ಚೆಯ್ಯಂಡಾಣೆ, ಜೂ 21 : ನರಿಯಂದಡ ಗ್ರಾ.ಪಂ ವತಿಯಿಂದ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿಯ ಕಾರ್ಯಾಲಯದ ಕಟ್ಟಡವನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಡೀ ದೇಶಾದ್ಯಂತ ಪಂಚಾಯಿತಿಗಳಿಗೆ ಒಂದು ಸುಸಜ್ಜಿತವಾದ ಕೇಂದ್ರಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಕಾರದಿಂದ ಅನುದಾನ ನೀಡಬೇಕೆಂದು ನರೇಗಾ ಯೋಜನೆಯನ್ನು 2008 ರಲ್ಲಿ ಜಾರಿಗೆ ತಂದು ಒಂದು ಪಂಚಾಯಿತಿ ಕೇಂದ್ರ ನಿರ್ಮಾಣಕ್ಕೆ ನೀಡಲಾಗುತ್ತಿತ್ತು. ಈ ಯೋಜನೇ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರವಾಗಿ ಪ್ರಾರಂಭವಾಗಿದ್ದರು ಎಲ್ಲೂ ಕೂಡ ಕೇಂದ್ರಗಳು ನಿರ್ಮಾಣವಾಗಲಿಲ್ಲ. ಹಳೇ ಕಟ್ಟಡಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ದೈನಂದಿನ ಕೆಲಸಗಳು ಮುಂದುವರಿಯುತಿತ್ತು. ಆದರೆ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬಂದನಂತರ ಪಂಚಾಯಿತಿಗಳಿಗೆ ಕೊಡುವ ಅನುದಾನವನ್ನು 18.75 ಸಾವಿರಕ್ಕೆ ಏರಿಸಿದ್ದು, ಇಂದು ಸುಸಜ್ಜಿತ ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ ಎಂದರು.
ಅಧ್ಯಕ್ಷರ ಕೊಠಡಿ ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೆÇನ್ನಣ್ಣ, ಸಂವಿದಾನವನ್ನು 72 ತಿದ್ದುಪಡಿಯ ಮೂಲಕ ಗ್ರಾ.ಪಂ ಅನ್ನು 1992 ರಲ್ಲಿ ಮಾಜಿ ಪ್ರಧಾನಿ ನರಸಿಂಹರಾವ್ ಸರಕಾರ ಇದ್ದಾಗ ಸಾಂವಿಧಾನಿಕ ಉದ್ದೇಶ ಎಂಬ ತಿದ್ದುಪಡಿಯ ಮೂಲಕ ತಂದರು. ಆ ತಿದ್ದುಪಡಿಯೇ ಇಲ್ಲದಿದ್ದರೆ ಇಂದು ನಾವು ನೋಡುತ್ತಿರುವ ಕಟ್ಟಡಗಳು ಇರುತ್ತಿರಲಿಲ್ಲ, ಗ್ರಾಮ ಪಂಚಾಯಿತಿಯಿಂದ ನಡೆಸುವ ಅಧಿಕಾರ, ಕಾಮಗಾರಿಗಳು ಯಾವುದು ಸಾಧ್ಯ ವಾಗುತ್ತಿರಲಿಲ್ಲ ಎಂದರು.
ಸಂವಿಧಾನಿಕವಾದ ಕಚೇರಿ ಎಲ್ಲಾ ಗ್ರಾ.ಪಂ ಗಳಲ್ಲೂ ಆಗಿರುದರಿಂದ ಗ್ರಾ.ಪಂ ಗಳಿಗೆ ಬಹಳ ದೊಡ್ಡ ಜವಾಬ್ದಾರಿ ಇದೆ. ನೇರವಾಗಿ ಜನರಿಗೆ ಮುಟ್ಟುವಂತಹ ಕಾರ್ಯಕ್ರಮಗಳು ಮತ್ತು ಜನರ ಕಷ್ಟಗಳಿಗೆ ಸ್ವಂದಿಸುವಂತಹ ಹೊಣೆಗಾರಿಕೆ ಮರೆಯುವಂತಿಲ್ಲ. ಕಚೇರಿಗಳು ಉತ್ತಮವಾಗಿದ್ದಾರೆ ಜನರ ಸೇವೆ ಮಾಡಲು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಗ್ರಾ.ಪಂ ಹೊಸ ಕಟ್ಟಡ ನಿರ್ಮಾಣ ವಾಗುತ್ತಿರುವುದು ದೇಶದ ಅಭಿವೃದ್ಧಿಯ ಸಂಕೇತ, ಕಡು ಬಡವರು ವಿದ್ಯಾವಂತರಿಗೆ ಉತ್ತಮ ರೀತಿಯಲ್ಲಿ ಸ್ವಂದಿಸಲು ಹಲವಾರು ಯೋಜನೆಗಳಿವೆ ಅದನ್ನು ಸದುಪಯೋಗ ಪಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಎರಡುವರೆ ವರ್ಷದ ಆಡಳಿತ ನನಗೆ ತೃಪ್ತಿ ತಂದಿದೆ. 2020 ರಲ್ಲಿ ಚುನಾಹಿತನಾಗಿ ಬಂದ ಮೊದಲ ಅನುಭವಗಳನ್ನು ಹಂಚಿಕೊಂಡರು.
