ಮಡಿಕೇರಿ ಮಾ.9 NEWS DESK : ವಿರಾಜಪೇಟೆಯ ಬಾಳುಗೊಡು ಗ್ರಾಮದ ಕೊಡಗು ಹೆಗ್ಗಡೆ ಸಮಾಜದ ನಿವೇಶನದಲ್ಲಿನ ಸಭಾಂಗಣದ ಮುಂಭಾಗದಲ್ಲಿ ಸಾಂಪ್ರದಾಯಿಕ ಶೈಲಿಯ ನೂತನ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲು ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಸಮಾಜದ ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚಂಗಪ್ಪ ಮಾತನಾಡಿ, ಸಾಂಸ್ಕೃತಿಕ ಭವನ ನಿರ್ಮಾಣ ಮಾಡುವುದರಿಂದ ವರ್ಷದ ಎಲ್ಲಾ ರುತುಗಳಲ್ಲಿ ಜಾನಪದ ಕಲೆಗಳನ್ನು ಅಭ್ಯಾಸ ಮಾಡಲು ಮತ್ತು ಸಮಾರಂಭಗಳು ನಡೆದಾಗ ಕಲಾ ತಂಡಗಳಿಂದ ಜಾನಪದ ಕಲೆಗಳ ಪ್ರದರ್ಶನಕ್ಕೂ ಮತ್ತು ವಸ್ತು ಪ್ರದರ್ಶನಕ್ಕೂ ಸಾಕಷ್ಟು ಸ್ಥಳಾವಕಾಶ ಲಭ್ಯವಾಗಲಿದೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮುದಾಯ ಭವನ ನಿರ್ಮಾಣಕ್ಕೆ ಅಂದಾಜು 28 ಲಕ್ಷ ರುಪಾಯಿಗಳ ನೀಲಿ ನಕಾಶೆ ತಯಾರಿಸಲಾಗಿದ್ದು, ಆರ್ಥಿಕ ನೆರವಿಗಾಗಿ ಶಾಸಕರ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವ ಪ್ರಯತ್ನ ಮಾಡುವುದರೊಂದಿಗೆ ಸಮಾಜದ ನಿಧಿಯಲ್ಲಿ ಇರುವ ಹಣವನ್ನು ಬಳಸಿಕೊಂಡು ಅಗತ್ಯ ಬಿದ್ದಲ್ಲಿ ದಾನಿಗಳ ನೆರವನ್ನು ಸಹ ಪಡೆಯಲಾಗುವುದೆಂದು ತಿಳಿಸಿದರು.
ಕೊಡಗು ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭು ಕುಮಾರ್, ಕೋಶಾಧ್ಯಕ್ಷ ಪಾನಿಕುಟ್ಟಿರ ಕುಟ್ಟಪ್ಪ, ನಿರ್ದೇಶಕರಾದ ಕೊಕ್ಕೇರ ಜಗನ್ನಾಥ್, ಚರ್ಮಾಂಡ ಅಪ್ಪುಣು ಪೂವಯ್ಯ, ಕೊಪ್ಪಡ ಪಟ್ಟು ಪಳಂಗಪ್ಪ ,ಕೊಂಗೆಪಂಡ ರವಿ, ತಂಬಂಡ ಮಂಜುನಾಥ್, ಪುದಿಯತಂಡ ಬೆಳ್ಳಿಯಪ್ಪ , ಪಂದಿಕಂಡ ಸುನಾ, ಪಂದಿಕಂಡ ನಾಗೇಶ್, ಚಳಿಯಂಡ ಕಮಲಾ ಉತ್ತಯ್ಯ, ಮಲ್ಲಾಡ ಸುತಾ, ಮೂರೀರ ಶಾಂತಿ ಹಾಜರಿದ್ದರು.







