
ಮಡಿಕೇರಿ ಫೆ.17 NEWS DESK : ಕೃಷಿ ಫಸಲು ನಷ್ಟ ಮತ್ತು ಜೀವಹಾನಿಗೆ ಕಾರಣವಾಗುತ್ತಿರುವ ಕಾಡಾನೆಗಳನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವ ‘ಸಾಫ್ಟ್ ಏರಿಯಾ ರಿಲೀಸ್’ ಯೋಜನೆಯ ಅನುಷ್ಠಾನಕ್ಕೆ 2 ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕಳೆದ ಮೂರು ದಶಕಗಳಿಂದ ಜಿಲ್ಲೆಯಾದ್ಯಂತ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಇವುಗಳ ನಿಯಂತ್ರಣಕ್ಕಾಗಿ ಕಳೆದ ತಿಂಗಳು ಮುಖ್ಯಮಂತ್ರಿಗಳು, ಅರಣ್ಯ ಸಚಿವರು, ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಉಪಸ್ಥಿತಿಯಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ, ಉಪಟಳ ನೀಡುವ ಕಾಡಾನೆಗಳನ್ನು ಸ್ಥಳಾಂತರಿಸುವ ಸಾಫ್ಟ್ ರಿಲೀಸ್ ಏರಿಯಾಕ್ಕೆ ಅಗತ್ಯವಾದ ಜಾಗವನ್ನು ಗುರುತಿಸಲು ಸರ್ಕಾರ ಸಮ್ಮತಿಯನ್ನು ನೀಡಿದೆ. ಗುರುತು ಮಾಡಿದ ಪುಂಡಾನೆಗಳ ಸ್ಥಳಾಂತರಕ್ಕೆ ಗುರುತಿಸುವ ಪ್ರದೇಶ ಅರಣ್ಯ ಪ್ರದೇಶವೇ ಆಗಿರಬಹುದು. ಆದರೆ, ಒಮ್ಮೆ ಜಾಗ ಗುರುತಿಸಲ್ಪಟ್ಟ ಬಳಿಕ, ಒಟ್ಟು ಪ್ರದೇಶದ ಸುತ್ತ ಕಾಡಾನೆಗಳು ಮರಳಿ ಬಾರದಂತೆ ಅಗತ್ಯ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯ ಯಾವೆಲ್ಲ ವಿಭಾಗಗಳಲ್ಲಿ ಕಂದಕಗಳು ಮತ್ತು ರೈಲ್ವೆ ಹಳಿಯ ಬೇಲಿಗಳಿವೆಯೋ, ಅಲ್ಲಿ ಹಾಳಾದ ಭಾಗಗಳನ್ನು ಗುರುತಿಸಿ ದುರಸ್ತಿ ಪಡಿಸುವ ಕೆಲಸ ಕಾರ್ಯಗಳಿಗೆ ಸರ್ಕಾರ 21 ಕೋಟಿ ರೂ. ನೆರವನ್ನು ಬಿಡುಗಡೆ ಮಾಡಿದೆ. ಇದರ ಮೂಲಕ ಕಾಡಾನೆಗಳ ಗಂಭೀರ ಆತಂಕವನ್ನು ಎದುರಿಸುತ್ತಿರುವ ಪಂಚಾಯ್ತಿ ವ್ಯಾಪ್ತಿಯ ಕಂದಕಗಳ ದುರಸ್ತಿ, ರೈಲ್ವೆ ಹಳಿ ಬೇಲಿಗಳ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.
