ಮಡಿಕೇರಿ ಮಾ.15 NEWS DESK : ಕಾವೇರಿಯ ನಾಡು ಕೊಡಗನ್ನು ಒಳಗೊಂಡ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ, ಸೇವೆ ಮಾಡಲು ಅವಕಾಶ ನೀಡಿದರೆ ಇಲ್ಲಿನ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಪರಿಸರದ ಸಂರಕ್ಷಣೆಯೊಂದಿಗೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮೈಸೂರು ರಾಜವಂಶಸ್ಥ ಯದುವೀರ್ ಬಿಚ್ಚು ನುಡಿಯಾಡಿದ್ದಾರೆ.
ನಗರದ ಕಾವೇರಿ ಹಾಲ್ನಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಸಮಾವೇಶ ಮತ್ತು ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಮೈಸೂರು ಸಂಸ್ಥಾನದೊಂದಿಗೆ ಕೊಡಗು ಇರಲಿಲ್ಲ ಎನ್ನುವ ಮಾತುಗಳಿದೆಯಾದರು, ತಾನು ತನ್ನ ಬಾಲ್ಯದ ಅವಧಿಯಿಂದಲೂ ಕೊಡಗಿನ ನಾಗರಹೊಳೆ, ಬ್ರಹ್ಮಗಿರಿ ಸೇರಿದಂತೆ ವಿವಿಧೆಡೆಗಳಿಗೆ ಭೇಟಿ ನೀಡಿದ್ದೇನೆ, ಇಲ್ಲಿನ ಪ್ರಕೃತಿಯ ಸೊಬಗನ್ನು ಅನುಭವಿಸಿದ್ದೇನೆ ಮತ್ತು ಕಾವೇರಿ ನಾಡಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದೇನೆ ಎಂದರು.
ಕೊಡಗು ವೀರ ಪರಂಪರೆಯನ್ನು ಹೊಂದಿರುವ ನಾಡಾಗಿದ್ದು, ಭಾರತದ ಸೈನ್ಯಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್. ತಿಮ್ಮಯ್ಯ ಅವರನ್ನು ನೀಡಿದ, ಹಲವಾರು ಲೆಫ್ಟಿನೆಂಟ್ ಜನರಲ್ಗಳನ್ನು, ವೀರ ಸೈನಿಕರನ್ನು ನೀಡಿದ ಪುಣ್ಯ ಭೂಮಿಯಾಗಿದೆಯೆಂದು ಬಣ್ಣಿಸಿದ ಯದುವೀರ್, ಕಾವೇರಿ ನಾಡು ಕೊಡಗನ್ನು ಇಲ್ಲಿನ ಸುಂದರ ಪರಿಸರದೊಂದಿಗೆ ಕೊಡಗಾಗಿಯೇ ಉಳಿಸಿಕೊಳ್ಳುವ, ಇಲ್ಲಿನ ಸಂಸ್ಕೃತಿ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯದಲ್ಲಿ ತಾನು ನಿಮ್ಮೊಂದಿಗೆ ಇರುತ್ತೇನೆಂದು ಭರವಸೆ ನೀಡಿದರು.
ಕೊಡಗಿನಲ್ಲಿ ಕಂಡು ಬರುತ್ತಿರುವ ವನ್ಯಜೀವಿ ಮತ್ತು ಮಾನವ ಸಂಘರ್ಷಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಹಾಗೂ ಪರಿಸರ ಸಂರಕ್ಷಣೆಯ ಜೊತೆಯಲ್ಲೆ ಅಭಿವೃದ್ಧಿಯನ್ನು ಕಾಣುವ ಅಗತ್ಯತೆ ಇದೆ ಎಂದು ತಿಳಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ಮಾತನಾಡಿ, ಒಬಿಸಿಯ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದ ಸರ್ವಾಂಗೀಣ ಪ್ರಗತಿಗೆ ಭಾರತೀಯ ಜನತಾ ಪಾರ್ಟಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದೆ. ಅದೇ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಭಿವೃದ್ಧಿಯನ್ನು ರಾಜಕೀಯ ಹೇಳಿಕೆಗಳಿಗಷ್ಟೇ ಸೀಮಿತಗೊಳಿಸಿದೆ ಎಂದು ಆರೋಪಿಸಿದರು.
ಇಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡಿಕೊಂಡೇ ಬಂದಿದ್ದು, ಹಿಂದುಳಿದ ವರ್ಗಕ್ಕೆ ಏನೂ ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಎಲ್ಲಾ ವರ್ಗಕ್ಕೂ ಸಮಾನ ಅವಕಾಶ ನೀಡಿದ್ದು, ಪಕ್ಷದ ಲೋಕಸಭಾ ಸದಸ್ಯರಲ್ಲಿ ಶೇ.38ರಷ್ಟು ಹಿಂದುಳಿದ ವರ್ಗದವರೇ ಇದ್ದಾರೆ ಎಂದು ಹೇಳಿದರು.
ಪ್ರಸ್ತುತ ಮೈಸೂರು-ಕೊಡಗು ಕ್ಷೇತ್ರಕ್ಕೆ ಮೈಸೂರು ರಾಜವಂಶಸ್ಥರಾದ ಯದುವೀರ್ ಅವರ ಸ್ಪರ್ಧೆಗೆ ಪಕ್ಷ ಅವಕಾಶವನ್ನು ನೀಡಿದೆ. ಮೈಸೂರು ಒಡೆಯರ್ ವಂಶದ ರಾಜರು ಜನಪರವಾದ ತಮ್ಮ ಕಾರ್ಯವೈಖರಿಗಳ ಮೂಲಕ ಜನರ ಮನಗೆದ್ದವರಾಗಿದ್ದಾರೆ. ಇಡೀ ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಸಮಾಜದ ಎಲ್ಲಾ ಸ್ತರದ ಜನರಿಗೆ ಸಮಾನ ಹಕ್ಕುಗಳನ್ನು ನೀಡುವ ಪ್ರಯತ್ನ ನಡೆದದ್ದು ಮೈಸೂರು ಸಂಸ್ಥಾನದಲ್ಲೆ. ಅಂತಹ ರಾಜಮನೆತನದ ಯದುವೀರ್ ಅವರ ಗೆಲುವಿಗೆ ಶ್ರಮಿಸುವಂತೆ ಅಶ್ವಥ ನಾರಾಯಣ ಕರೆ ನೀಡಿದರು.
ಮಾಜಿ ಸಚಿವ ರಾಮದಾಸ್ ಮಾತನಾಡಿ, ಕೊಡಗಿಗೂ ಮೈಸೂರಿನ ರಾಜ ಮನೆತನಕ್ಕೂ ಅವಿನಾಭಾವ ಸಂಬಂಧ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡಗು ಕಾಫಿ ಸಂಸ್ಕರಣಾ ಕೇಂದ್ರವನ್ನು ಆರಂಭಿಸಿದ್ದು, ಇಂದಿಗೆ ನೂರು ವರ್ಷಗಳಾಗಿವೆ. ಅಲ್ಲದೇ ಕೊಡಗಿನ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಇಡೀ ದೇಶದಲ್ಲಿ 586 ರಾಜವಂಶಸ್ಥರು ಆಳ್ವಿಕೆ ನಡೆಸುತ್ತಿದ್ದರು. ಅಂತಹ ಸಂದರ್ಭ ಮೈಸೂರು ರಾಜರು ಪ್ರಥಮವಾಗಿ ಭಾರತ ಗಣರಾಜ್ಯದೊಂದಿಗೆ ವಿಲೀನಗೊಂಡ ಸಂಸ್ಥಾನವಾಗಿದೆಯೆಂದು ಬಣ್ಣಿಸಿ, ಇಂತಹ ರಾಜಮನೆತನದ ಕುಡಿ ಇಂದು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, ಇವರ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುಟ್ಟುಹಬ್ಬದಂದು ಹಿಂದುಳಿದ ವರ್ಗದವರಿಗಾಗಿ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದು 13 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಇಡೀ ದೇಶದಲ್ಲಿ 1 ಕೋಟಿ 30 ಲಕ್ಷ ಜನ ಇದುವರೆಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆದುಕೊಳ್ಳುವಂತೆ ರಾಮ್ ದಾಸ್ ಮನವಿ ಮಾಡಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಮಾತನಾಡಿ, ಇಡೀ ವಿಶ್ವದಲ್ಲಿ ಭಾರತ ನಂಬರ್ ಸ್ಥಾನಕ್ಕೆ ಏರಬೇಕಾದರೆ, ಮತ್ತೊಮ್ಮೆ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು. ಅದಕ್ಕಾಗಿ ಹಿಂದುಳಿದ ವರ್ಗದವರು ಸಂಕಲ್ಪ ತೊಡಬೇಕೆಂದು ಹೇಳಿದರು. ಸಮೃದ್ಧ ದೇಶ ನಿರ್ಮಾಣ ಮಾಡುವ ಕೃಷ್ಣ ದೇವರಾಜ ಒಡೆಯರ್ ಅವರ ಕನಸನ್ನು ನನಸು ಮಾಡಲೆಂದು ಪ್ರಧಾನಿ ಮೋದಿ ಅವರು ಯದುವೀರ್ ಒಡೆಯರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಮೈಸೂರು ರಾಜ ವಂಶಸ್ಥರು ಯಾವುದೇ ಜಾತಿ, ಧರ್ಮದ ಬೇಧ ಬಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಅವರಿಂದ ಉನ್ನತ ಸಮಾನ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಯದುವೀರ್ ಒಡೆಯರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದಾಗಿನಿಂದ ವ್ಯವಸ್ಥಿತ ಷಡ್ಯಂತ್ರ ಶುರುವಾಗಿದೆ. ಆದರೆ ಯಾವುದೇ ಅಪಪ್ರಚಾರಕ್ಕೂ ಪಕ್ಷದ ಕಾರ್ಯಕರ್ತರು ಹಾಗೂ ಜಿಲ್ಲೆಯ ಜನತೆ ಕಿವಿಗೊಡಬಾರದು. ದೇಶದ ಭದ್ರತೆಗಾಗಿ ಚುನಾವಣೆ ನಡಿಯುತ್ತಿದ್ದು, ಶತ್ರು ರಾಷ್ಟ್ರದ ಪರ ಘೋಷಣೆ ಕೂಗುವವರ ಹೆಡೆಮುರಿಕಟ್ಟಲು ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂದು ಹೇಳಿದರು.
ಕೊಡಗು ಮೈಸೂರು ಕ್ಷೇತ್ರದಲ್ಲಿ ಕಳೆದ ಬಾರಿ ಪ್ರತಾಪ್ ಸಿಂಹ ಅವರು ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಯದುವೀರ್ ಅವರನ್ನು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಿಜೆಪಿ ಭದ್ರ ಕೋಟೆಯಾಗಿಸಲು ಪಣ ತೊಡಬೇಕು. ಬಿಜೆಪಿಯವರು ಮನಸ್ಸು ಮಾಡಿದರೆ ಏನು ಬೇಕಾದರು ಸಾಧಿಸುವ ಶಕ್ತಿ ಇದೆ, ಕೊಡಗಿನಲ್ಲಿ ಮತ್ತೊಮ್ಮೆ ಬಿಜೆಪಿ ವಿಜಯ ಪತಾಕೆ ಹಾರಿಸಬೇಕು ಎಂದರು.
ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ದೇಶ ರಕ್ಷಣೆಯಲ್ಲಿ ಕೊಡಗಿನ ಜನತೆ ಮುಂದಿದ್ದು, ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ದೇಶದಕ್ಕೆ ಕೊಡಗಿನವರ ಕೊಡುಗೆ ಇದೆ. ಹೀಗಿರುವಾಗ ಚುನಾಯಿತ ಪ್ರತಿನಿಧಿಗಳ ಕೊಡಗಿನ ಜನತೆ ಕಷ್ಟವನ್ನು ಹೇಳಿಕೊಂಡು ಬಂದಾಗ ಗೌರವದಿಂದ ಕಾಣುವಂತಾಗಬೇಕು ಎಂದು ಹೇಳಿದರು.
