


ಮಡಿಕೇರಿ ಫೆ.19 NEWS DESK : ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಫೆ.20 ರಂದು ಆಯೋಜಿತ ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರ 150 ನೇ ವಷೋ೯ತ್ಸವದಂದು ಹುತ್ತರಿ ಹಾಡಿನ ದೃಶ್ಯ ನಮನ ಅನಾವರಣಗೊಳ್ಳಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವಕಾಮತ್ ತಿಳಿಸಿದ್ದಾರೆ. ನಗರದ ಜೂನಿಯರ್ ಕಾಲೇಜಿನಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಪಂಜೆ ಮಂಗೇಶರಾಯರ ಪ್ರಸಿದ್ದ ಹಾಡಾಗಿರುವ ಹುತ್ತರಿ ಹಾಡಿಗೆ ದೃಶ್ಯ ಸಂಕಲನಗೊಳಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಈ ಮೂಲಕ ಕೊಡಗಿನ ನಾಡಗೀತೆಯಾದ ಹುತ್ತರಿ ಹಾಡು ವಿಶ್ವವ್ಯಾಪಿ ಜನರನ್ನು ತಲುಪಲಿದೆ. ಈ ದೖಶ್ಯ ನಮನವನ್ನು ಪತ್ರಕರ್ತರಾದ ಅನಿಲ್ ಹೆಚ್.ಟಿ ಅವರ ಪರಿಕಲ್ಪನೆ ಮತ್ತು ಜೀವಿತಾ ಶೇಖರ್ ಸಂಕಲನದಲ್ಲಿ ಸಿದ್ದಗೊಳಿಸಿದೆ ಎಂದೂ ಕೇಶವಕಾಮತ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿ ಜಲಜ ಶೇಖರ್ ಅವರ ಕೃತಿ ಅಗ್ನಿಕುಂಡ ಮತ್ತು ಉಳುವಂಗಡ ಕಾವೇರಿ ಉದಯ ಆವರ ಕೃತಿ ಮುಕ್ತಕ ಮಾಣಿಕ್ಯ ವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾಕ್ಟರ್ ಮಂತರ್ ಗೌಡ ನೆರವೇರಿಸಲಿದ್ದಾರೆ ಎಂದೂ ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಡಿಕೇರಿಯ ಜೂನಿಯರ್ ಕಾಲೇಜ್ ರಸ್ತೆಗೆ ಪಂಜೆ ಮಂಗೇಶರಾಯರ ರಸ್ತೆ ಎಂದು ಈ ಹಿಂದೆ ಹೆಸರಿಸಿಟ್ಟಿದ್ದು ಆ ಫಲಕವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣ ಹಾಗೂ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಎಲ್ಲಾ ವಿದ್ಯಾ ಸಂಸ್ಥೆಗಳಿಗೆ ಪಂಜೆ ಮಂಗೇಶರಾಯರ ಭಾವಚಿತ್ರವನ್ನು ಸಾಹಿತ್ಯ ಪರಿಷತ್ ಪತಿಯಿಂದ ಉಡುಗೊರೆಯಾಗಿ ನೀಡಲಿದ್ದು ಅದನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾಕ್ಟರ್ ಮಂತರ್ ಗೌಡ ಅನಾವರಣಗೊಳಿಸಲಿದ್ದಾರೆ ಎಂದೂ ಕೇಶವ ಕಾಮತ್ ಮಾಹಿತಿ ನೀಡಿದ್ದಾರೆ.









