
ಮಡಿಕೇರಿ ಫೆ.17 NEWS DESK : ಕೊಡಗು ಜಿಲ್ಲೆಗೆ ಕಳಸಪ್ರಾಯದಂತೆ ಇರುವ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶಕ್ತಿ ತುಂಬಬಲ್ಲ ಕೊಡಗು ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಹಾಗೂ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಪಿ.ಪಿ.ಸುಕುಮಾರ್ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲೆಗೆ ಪ್ರತ್ಯೇಕವಾದ ವಿಶ್ವ ವಿದ್ಯಾಲಯ ಬೇಕು ಎನ್ನುವ ಚಿಂತಕರ, ಜ್ಞಾನದಾಹಿಗಳ ಹಾಗೂ ವಿದ್ಯಾರ್ಥಿಗಳ ಕನಸು ಸುಮಾರು ಎರಡು ವರ್ಷಗಳ ಹಿಂದೆ ನನಸಾಯಿತು. ಆದರೆ ಪ್ರಸ್ತುತ ರಾಜ್ಯದಲ್ಲಿರುವ ಸರ್ಕಾರ ವಿವಿಯನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದ್ದು, ಇದು ಕೊಡಗಿನ ಜನರ ಭಾವನೆಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶ್ವ ವಿದ್ಯಾಲಯವೆಂದರೆ ವಿದ್ವಾಂಸರ ಕೂಟವಿರುವ ಜ್ಞಾನದ ಒಡಲು, ಜಗತ್ತಿನ ಭೂಪಟದಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಈ ವಿವಿಯನ್ನು ಉಳಿಸಿ ಬೆಳೆಸುವ ಅಗತ್ಯವಿತ್ತು. ಈ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜು ಬೊಮ್ಮಾಯಿ ಅವರು ಮಾಜಿ ಶಾಸಕರುಗಳಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಅವರುಗಳ ಮನವಿಗೆ ಸ್ಪಂದಿಸಿ ವಿವಿಯನ್ನು ಮಂಜೂರು ಮಾಡಿದರು. ನಾಗಲೋಟದಲ್ಲಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದ ಸಮೀಪ ಸಾಕಷ್ಟು ವಿಸ್ತಾರವಾದ ಭೌಗೋಳಿಕ ಪ್ರದೇಶವಿರುವ ಚಿಕ್ಕ ಅಳುವಾರದಲ್ಲಿ ವಿವಿಯನ್ನು ಸ್ಥಾಪಿಸಲಾಯಿತು. ಕೊಡಗು ವಿಶ್ವವಿದ್ಯಾಲಯದ ಹಲವಾರು ಸ್ನಾತಕೋತ್ತರ ಪದವಿ ತರಗತಿಗಳು ವಿಶ್ವವಿದ್ಯಾಲಯದ ಅಧೀನ ಕಾಲೇಜಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮತ್ತು ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ ಪ್ರಾರಂಭವಾಯಿತು. ಕೊಡಗು ವಿವಿ ಪ್ರಸ್ತುತ 24 ಸಂಯೋಜಿತ ಕಾಲೇಜುಗಳನ್ನು ಹೊಂದಿದೆ. ಇವುಗಳಲ್ಲಿ 7 ಸರಕಾರಿ ಕಾಲೇಜು, 3 ಅನುದಾನಿತ ಕಾಲೇಜು, 1 ವಿಶ್ವವಿದ್ಯಾಲಯ ಕಾಲೇಜು, 13 ಖಾಸಗಿ ಕಾಲೇಜುಗಳಾಗಿದ್ದು, ಗುಣಾತ್ಮಕ ಮತ್ತು ಕೌಶಲ್ಯ ಆಧಾರಿತ ಶಿಕ್ಷಣವನ್ನು ನೀಡುತ್ತಿದೆ. ಈ ಮೊದಲು ಕೊಡಗಿನ ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ಕಾರ್ಯಕೈಗೊಳ್ಳುವುದು ಗಗನ ಕುಸುಮವಾಗಿತ್ತು. ಪದವಿ ಸ್ನಾತಕೋತ್ತರ ಪದವಿ, ಪಿಹೆಚ್ಡಿ ಪದವಿ ಪಡೆಯಲು ದೂರದ ವಿಶ್ವವಿದ್ಯಾಲಯಗಳಿಗೆ ಹೋಗಬೇಕಾಗಿತ್ತು. ಜೊತೆಗೆ ಲಕ್ಷಾಂತರ ಹಣವನ್ನು ಊಟ, ವಸತಿ, ಪ್ರಯಾಣಕ್ಕಾಗಿ ಖರ್ಚು ಮಾಡಬೇಕಾಗಿತ್ತು. ಕೊಡಗಿನ ರೈತಾಪಿ ವರ್ಗದ ಮಕ್ಕಳು, ಹಾಡಿ ಮಕ್ಕಳು, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಮೊಟಕುಗೊಳಿಸಬೇಕಾಗಿತ್ತು. ಆದರೆ ಇಂದು ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್ಡಿ ಸಂಶೋಧನಾ ಪದವಿಗಳು ಕೊಡಗಿನ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವವಿದ್ಯಾಲಯವೆಂದರೆ ಕೇವಲ ಸಾಂಪ್ರದಾಯಿಕ ಪದವಿ ಶಿಕ್ಷಣ ನೀಡುವುದಲ್ಲ. ಕೃಷಿ, ಪ್ರವಾಸೋದ್ಯಮ, ಸಂಸ್ಕೃತಿ, ಅಚಾರ ವಿಚಾರ, ಕಲೆ, ಸಾಹಿತ್ಯ, ಭಾಷೆಯನ್ನು ಬೆಳೆಸಲು ಮತ್ತು ಸಂರಕ್ಷಿಸಲು ವಿಶ್ವವಿದ್ಯಾಲಯ ಅಗತ್ಯವಾಗಿದೆ. ಕೊಡಗು ವಿಶ್ವವಿದ್ಯಾಲಯದಿಂದ ಕೊಡಗು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ, ರಾಜ್ಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಭಾಗ್ಯ ಸಿಗುತ್ತದೆ. ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ, ಸಂಶೋಧನಾತ್ಮಕ ರೂಪದಲ್ಲಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳಬಹುದು. ಕೊಡಗು ವಿವಿ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳು ದೊರೆಯುತ್ತದೆ. ವಿವಿಯಿಂದ ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ. ವಿಶ್ವದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಬಹುದಾಗಿದೆ. ಬಡ ವಿದ್ಯಾರ್ಥಿಗಳ ಹಾಗೂ ಕೊಡಗಿನ ಪ್ರಗತಿಗೆ ವಿವಿ ಹೆಚ್ಚು ಸಹಕಾರಿಯಾಗಿದ್ದು, ಮುಚ್ಚುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಸುಕುಮಾರ್ ಒತ್ತಾಯಿಸಿದ್ದಾರೆ.









