್ಣ, ಸರ್ವರಿಗೂ ಸಮಾನ ಸ್ಥಾನಮಾನ ಕೊಡುವುದು ಕಾಂಗ್ರೆಸ್ ಪಕ್ಷದ ಕರ್ತವ್ಯವಾಗಿದೆ. ನಾಡಿನ ಸರ್ವಾಂಗೀಣ ಅಭಿವೃದ್ಧಿ ಮತ್ತು ಭ್ರಷ್ಟಾಚಾರ ರಹಿತವಾಗಿ ಪಾರದರ್ಶಕದೊಂದಿಗೆ ಆಡಳಿತ ನೀಡುವುದು ಮುಖ್ಯ ಎಂದರು.
ಪಕ್ಷದ ಸಿದ್ಧಾಂತ ತತ್ವಗಳನ್ನು ಆಧಾರಿಸಿ ಗೌರವಿಸಿ, ನಾಡಿನ ಹಿತ ಚಿಂತನೆಯನ್ನು ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ವಿರಾಜಪೇಟೆ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಹಾಕತ್ತೂರು ವಲಯ ಅಧ್ಯಕ್ಷ ಪಿಯೂಷ್ ಪೆರೇರಾ, ಮುಖಂಡರಾದ ಮಂದ್ರೀರ ನಾಗೇಶ್, ಬಿ.ಕೆ.ನಾರಾಯಣ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.







