ಮಡಿಕೇರಿ ನ.17 : ಮಂಗಳೂರಿನ ಕೇಶವ ಸ್ಮೃತಿ ಸಂವರ್ಧನ ಸಮಿತಿ ವತಿಯಿಂದ ನ.19 ರಂದು ಕೊಡಗು ಜಿಲ್ಲಾ ಮಹಿಳಾ ಸಮನ್ವಯದ “ನಾರೀ ಶಕ್ತಿ ಸಂಗಮ” ಮಹಿಳಾ ಸಮ್ಮೇಳನ ಮಡಿಕೇರಿಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ 2 ಗಂಟೆಯವರೆಗೆ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ನಡೆಯಲಿರುವ ಸಮ್ಮೇಳನ ರಾಷ್ಟ್ರೀಯ ಚಿಂತನೆ, ಸಾಮಾಜಿಕ ಸಾಮರಸ್ಯ, ಮಹಿಳಾ ಸುರಕ್ಷತೆ, ಗ್ರಾಮೀಣ ಕೃಷಿ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲಿದೆ.
ಕಾರ್ಯಕ್ರಮವನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಪುಷ್ಪಾ ಕುಟ್ಟಣ್ಣ ಉದ್ಘಾಟಿಸಲಿದ್ದು, ಸಾಹಿತಿ ಜಲಾ ಕಾಳಪ್ಪ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ವಸಂತ ಸ್ವಾಮಿ “ಭಾರತೀಯ ಚಿಂತನೆಯಲ್ಲಿ ಮಹಿಳೆ, ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರ ಮತ್ತು ಸುರಕ್ಷತೆ, ಸ್ವಾವಲಂಬನೆ, ಆರೋಗ್ಯ, ಶಿಕ್ಷಣ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ.
ಸಮಾರೋಪ ವಾಚಕರಾಗಿ ಅಖಿಲ ಭಾರತೀಯ ಕಿಸಾನ್ ಸಂಘದ ಸಂಯೋಜಕಿ ವೀಣಾ ಸತೀಶ್ ಪಾಲ್ಗೊಳ್ಳಲಿದ್ದಾರೆ.
ಕೊಡಗು ಜಿಲ್ಲೆಯ ಸಾಧಕ ಮಹಿಳೆಯರು ಸೇರಿದಂತೆ ವೈದ್ಯರು, ವಕೀಲರು, ಸ್ವಯಂ ಸೇವಕರು, ಸಂಘಗಳು, ಉದ್ಯೋಗಸ್ಥ ಮಹಿಳೆಯರು, ವಿದ್ಯಾರ್ಥಿಗಳು, ಹೋರಾಟಗಾರರು ಸೇರಿದಂತೆ ಒಟ್ಟು 11 ಶ್ರೇಣಿಗಳನ್ನು ಗುರುತಿಸಲಾಗಿದ್ದು, ಈ ಶ್ರೇಣಿಯ ಮಹಿಳೆಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ತಾಲೂಕು, ನಗರ ಹಾಗೂ ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದು ಕಾರ್ಯಕ್ರಮದ ಸ್ವಾಗತ ಸಮಿತಿ ತಿಳಿಸಿದೆ.








