
ಮಡಿಕೇರಿ ಫೆ.21 NEWS DESK : ನಿವೃತ್ತ ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನ ಆರ್ಥಿಕ ಸೌಲಭ್ಯವನ್ನು ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸಿ ಫೆ.28 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕರಾದ ಪಿ.ಎಸ್.ಜನಾರ್ಧನ, 2022ರ ಜು.1 ರಿಂದ 2024ರ ಜು.31ರ ಅವಧಿಯ ಒಳಗೆ ನಿವೃತ್ತರಾದ ರಾಜ್ಯವ್ಯಾಪ್ತಿಯ 26,700 ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ 7ನೇ ವೇತನ ಆಯೋಗದ ಆರ್ಥಿಕ ಸೌಲಭ್ಯಗಳು ದೊರಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸೂಚಿತ ಅವಧಿಯಲ್ಲಿ ನಿವೃತ್ತರಾದವರಿಗೆ ಏಳನೇ ವೇತನ ಆಯೋಗದ ಸೌಲಭ್ಯಗಳ ಬದಲಾಗಿ ಹಿಂದಿನ 6ನೇ ವೇತನ ಆಯೋಗದ ಸೌಲಭ್ಯವನ್ನಷ್ಟೆ ನೀಡಲಾಗಿದೆ. 7ನೇ ವೇತನ ಆಯೋಗದಂತೆ ‘ಎ’ ದರ್ಜೆಯಿಂದ ‘ಸಿ’ ದರ್ಜೆಯವರೆಗೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರಿಗೆ 12 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ ನೀಡಬೇಕಾಗುತ್ತದೆಂದು ಮಾಹಿತಿ ನೀಡಿದರು. ಸರ್ಕಾರವು ಸರ್ಕಾರಿ ನೌಕರರಿಗೆ ವೇತನ ಭತ್ಯೆಗಳನ್ನು ಹಾಗೂ ಪಿಂಚಣಿಯನ್ನು ಪರಿಷ್ಕರಿಸಲು ಡಾ.ಸುಧಾಕರರಾವ್ ಅವರ ನೇತೃತ್ವದಲ್ಲಿ 7ನೇ ವೇತನ ಆಯೋಗವನ್ನು ರಚಿಸಿತ್ತು. ಈ ಆಯೋಗ ನೀಡಿದ ವರದಿಯಂತೆ ಸರ್ಕಾರ 2024ರ ಆ.23 ರಂದು ವೇತನ ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿತ್ತು. ಈ ಆದೇಶದಲ್ಲಿ 2024ರ ಆ.1 ರಿಂದ ವೇತನ ಭತ್ಯೆಗಳ ಆರ್ಥಿಕ ಸೌಲಭ್ಯವನ್ನು ಮಂಜೂರು ಮಾಡಿರುತ್ತದೆ. ವಾಸ್ತವವಾಗಿ 2022ರ ಜು.1ರಿಂದಲೇ ಜಾರಿಗೊಳಿಸಬೇಕಾದ್ದನ್ನು 2024ರ ಆ.1 ರಿಂದ ಜಾರಿಗೊಳಿಸಿರುವುದರಿಂದ 2022ರ ಜು.1 ರಿಂದ 2024ರ ಜು.31 ರವಧಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರು ಆಯೋಗದ ಶಿಫಾರಸ್ಸಿನ ನಿವೃತ್ತಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆಂದು ಮಾಹಿತಿ ನೀಡಿದರು. ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ನೀಡಿದ್ದರು ಸೂಕ್ತ ಸಂದನ ದೊರಕದ ಹಿನ್ನೆಲೆ ಇದೀಗ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾಗುತ್ತಿರುವುದಾಗಿ ತಿಳಿಸಿ, ಕೊಡಗಿನಲ್ಲಿ ಸೌಲಭ್ಯ ವಂಚಿತ 426 ನಿವೃತ್ತ ಸರ್ಕಾರಿ ನೌಕರರು ಇರುವುದಾಗಿ ಮಾಹಿತಿಯನ್ನಿತ್ತರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಸಂಚಾಲಕರುಗಳಾದ ಜಿ.ಎಂ. ಚಿನ್ನಯ್ಯ, ಕೆ.ಬಿ.ಮೋಹನ್. ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಅಂತೋಣಿ ಡಿಸೋಜ ಹಾಗೂ ವಿರಾಜಪೇಟೆ ತಾಲ್ಲೂಕು ಸಂಚಾಲಕ ಎಂ.ಎಸ್.ಸುಬ್ರಮಣಿ ಉಪಸ್ಥಿತರಿದ್ದರು.









