ಮಡಿಕೇರಿ ಅ.5 : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಪ್ರವರ್ಗ-3ಎ ನಲ್ಲಿ ಒಕ್ಕಲಿಗ, ವಕ್ಕಲಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ, ಗಂಗಡ್ ಕಾರ್ ಒಕ್ಕಲಿಗ, ದಾಸ್ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಮರಸು ಒಕ್ಕಲಿಗ, ಗೌಡ, ಗೌಡ ಹಳ್ಳಿಕಾರ್, ಕುಂಚೆಟಿಗ, ಗೌಡ, ಕಾಪು, ಹೆಗ್ಗಡೆ, ಕಮ್ಮಾರೆಡ್ಡಿ, ಗೌಡರ್, ನಾಮಧಾರಿ ಗೌಡ, ಉಪ್ಪಿನ ಕೊಳಗ, ಉತ್ತಮ ಕೊಳಗ ಸಮುದಾಯದ ಜನರ ಆರ್ಥಿಕ ಅಭಿವೃದ್ಧಿಗಾಗಿ 2023-24 ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯಬಯಸುವವರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಸಾಲ ಯೋಜನೆ: ಒಕ್ಕಲಿಗ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಚಟುವಟಿಕೆಗೆ ಅನುಸಾರ ಸೌಲಭ್ಯ ಒದಗಿಸಲಾಗುವುದು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯೊಳಗಿರಬೇಕು. ಕುಟುಂಬದ ವಾರ್ಷಿಕ ಅದಾಯ ಗ್ರಾಮೀಣ ಪ್ರದೇಶದವರಿಗೆ 98 ಸಾವಿರ ರೂಗಳು, ಪಟ್ಟಣ ಪ್ರದೇಶದವರಿಗೆ ರೂ.1.20 ಲಕ್ಷ ಗಳ ಒಳಗಿರಬೇಕು. ಅರ್ಜಿದಾರರ ಆಧಾರ್ ಸಂಖ್ಯೆಯು ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಜೋಡಣೆಯೊಂದಿಗೆ ಸೀಡ್ ಆಗಿರಬೇಕು.
ಘಟಕ ವೆಚ್ಚ ರೂ. 1 ಲಕ್ಷ ವರೆಗೆ ಶೇ: 20 ರಷ್ಟು ಸಹಾಯಧನ (ಗರಿಷ್ಠ ರೂ.20 ಸಾವಿರ) ಶೇ.80 ರಷ್ಟು (ರೂ. 80 ಸಾವಿರ ಗಳು) ಸಾಲವನ್ನು ಶೇ.4 ರಷ್ಟು ಬಡ್ಡಿದರದಲ್ಲಿ ಒದಗಿಸಲಾಗುವುದು. ಘಟಕ ವೆಚ್ಚ ರೂ. 2 ಲಕ್ಷ ಗಳವರೆಗೆ ಶೇ.15 ರಷ್ಟು (ಗರಿಷ್ಠ 30 ಸಾವಿರ) ಶೇ: 85 ರಷ್ಟು ಗರಿಷ್ಠ 1.70 ಲಕ್ಷ ಗಳ ಸಾಲವನ್ನು ಶೇ.4 ರ ಬಡ್ಡಿ ದರದಲ್ಲಿ ಒದಗಿಸಲಾಗುವುದು.