::: ಸಮಗ್ರ ವರದಿ ::: ಸರಕಾರದಿಂದ ಲಭ್ಯ ಅನುದಾನದ ಮೂಲಕ ಯಾವೆಲ್ಲ ಭಾಗಗಳಲ್ಲಿ ಕಂದಕಗಳು, ರೈಲ್ವೆ ಹಳಿಯ ಬೇಲಿ ಮೊದಲಾದ ಕಾಮಗಾರಿಗಳು ನಡೆಯಬೇಕೆನ್ನುವ ಬಗ್ಗೆ ಸಮಗ್ರ ವರದಿಯನ್ನು ಶಾಸಕ ಪೊನ್ನಣ್ಣ ಅವರು ಕೇಳಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಮುಂದಿಟ್ಟುಕೊಂಡು ಇದೇ ಫೆ.22 ರಂದು ಅರಣ್ಯಾಧಿಕಾರಿಗಳೊಂದಿಗೆ ಶಾಸಕರು ಚರ್ಚಿಸಿ, ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
::: ಕೊಡಗಿನಲ್ಲಿ 2 ಸಾವಿರ ಆನೆ ::: ಕರ್ನಾಟಕದಲ್ಲಿ ಇರುವ ಒಟ್ಟು 6395 ಆನೆಗಳಲ್ಲಿ ಸುಮಾರು 2 ಸಾವಿರ ಆನೆಗಳು ಕೊಡಗು ಜಿಲ್ಲೆಯೊಂದರಲ್ಲೆ ಇವೆ. ಇದರಲ್ಲಿ ಸುಮಾರು 180 ರಿಂದ 200 ಆನೆಗಳು ಕಾಫಿ ತೋಟಗಳನ್ನೆ ತಮ್ಮ ಆವಾಸ ಸ್ಥಾನವಾಗಿಸಿಕೊಂಡಿರುವುದಾಗಿ ಸಂಕೇತ್ ಪೂವಯ್ಯ ಮಾಹಿತಿ ನೀಡಿ, ತೋಟಗಳಲ್ಲಿ ನೆಲೆ ನಿಂತಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರು ಮರಳಿ ಅವುಗಳು ಕಾಫಿ ತೊಟಗಳಿಗೆ ಬರುತ್ತಿರುವ ಗಂಭೀರ ಸಮಸ್ಯೆ ನಮ್ಮ ಮುಂದಿದೆ. ಇವೆಲ್ಲವುಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಫ್ಟ್ ರಿಲೀಸ್ ಏರಿಯಾ ಗುರುತು ಹಚ್ಚುವುದಕ್ಕೆ ಅವಕಾಶ ಕಲ್ಪಿಸುವ ಹಾಗೂ ಅಗತ್ಯ ಅನುದಾನ ಒದಗಿಸುವ ಕಾರ್ಯ ನಡೆಯುತ್ತಿದೆ.
::: 135 ಹುಲಿಗಳು ::: ಮಧ್ಯ ಪ್ರದೇಶವನ್ನು ಬಿಟ್ಟಲ್ಲಿ ಅತೀಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಕರ್ನಾಟಕ. ರಾಜ್ಯದಲ್ಲಿ 563 ಹುಲಿಗಳಿದ್ದು, ಇದರಲ್ಲಿ 135 ಹುಲಿಗಳು ಕೊಡಗಿನ ನಾಗರಹೊಳೆ ವ್ಯಾಪ್ತಿಯಲ್ಲಿದೆ. ಕಾಡಾನೆಗಳೊಂದಿಗೆ ಹುಲಿ ಹಾವಳಿ, ಕಾಡು ಹಂದಿ, ಮಂಗಗಳ ಉಪಟಳ ಸೇರಿದಂತೆ ವಿವಿಧ ವನ್ಯ ಜೀವಿಗಳಿಂದ ಜಿಲ್ಲೆ ಸಂಕಷ್ಟಕ್ಕೆ ಸಿಲುಕಿದ್ದು, ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಸಮಸ್ಯೆ ಸೃಷ್ಟಿಸುವ ಹುಲಿಗಳನ್ನು ಪತ್ತೆ ಹಚ್ಚಿ ಅವುಗಳ ಮೇಲೆ ನಿಗಾ ಇಡುವ ನಿಟ್ಟಿನ ಪ್ರಯತ್ನಗಳು ನಡೆದಿದೆ.
