
ಕುಶಾಲನಗರ ಫೆ.19 NEWS DESK : ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಕೂಡಿಗೆ ಕ್ಲಸ್ಟರ್ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕೂಡಿಗೆ ಕ್ಲಸ್ಟರ್ ಮಟ್ಟದ ಎಫ್.ಎಲ್.ಎನ್.( ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ) ನ
ಕಲಿಕಾ ಹಬ್ಬವು ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು. ಕಲಿಕಾ ಹಬ್ಬದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಕ್ಕಳೊಂದಿಗೆ ಕಲಿಕಾ ಸಂತಸ ಹಂಚಿಕೊಂಡು ಮಾತನಾಡಿದ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯ ಉಪ ನಿರ್ದೇಶಕ( ಅಭಿವೃದ್ಧಿ)ರೂ ಆದ. ಸಂಸ್ಥೆಯ ಪ್ರಾಂಶುಪಾಲ ಎಂ.ಚಂದ್ರಕಾಂತ್, ಕಲಿಕಾ ಹಬ್ಬವು ಮಕ್ಕಳಲ್ಲಿ ಸಂತಸದ ಕಲಿಕೆಯೊಂದಿಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ ಎಂದರು. ಮಕ್ಕಳ ಸ್ಪರ್ಧಾ ಚಟುವಟಿಕೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂತಹ ಕಾರ್ಯಕ್ರಮಗಳು ಮಕ್ಕಳನ್ನು ಕಲಿಕೆಗೆ ಪ್ರೇರೇಣೆ ನೀಡುತ್ತವೆ ಎಂದರು. ಮಕ್ಕಳ ಕಲಿಕಾ ಹಬ್ಬದ ಮಹತ್ವ ಕುರಿತು ಮಾತನಾಡಿದ ಕೂಡಿಗೆ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಎಸ್ .ಶಿವಕುಮಾರ್, ಮಕ್ಕಳು ಇಂತಹ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಕ್ಕಳಲ್ಲಿ ಕಲಿಕಾ ಸ್ಪೂರ್ತಿ ಹಾಗೂ ಸಂತಸದ ಕಲಿಕೆ ಉಂಟಾಗುತ್ತದೆ ಎಂದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಎಂ.ವಿ.ಮಂಜೇಶ್ ಮಾತನಾಡಿ, ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸಲು ಇಂತಹ ಶೈಕ್ಷಣಿಕ ಚಟುವಟಿಕೆಗಳು ಮಕ್ಕಳ ಕಲಿಕೆಗೆ ಸಹಕಾರಿಯಾಗಿವೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕೂಡಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮೋಹಿನಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟವನ್ನು ವೃದ್ಧಿಸಲು ಸಹಕಾರಿಯಾಗಿವೆ ಎಂದರು. ಸಿ.ಆರ್.ಪಿ. ಕೆ. ಶಾಂತಕುಮಾರ್, ಕಲಿಕಾ ಹಬ್ಬದ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಡಿ.ಎಂ.ಸಿ ಅದ್ಯಕ್ಷೆ ಮೇಘ ಅದ್ಯಕ್ಷತೆ ವಹಿಸಿದ್ದರು. ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಮಂಗಳ , ಹೆಬ್ಬಾಲೆ ಕ್ಲಸ್ಟರ್ ನ ಸಿ.ಆರ್.ಪಿ ಆದರ್ಶ್, ಶಾಲಾ ಮುಖ್ಯೋಪಾಧ್ಯಾಯಿನಿ ಸಣ್ಣಕ್ಕ, ಸ್ವಯಂ ಸೇವಾ ಸಂಸ್ಥೆಯ ಜಿಲ್ಲಾ ನೋಡೆಲ್ ಅಧಿಕಾರಿ ಗೋವಿಂದರಾಜು , ಪತ್ರಕರ್ತರಾದ ಕೆ.ಕೆ. ನಾಗರಾಜಶೆಟ್ಟಿ, ಕೆ.ಆರ್. ಗಣೇಶ್ ಇದ್ದರು. ಶಿಕ್ಷಕ ಹುಲುಸೆ ಬಸವರಾಜಪ್ಪ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ದೀಪಿಕಾ ಗೀತೆ ಹಾಡಿದರು. ಸ್ಪರ್ಧೆಯ ನಂತರ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಲಿಕಾ ಹಬ್ಬದಲ್ಲಿ
ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಹತ್ತು ಶಾಲೆಗಳ 110 ವಿದ್ಯಾರ್ಥಿಗಳು , ಮುಖ್ಯಶಿಕ್ಷಕರು, ಶಿಕ್ಷಕರು ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು , ಹಳೆಯ ವಿದ್ಯಾರ್ಥಿಗಳು , ಪಾಲಕರು ಹೆಬ್ಬಾಲೆ ಕ್ಲಸ್ಟರ್ ನ ತೀರ್ಪುಗಾರರು ಭಾಗವಹಿಸಿದ್ದರು.