ಗಂಗಾ ಕಲ್ಯಾಣ ಯೋಜನೆ: ಒಕ್ಕಲಿಗ ಸಮುದಾಯಕ್ಕೆ ಸೇರಿದ ಕನಿಷ್ಠ 01 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ಘಟಕ ವೆಚ್ಚ ರೂ. 3.75 ಲಕ್ಷಗಳಲ್ಲಿ ರೂ. 3.25 ಲಕ್ಷ ಸಹಾಯಧನ ಉಳಿಕೆ ಮೊತ್ತ ರೂ. 50 ಸಾವಿರ ಶೇ.4 ಬಡ್ಡಿ ದರದಲ್ಲಿ ಸಾಲ. ಸಹಾಯಧನದ ಮೊತ್ತದಲ್ಲಿ ಪ್ರತೀ ಕೊಳವೆ ಬಾವಿಗೆ ವಿದ್ಯುದ್ದೀಕರಣಕ್ಕೆ ರೂ. 70 ಸಾವಿರ ಗಳಂತೆ ವಿದ್ಯುತ್ ಸರಬರಾಜು ಕಂಪೆನಿಗೆ ಭರಿಸಲಾಗುವುದು. ಸಾಮೂಹಿಕ ಏತ ನೀರಾವರಿ ಯೋಜನೆ: ಭೂಮಟ್ಟದಲ್ಲಿ ಶಾಶ್ವತವಾಗಿ ದೊರೆಯುವ ಜಲ ಸಂಪನ್ಮೂಲಗಳಿಗೆ ಮೋಟಾರು ಅಳವಡಿಸಿ ಪೈಪ್ಲೈನ್ ಮೂಲಕ ನೀರಾವರಿ ಒದಗಿಸುವುದು. ಸಾಮೂಹಿಕದ ನೀರಾವರಿ ಯೋಜನೆಗೆ ನಿಗಧಿಪಡಿಸಿದ ಘಟಕ ವೆಚ್ಚದಲ್ಲಿ ಈ ಸೌಲಭ್ಯ ಒದಗಿಸಲಾಗುವುದು
ಶೈಕ್ಷಣಿಕ ಸಾಲ ಯೋಜನೆ: ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ಸಿಇಟಿ/ನೀಟ್ ಮೂಲಕ ಪ್ರವೇಶ ಪಡೆದು ವೃತ್ತಿಪರ ಕೋರ್ಸ್ಗಳಾದ ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ 28 ಕೋರ್ಸ್ಗಳಲ್ಲಿನ ವ್ಯಾಸಂಗಕ್ಕಾಗಿ ವಾರ್ಷಿಕ ರೂ.1 ಲಕ್ಷಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ 4 ಲಕ್ಷಗಳಿಂದ ರೂ. 5 ಲಕ್ಷಗಳಿಗೆ ವಾರ್ಷಿಕ ಶೇ: 2ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಶೈಕ್ಷಣಿಕ ಸಾಲ ಯೋಜನೆ(ನವೀಕರಣ): 2022-23 ನೇ ಸಾಲಿನಲ್ಲಿ ಸಾಲ ಪಡೆದ ವಿದ್ಯಾರ್ಥಿಗಳಿಗೆ 2023-24 ನೇ ಸಾಲಿಗೆ 2ನೇ / 3ನೇ ಕಂತಿನ ನವೀಕರಣ ಸಾಲ ಮಂಜೂರು ಮಾಡಲು 2ನೇ/ 3ನೇ ವರ್ಷದ ವ್ಯಾಸಂಗ ದೃಢೀಕರಣ ಮತ್ತು ಮೊದಲನೇ / ಎರಡನೇ ವರ್ಷದ ಅಂಕಪಟ್ಟಿಯೊಂದಿಗೆ ಅರ್ಜಿ ಸಲ್ಲಿಸುವುದು.
ವಿದೇಶ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ: ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿನ ‘ಕ್ಯೂಎಸ್ ವಲ್ಡ್ ರ್ಯಾಂಕಿಂಗ್’ 500 ರೊಳಗೆ ಬರುವ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್ ಡಾಕ್ಟೊರಲ್, ಪಿ.ಹೆಚ್.ಡಿ., ಮಾಸ್ಟರ್ ಡಿಗ್ರಿ ಕೋರ್ಸ್ಗಳನ್ನು ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ವಾರ್ಷಿಕ ಗರಿಷ್ಠ ರೂ. 10 ಲಕ್ಷದಿಂದ ಕೋರ್ಸಿನ ಅವಧಿಗೆ ಗರಿಷ್ಠ ರೂ. 20 ಲಕ್ಷಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಲಾಗುವುದು. ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೊಜನೆ.
