ಮಡಿಕೇರಿ ಜು.8 : ಸುಂಟಿಕೊಪ್ಪ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಹೇರೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಕೃಷಿ ಫಸಲನ್ನು ನಾಶ ಮಾಡಿದೆ.
ಸ್ಥಳೀಯ ಕೃಷಿಕ ಅರುಣ್ ಚೆಂಗಪ್ಪ ಎಂಬುವವರ ತೋಟಕ್ಕೆ ನಿತ್ಯ ಆನೆಗಳು ಲಗ್ಗೆ ಇಡುತ್ತಿದ್ದು, ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ನೆಲಸಮ ಮಾಡಿವೆ. ಕೈಗೆ ಬಂದ ತ್ತುತ್ತು ಬಾಯಿಗೆ ಬರಲಿಲ್ಲ ಎನ್ನುವ ರೀತಿಯಲ್ಲಿ ಕೃಷಿ ಫಸಲನ್ನು ತಿಂದು ತೇಗುತ್ತಿವೆ. ಒಂದೆಡೆ ಪ್ರಾಕೃತಿಕ ಅಸಮಾತೋಲನ, ಮತ್ತೊಂದೆಡೆ ವನ್ಯಜೀವಿಗಳ ದಾಳಿಯಿಂದ ಅಪಾರ ನಷ್ಟವಾಗುತ್ತಿದೆ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಡಾನೆಗಳು ತೋಟಗಳು ಮಾತ್ರವಲ್ಲದೆ ಮನೆ ಬಾಗಲಿಗೆ ಬರುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಆತಂಕದಿಂದಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ. ವಿಶೇಷ ಆಸಕ್ತಿ ತೋರಿ ಹೇರೂರು ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಬೇಕು ಮತ್ತು ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.







