ಮಡಿಕೇರಿ ಮಾ.5 NEWS DESK : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದ ಕೆಲವರು ಇತ್ತೀಚೆಗೆ ಸಭೆಯೊಂದನ್ನು ನಡೆಸಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನವಿದೆ ಎಂದು ಪ್ರತಿಬಿಂಬಿಸಿಕೊಂಡಿರುವ ಕ್ರಮ ಹಾಸ್ಯಾಸ್ಪದವಾಗಿದೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪರಿಶಿಷ್ಟ ಜಾತಿ ಬಾಂಧವರು ಕಾಂಗ್ರೆಸ್ ಪಕ್ಷದ ಮೂಲ ಮತ್ತು ಸ್ವಾಭಾವಿಕ ಬಹುಸಂಖ್ಯಾತ ಮತದಾರರಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕೆಲವೇ ಮಂದಿಯ ತಟಸ್ಥ ನಿಲುವಿನ ತೀರ್ಮಾನಕ್ಕೆ ಪರಿಶಿಷ್ಟ ಜಾತಿಯ ಬಹುಸಂಖ್ಯಾತ ಕಾಂಗ್ರೆಸ್ಸಿಗರು ಧೃತಿಗೆಡುವುದಿಲ್ಲ. ಸರ್ಕಾರದ ನಾಮ ನಿರ್ದೇಶಿತ ಮೀಸಲಾತಿಯು ಯಾವುದೇ ಚ್ಯುತಿ ಇಲ್ಲದೆ ಪರಿಶಿಷ್ಟ ಜಾತಿಯವರಿಗೇ ಲಭಿಸುತ್ತಿದೆ. ಇದರಲ್ಲಿ ಯಾವುದೇ ಪ್ರಮಾದವಾಗುತ್ತಿಲ್ಲ ಮುಂದೆಯೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ಎಲ್ಲಾ ಬ್ಲಾಕ್ ಅಧ್ಯಕ್ಷರ, ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಅವಿರತ ಶ್ರಮದ ಫಲವಾಗಿ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ. ಕಾರ್ಯಕರ್ತರ ಜೇಷ್ಠತೆಯನ್ನು ಆಧರಿಸಿ ಸರ್ಕಾರದಲ್ಲಿ ಸ್ಥಾನಮಾನಗಳು ಸಿಗುತ್ತಿವೆ. ಜಿಲ್ಲೆಯ ಇಬ್ಬರು ಶಾಸಕರು ಜನಸಾಮಾನ್ಯರ ನಿರೀಕ್ಷೆಯಂತೆ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಅಲ್ಲದೆ ಜನಸ್ನೇಹಿ ಗುಣದಿಂದಲೇ ಜನಪ್ರಿಯರಾಗಿದ್ದಾರೆ.
ಶಾಸಕರು ಹಿರಿಯ ಕಾರ್ಯಕರ್ತರನ್ನು ಕಡೆಗಣನೆ ಮಾಡಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಎಲ್ಲಾ ಹಿರಿಯ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟನಿಂದ ಶ್ರಮಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಜಯಶಾಲಿಯನ್ನಾಗಿ ಮಾಡಲಿದ್ದಾರೆ ಎಂದು ಸುರೇಶ್ ತಿಳಿಸಿದ್ದಾರೆ.