ಒಕ್ಕಲಿಗ ಸಮುದಾಯದ ಯುವಜನತೆಯನ್ನು ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೊಗಮುಖಿ ಗಳನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ಐಟಿಐಎಸ್, ಜಿಟಿಟಿಸಿ, ಕೆಜಿಟಿಟಿಐ ಮತ್ತಿತರ ಅಲ್ಪಾವಧಿ ಕೋರ್ಸ್ಗಳ ಮೂಲಕ ಕೌಶಲ್ಯ ತರಬೇತಿ ನೀಡಲು ಆನ್ಲೈನ್ನಲ್ಲಿ ಕೌಶಲ್ಯ ಕರ್ನಾಟಕ ತಂತ್ರಾಂಶ https://www.kaushalkar.com ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಸ್ವಾವಲಂಬಿ ಸಾರಥಿ ಯೋಜನೆ: ಒಕ್ಕಲಿಗ ಸಮುದಾಯದ ಯುವಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ: 50 ರಷ್ಟು ಗರಿಷ್ಠ 3 ಲಕ್ಷಗಳ ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಉಳಿಕೆ ಮೊತ್ತವನ್ನು ಬ್ಯಾಂಕ್ಗಳ ಮೂಲಕ ಅವರು ವಿಧಿಸುವ ಚಾಲ್ತಿ ಬಡ್ಡಿ ದರದಲ್ಲಿ ಸಾಲ ಪಡೆಯುವುದು. ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ) ಒಕ್ಕಲಿಗ ಸಮುದಾಯದವರಿಗೆ ಸ್ವಯಂ ಉದ್ಯೋಗ ಮಾಡಲು ಅವರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳು/ ಉದ್ಯಮಗಳಿಗೆ ವಾಣಿಜ್ಯ ಬ್ಯಾಂಕ್ಗಳ ಮೂಲಕ ಸಾಲ ಪಡೆದಲ್ಲಿ ನಿಗಮದಿಂದ ಶೇ: 20 ರಷ್ಟು ಗರಿಷ್ಠ ರೂ. 1 ಲಕ್ಷಗಳ ಸಹಾಯಧನ ಮಂಜೂರು ಮಾಡಲಾಗುತ್ತದೆ.
ನಿಗಮವು ಅನುಷ್ಠಾನಗೊಳಿಸುವ ಈ ಯೋಜನೆಗಳಲ್ಲಿ ಶಾಸಕರು/ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಆಯ್ಕೆ ಸಮಿತಿಗಳ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಹಾಗೂ ಸರ್ಕಾರ ವಿವೇಚನಾ ಕೋಟಾ/ ನಿಗಮದ ಅಧ್ಯಕ್ಷರು/ ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಲ್ಲಿ ಸೌಲಭ್ಯ ಪಡೆಯಬಯಸುವವರೂ ಸಹ ಆನ್ಲೈನ್ನಲ್ಲಿಯೇ ಅರ್ಜಿ ಸಲ್ಲಿಸಬೇಕು.
ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವುದು. ಈ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಒಕ್ಕಲಿಗ ಸಮುದಾಯದ ಫಲಾಪೇಕ್ಷಿಗಳು ಸೇವಾಸಿಂದು ಪೋರ್ಟಲ್ https://sevasindhu.karnataka.gov.in ನಲ್ಲಿ ಗ್ರಾಮಒನ್ https://gramaone.karnataka.gov.in ಬೆಂಗಳೂರು ಒನ್ https://www.karnatakaone.gov.in ಹಾಗೂ ಕರ್ನಾಟಕ ಒನ್ https://ktapp.karnataka.gov.in ಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿಯನ್ನು ಅಕ್ಟೋಬರ್, 30 ರೊಳಗೆ ಸಲ್ಲಿಸುವುದು. ಶೈಕ್ಷಣಿಕ ಸಾಲ ಯೋಜನೆಗೆ ಕೊನೆಯ ದಿನಾಂಕ ಇರುವುದಿಲ್ಲ.
ಹೆಚ್ಚಿನ ಮಾಹಿತಿಗೆ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದ ಜಾಲತಾಣ https://kvcdc.karnataka.gov.in ಅಥವಾ ನಿಗಮದ ದೂರವಾಣಿ ಸಂಖ್ಯೆ: 080-29904350, 29904268 ನ್ನು ಸಂಪರ್ಕಿಸಬಹುದು. ಅಥವಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿಗೆ ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ: 08272-221656 ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.







