
ಮಡಿಕೇರಿ ಜೂ.22 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಪ್ರತಿಕೃತಿಯನ್ನು ದಹಿಸುವ ಮೂಲಕ ಬಿಜೆಪಿ ಕೊಡಗಿನ ಜನರ ಭಾವನೆಗೆ ದಕ್ಕೆ ತಂದಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಅವರು, ಅಣುಕು ಶವಯಾತ್ರೆ ಮಾಡಿ, ಪ್ರತಿಕೃತಿ ದಹಿಸಿ ವಿಕೃತಿ ಮೆರೆಯುವುದು ಕೊಡಗಿನ ಸಂಸ್ಕೃತಿಯಲ್ಲ. ಬಿಜೆಪಿಯ ಈ ವರ್ತನೆ ಖಂಡನೀಯವೆಂದು ತಿಳಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 100ರ ಗಡಿ ದಾಟಿಸಿದೆ. ಅಡುಗೆ ಅನಿಲ, ರಸಗೊಬ್ಬರ, ಕೃಷಿ ಪರಿಕರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಜನಸಾಮಾನ್ಯರು ಬೆಲೆ ಏರಿಕೆಯ ಹೊರೆಯಿಂದ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಆದರೂ ಕಾಂಗ್ರೆಸ್ ಪಕ್ಷ ಬಿಜೆಪಿ ಮಂದಿಯ ಪ್ರತಿಕೃತಿ ದಹಿಸಿ ವಿಕೃತಿ ಮೆರೆಯುವ ಕಾರ್ಯಕ್ಕೆ ಮುಂದಾಗಿಲ್ಲ. ಬಿಜೆಪಿ ತನ್ನ ಕೀಳು ಮಟ್ಟದ ರಾಜಕಾರಣವನ್ನು ಪೊನ್ನಣ್ಣ ಅವರ ಪ್ರತಿಕೃತಿ ದಹಿಸುವ ಮೂಲಕ ಸಾಕ್ಷೀಕರಿಸಿದೆ ಎಂದು ಆರೋಪಿಸಿದ್ದಾರೆ.
ಹಿಂದುಳಿದ ವರ್ಗ, ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರ ಸಮಸ್ಯೆಗಳಿಗೆ ಹಗಲಿರುಳೆನ್ನದೆ ಸ್ಪಂದಿಸುತ್ತಿರುವ ಪೊನ್ನಣ್ಣ ಅವರು ರಾಜ್ಯ ಮಟ್ಟದಲ್ಲೂ ಪ್ರಬುದ್ಧ ಮತ್ತು ಪ್ರಭಾವಿ ರಾಜಕಾರಣಿ ಎನಿಸಿಕೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳು ಮತ್ತು ಮಾನವೀಯ ಸೇವೆಗಳ ಮೂಲಕವೇ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪೊನ್ನಣ್ಣ ಅವರ ಏಳಿಗೆಯನ್ನು ಸಹಿಸದ ಬಿಜೆಪಿ ರಾಜಕೀಯ ದುರುದ್ದೇಶವನ್ನು ಪ್ರದರ್ಶಿಸಿದೆ. ಜಿಲ್ಲೆಯ ಜನ ಬಿಜೆಪಿಯ ನಡೆಯನ್ನು ಖಂಡಿಸುತ್ತಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಕ್ಷಮೆಯಾಚಿಸಬೇಕು ಎಂದು ಪೀಟರ್ ಒತ್ತಾಯಿಸಿದ್ದಾರೆ.