::: 120 ಕಿ.ಮೀ ರೈಲ್ವೆ ಹಳಿ ಬೇಲಿ ::: ದಕ್ಷಿಣ ಕೊಡಗಿನ ಬ್ರಹ್ಮಗಿರಿ, ನಾಗರಹೊಳೆ ಹಾಗೂ ಪುಷ್ಪಗಿರಿ ಅರಣ್ಯದ ಅಂಚಿನ 120 ಕಿ.ಮೀ. ಉದ್ದಕ್ಕೆ ರೈಲ್ವೆ ಹಳಿಗಳ ಬೇಲಿ ನಿರ್ಮಾಣದ ಕಾಮಗಾರಿ ನಡೆಸುವ ಅಗತ್ಯವಿದೆ. ರಾಜ್ಯದಲ್ಲಿ ಒಟ್ಟಾಗಿ 350 ಕಿ.ಮೀ. ನಷ್ಟು ರೈಲ್ವೆ ಹಳಿಯ ಬೇಲಿ ನಿರ್ಮಾಣದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕೇಂದ್ರ್ರ ಸರ್ಕಾರಕ್ಕೆ ಹಳೆಯ ಮತ್ತು ನಿರುಪಯುಕ್ತ ರೈಲ್ವೆ ಹಳಿಗಳನ್ನು ಒದಗಿಸುವಂತೆ ಕೋರಲಾಗುತ್ತದೆ ಎಂದು ಸಂಕೇತ್ ಪೂವಯ್ಯ ಹೇಳಿದ್ದಾರೆ.
::: 33 ಜೀವಹಾನಿ ::: 2014 ರಿಂದ 2024ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ ವಿರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಒಟ್ಟು 33 ಜೀವ ಹಾನಿ ಸಂಭವಿಸಿದ್ದು, 53 ಮಂದಿ ಅಂಗ ವೈಕಲ್ಯತೆಗೆ ಒಳಗಾಗಿದ್ದಾರೆ. ಇವರಲ್ಲಿ ಐವರು ಶಾಶ್ವತ ಅಂಗ ವೈಕಲ್ಯತೆಗೆ ಒಳಗಾಗಿದ್ದು, 219 ಜಾನುವಾರುಗಳು ಸಾವಿಗೀಡಾಗಿವೆ. ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ಒಂದು ಜೀವ ಹಾನಿ, 2 ಅಂಗವೈಕಲ್ಯತೆ, 14 ಜಾನುವಾರುಗಳು ಸಾವನ್ನಪ್ಪಿವೆ. ನಾಗರಹೊಳೆ, ಕುಟ್ಟ ಮತ್ತು ನಾಲ್ಕೇರಿ ವಿಭಾಗಗಳಲ್ಲಿ 3 ಸಾವು, 10 ಅಂಗವೈಕಲ್ಯತೆ ಮತ್ತು 139 ಜಾನುವಾರುಗಳು ಸಾವನ್ನಪ್ಪಿವೆ.
::: ತ್ವರಿತಗತಿಯಲ್ಲಿ ಪರಿಹಾರ ::: ವನ್ಯಜೀವಿಗಳಿಂದ ಸಂಕಷ್ಟಕ್ಕೆ ಒಳಗಾದವರಿಗೆ ಒಟ್ಟು 4.72 ಕೋಟಿ ರೂ.ಗಳಷ್ಟು ಪರಿಹಾರವನ್ನು ತ್ವರಿತಗತಿಯಲ್ಲಿ ನೀಡುವ ಕೆಲಸ ಸರ್ಕಾರದಿಂದ ಆಗಿದೆ. ಕಾಡಾನೆಗಳ ಹಾವಳಿ ಹೆಚ್ಚಿರುವ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ಗಳನ್ನು ಅಳವಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸುಮಾರು 22 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ.
ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾರ್ಯಕ್ಕೆ ಶೀಘ್ರ ಚಾಲನೆ ನೀಡಲಾಗುವುದು. ಅರಣ್ಯ ಇಲಾಖಾಧಿಕಾರಿಗಳ ಜೊತೆ ವಿಶೇಷ ಪ್ರವಾಸ ಕೈಗೊಂಡು ಬೆಳೆಗಾರರು, ಕೃಷಿಕರು, ಸ್ಥಳೀಯರೊಂದಿಗೆ ಚರ್ಚಿಸಿ, ಸೂಕ್ಷ್ಮ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ಗಳನ್ನು ಅಳವಡಿಸಲಾಗುವುದು. (ಎ.ಎಸ್.ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರು)









