ಮಡಿಕೇರಿ ಆ.11 : ಜಿಲ್ಲಾಡಳಿತ ಭವನದ ಕಳಪೆ ತಡೆಗೋಡೆ ಪ್ರಕರಣದ ತನಿಖೆ ಪ್ರಗತಿಯಲ್ಲಿರುವ ಹಂತದಲ್ಲೆ ಸಾಕ್ಷ್ಯಾಧಾರಗಳ ನಾಶ ಪಡಿಸುವ ಬೆಳವಣಿಗೆ ನಡೆದಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ತೆನ್ನಿರ ಮೈನಾ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಸರ್ಕಾರ ರಚಿತವಾಗಿದ್ದು, ಜಿಲ್ಲೆಯ ನೂತನ ಶಾಸಕರ ಪ್ರಯತ್ನದಿಂದ ಜಿಲ್ಲಾಡಳಿತ ಭವನದ ತಡೆಗೋಡೆ ಕಾಮಗಾರಿ ಕುರಿತು ತನಿಖೆ ಚುರುಕು ಪಡೆದುಕೊಂಡಿದೆ. ಈ ನಡುವೆ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶವಾಗಿದೆ ಎಂದು ತಿಳಿಸಿದರು.
ಎಂಬಿ ಪುಸ್ತಕವೊಂದರ ಹಾಳೆಗಳು ಹರಿದು ಹೋಗಿರುವುದು ಕಂಡು ಬಂದಿದ್ದು, ಅಧಿಕಾರಿಗಳೆ ದಾಖಲೆಯನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿದರು.
ಸಾಕ್ಷ್ಯ ನಾಶವಾಗುವುದಕ್ಕೂ ಮೊದಲೇ ದೃಢೀಕೃತ ಎಂಬಿ ಪುಸ್ತಕದ ಪ್ರತಿಯನ್ನು ತಾನು ಪಡೆದುಕೊಂಡಿದ್ದೆ ಎಂದು ದಾಖಲೆ ಪ್ರದರ್ಶಿಸಿದರು.
ಜಿಲ್ಲಾಡಳಿತ ಭವನದ ತಡೆಗೊಡೆಗೆ ಸಂಬಂಧಿಸಿಂತೆ 6.25 ಕೊಟಿ ಹಣ ಡ್ರಾ ಆಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಅಗತ್ಯ ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿದ ಮೈನಾ, ಒಟ್ಟು ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಮಂದ್ರೀರ ಮೋಹನ ದಾಸ್, ಪುಷ್ಪಾ ಪೂಣಚ್ಚ, ಉದಯ ಕುಮಾರ್ ಹಾಗೂ ನಗರ ಕಾಂಗ್ರೆಸ್ನ ಸದಾ ಮುದ್ದಪ್ಪ ಉಪಸ್ಥಿತರಿದ್ದರು.







