ಮಡಿಕೇರಿ ಸೆ.29 : ನಲ್ವತ್ತೋಕ್ಲು ಚೋಕಂಡಳ್ಳಿ ಕಂದೂರಿ ಹಜ್ರತ್ ಮುಹಮ್ಮದ್ ಪೈಗಂಬರ ಮುಹಜ್ಜಿ ಸತ್ತಿನೊಂದಿಗೆ ಪ್ರಸಿದ್ಧಿ ಹೊಂದಿರುವ ಈದ್ ಮಿಲಾದ್ ಕಂದೂರಿ ಈ ಬಾರಿ ಅ.7 ಮತ್ತು 8 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುವುದೆಂದು ಈದ್ ಮಿಲಾದ್ ಸಂರಕ್ಷಣ ಸಮಿತಿ ಕಾರ್ಯದರ್ಶಿ ಪಿ.ಎ.ಸಿರಾಜುದ್ದೀನ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.7 ರಂದು ಅಸರ್ ನಮಾಜಿನ ಬಳಿಕ ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ.ರಫಿ ಧ್ವಜಾರೋಹಣದ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಸಂಜೆ 7 ಗಂಟೆಗೆ ಇಶಾಹತುಸುನ್ನ ಸ್ಟೂಡೆಂಟ್ ಅಸೋಸಿಯೇಷನ್ ವತಿಯಿಂದ ಬುರ್ದ ಆಲಾಪನೆ ನಡೆಯಲಿದ್ದು, ರಾತ್ರಿ 8 ಗಂಟೆಗೆ ನಡೆಯಲಿರುವ ಮತ ಪ್ರವಚನ ಕಾರ್ಯಕ್ರಮವನ್ನು ಜನಾಬ್ ಸೈಯದ್ ಮಹದಿ ತಂಗಳ್ ಉದ್ಘಾಟಿಸಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಜನಾಬ್ ಮುಳ್ಳೂರ್ಕರ ಮುಹಮ್ಮದಲಿ ಸಖಾಫಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಅ.8 ರಂದು ಬೆಳಿಗ್ಗೆ 5 ಗಂಟೆಗೆ ಮೌಲಿದ್ ಪಾರಾಯಣ ನಡೆಯಲಿದ್ದು, ರಿಫಾಯಿ ರಾತೀಬ್ ಸಂಘದವರಿಂದ ಮನೆಗಳಿಗೆ ಸಂದರ್ಶನ, 10 ಗಂಟೆಗೆ ಈದ್ ಮಿಲಾದ್ ಸಂದೇಶ ರ್ಯಾಲಿ ನಡೆಯಲಿದೆ ಎಂದರು.
ಬೆಳಿಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮವನ್ನು ಚೋಕಂಡಳ್ಳಿ ಮುದರ್ರಿಸ್ ಜಮಾ ಮಸೀದಿಯ ಜನಾಬ್ ಮುಬಶ್ಶಿರ್ ಅಹ್ಸನಿ ಕಾಮಿಲ್ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಜನಾಬ್ ಕೆ.ಎಂ.ರಫಿ ವಹಿಸಲಿದ್ದು, ಅನ್ವಾರುಲ್ ಹುದಾ ಸೆಂಟರ್ ಪ್ರಾಂಶುಪಾಲ ಜನಾಬ್ ಅಶ್ರಫ್ ಅಹ್ಸನಿ ಶುಭಾಶಯ ಭಾಷಣ ಮಾಡಲಿದ್ದಾರೆ. ಮುಖ್ಯ ಪ್ರಭಾಷಣಕಾರರಾಗಿ ಜನಾಬ್ ನೌಫಲ್ ಸಖಾಫಿ ಪಾಲ್ಗೊಳ್ಳಲಿದ್ದಾರೆ ಎಂದು ಸಿರಾಜುದ್ದೀನ್ ತಿಳಿಸಿದರು.
ಮಧ್ಯಾಹ್ನ 2 ಗಂಟೆಗೆ ಅನ್ನದಾನ ನಡೆಯಲಿದ್ದು, ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದರು. ಎರಡು ದಿನದ ಕಾರ್ಯಕ್ರಮಗಳಿಗೆ ವಿವಿಧ ಮಸೀದಿಯ ಅಧ್ಯಕ್ಷರು, ಸದಸ್ಯರು ಹಾಗೂ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಕೆ.ಎಂ.ರಫಿ, ಸಹಾ ಕಾರ್ಯದರ್ಶಿ ಟಿ.ಎಂ.ಹಾಶಿಂ, ಸದಸ್ಯರುಗಳಾದ ಡಿ.ಹೆಚ್.ಸಮದ್, ಪಿ.ಎಂ.ಇಸ್ಮಾಯಿಲ್, ಪಿ.ಎ.ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.