ಒಂದು ಕಾಲದಲ್ಲಿ ಭಾರತ ಇತರ ದೇಶಗಳಿಗೆ ಅವಲಂಭಿತವಾಗಿತ್ತು. ಆದರೆ ಇಂದು ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯದಿಂದಾಗಿ ಇತರ ದೇಶಗಳಿಗೆ ಮಾದರಿಯಾಗಿದ್ದು, ಕಾರ್ಯಕರ್ತರು ಬಿಜೆಪಿಯ ಕೊಡುಗೆಳನ್ನು ಪ್ರತಿ ಮನೆ ಮನೆಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ, ಹಿಂದುಳಿದ ವರ್ಗಗಳು ಒಗ್ಗೂಡಿ ಪಕ್ಷದ ಗೆಲುವಿಗೆ ಶ್ರಮಿಸಬೇಕು, ಕಾರ್ಯಕರ್ತರು ಕೇವಲ ಬಾವುಟ ಗಳನ್ನು ಕಟ್ಟಲು ಮಾತ್ರ ಸಮೀತರಾಗಿಲ್ಲ. ಪಕ್ಷದ ಗೆಲುವಿಗೆ ನಿರಂತರ ಶ್ರಮ ವಹಿಸುತ್ತಿದ್ದಾರೆ. ಮೈಸೂರು-ಕೊಡಗು ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿಯನ್ನು ನೀಡಲಾಗಿದೆ. ಅವರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸುವಂತಾಗಬೇಕು ಎಂದು ಕರೆ ನೀಡಿದರು.
ಸಮಾವೇಶದಲ್ಲಿ ರಾಜ್ಯ ಹಿಮದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್ಸಿಗಳಾದ ಸುನಿಲ್ ಸುಬ್ರಮಣಿ, ಎಸ್.ಜಿ.ಮೇದಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷರುಗಳಾದ ರಾಬಿನ್ ದೇವಯ್ಯ, ಬಿ.ಬಿ.ಭಾರತೀಶ್, ಸಂಚಾಲಕ ರವಿಶಂಕರ್, ಬಿಜೆಪಿ ಪ್ರಮುಖರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಮಾಜಿ ಅಧ್ಯಕ್ಷ ಆನಂದ ರಘು, ಪ್ರಮುಖರಾದ ಎ.ಎಸ್.ಅರುಣ್ ಕುಮಾರ್, ನೆಲ್ಲಿರ ಚಲನ್, ರವಿಶಂಕರ್, ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.
ಹಿಂದುಳಿದ ವರ್ಗಗಳ ಕೊಡಗು ಜಿಲ್ಲಾ ಉಸ್ತುವಾರಿ ವಿಠಲ್ ಪೂಜಾರಿ ಪ್ರಾಸ್ತವಿಕ ಮಾತನಾಡಿದರು. ತ್ರಿಶಾ ಪ್ರಾರ್ಥಿಸಿ, ಒಬಿಸಿ ಪ್ರಧಾನ ಕಾರ್ಯದರ್ಶಿ ರಘು ಸ್ವಾಗತಿಸಿ. ರಂಜಿತ್ ವಂದಿಸಿದರು.
:: ಸನ್ಮಾನ ::
ಇದೇ ಸಂದರ್ಭ ಜಿಲ್ಲಾ ಬಿಜೆಪಿ ಹಾಗೂ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಯದುವೀರ್ ಅವರಿಗೆ ಕೊಡಗಿನ ಸಾಂಪ್ರದಾಯಿಕ ವಡಿಕತ್ತಿಯನ್ನು ನೀಡಿ, ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಲಾಯಿತು.
::: ಅಧಿಕಾರಿ ಹಸ್ತಾಂತರ :::
ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ನೂತನ ಅಧ್ಯಕ್ಷ ಅಪ್ರು ರವೀಂದ್ರ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಹಾಗೂ ಪ್ರಮುಖರು ಅಧಿಕಾರ ನೀಡಿದರು.
ಇದೇ ಸಂದರ್ಭ ಬಿಜೆಪಿ ಪಕ್ಷಕ್ಕೆ ಇತರ ಪಕ್ಷಗಳ ಹಲವು ಕಾರ್ಯಕರ್ತರು ಸೇರ್ಪಡೆಗೊಂಡರು. ಸಭಾ ಕಾರ್ಯಕ್ರಮಕ್ಕೂ ಮೊದಲು ಹಳೇ ಖಾಸಗಿ ಬಸ್ ನಿಲ್ದಾಣದಿಂದ ಕಾವೇರಿ ಹಾಲ್ ವರೆಗೆ ಬೃಹತ್ ಮೆರವಣಿಗೆ ಸಾಗಿತು.