ನಮ್ಮ ಗ್ರಾ.ಪಂ ನ 15 ಸದಸ್ಯರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು, ಮೊದಲ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ವ ಸದಸ್ಯರು ಒಪ್ಪಿಕೊಂಡು ಒಗ್ಗಟ್ಟಿನಿಂದ ಕಾರ್ಯ ರಂಗಕ್ಕಿಳಿದ ಪರಿಣಾಮ ಇಂದು ನೂತನ ಕಟ್ಟಡ ಸಂಸ್ಥಾಪನೆಯಾದೆ ಎಂದರು.
ಈ ಸಂದರ್ಭ ಹಿಂದಿನ ಶಾಸಕರು, ಕಂದಾಯ ಇಲಾಖೆಯವರು, ತಾಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರನ್ನ ಸ್ಮರಿಸಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕೊಡಗು ಜಿ.ಪಂ ಕಾರ್ಯನಿರ್ವಾಹಣಾಧಿಕಾರಿ ಡಾ.ಎಸ್.ಆಕಾಶ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಶೇಖರ್, ಯೋಜನಾ ನಿರ್ದೇಶಕ ಜಗದೀಶ್, ಗ್ರಾ.ಪಂ ಉಪಾಧ್ಯಕ್ಷೆ ಬಿ.ಎಸ್.ಪುಷ್ಪ, ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
ಪಮಿಕ, ನವಾನಿ ಪ್ರಾರ್ಥಿಸಿದರು, ಪ್ರಮುಖರಾದ ಕೋಡಿರ ವಿನೋದ್ ನಾಣಯ್ಯ ಸ್ವಾಗತಿಸಿದರು, ಲೆಕ್ಕ ಸಹಾಯಕ ಬಿದ್ದಪ್ಪ ಸರ್ವರನ್ನು ವಂದಿಸಿದರು.
ಗುತ್ತಿಗೆದಾರ ಸಬಿಲ್ ಗೆ ಸನ್ಮಾನ : ಉತ್ತಮವಾಗಿ ಪಂಚಾಯಿತಿ ಕಟ್ಟಡ ನಿರ್ಮಿಸಲು ಸಹಕರಿಸಿದ ಗುತ್ತಿಗೆದಾರ ಸಬಿಲ್ ಕಡಂಗ ಅವರನ್ನು ಇದೇ ಸಂದರ್ಭ ಸಂಸದರು ಕಿರು ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ಮಾದರಿ ಗ್ರಾ.ಪಂ : ಅಂದಾಜು 45 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಕಟ್ಟಡದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹಾಗೂ ದಾಖಲೆ ಕೊಠಡಿಗಳು ಪ್ರತ್ಯೇಕವಾಗಿದ್ದು, ಉಳಿದ ಗ್ರಾಮ ಪಂಚಾಯಿತಿಗೆ ಹೋಲಿಸಿದರೆ ಕೊಡಗಿನಲ್ಲಿ ಒಂದು ಮಾದರಿ ಗ್ರಾ. ಪಂಚಾಯಿತಿ ಕಾರ್ಯಾಲಯವಾಗಿ ಇದು ನಿರ್ಮಾಣಗೊಂಡಿದೆ.
ನರಿಯಂದಡ ಗ್ರಾ.ಪಂ ನರಿಯಂದಡ, ಕೊಕೇರಿ, ಚೇಲಾವರ, ಕರಡ, ಪೊದವಾಡ, ಅರಪಟ್ಟು ಹಾಗೂ ಎಡಪಾಲ ಸೇರಿದಂತೆ ಒಟ್ಟು 7 ಉಪಗ್ರಾಮಗಳನ್ನು ಒಳಗೊಂಡಿದ್ದು, 15 ಸದಸ್ಯರನ್ನು ಹೊಂದಿದೆ.
ಗ್ರಾಹಕರು ಪಂಚಾಯಿತಿ ಕಟ್ಟಡಕ್ಕೆ ಪ್ರವೇಶಿಸಿದರೆ ಕರವಸೂಲಿ ಕೌಂಟರ್ ಹಾಗೂ ಗಣಕಯಂತ್ರ ನಿರ್ವಹಕರ ಕೌಂಟರ್ ಕಾಣಬಹುದು. ಕಟ್ಟಡದ ಒಳಗಡೆ ವಿಭಿನ್ನವಾದ ಸಭಾಂಗಣ ಕೂಡ ನೋಡುಗರನ್ನು ಆಕರ್ಷಸುತ್ತದೆ.
ಸಭಾಂಗಣದ ಒಳಗಡೆ ಎಲ್ಸಿಡಿ ಟಿವಿ ಹಾಗೂ ಪ್ರಾಜೆಕ್ಟರ್ ಕೂಡ ಅಳವಡಿಸಲಾಗಿದೆ.
ವರದಿ : ಅಶ್ರಫ್








