
ಮಡಿಕೇರಿ NEWS DESK ಫೆ.23 : ಹಲವು ವರ್ಷಗಳ ನಂತರ ಕೊಡಗು ಜಿಲ್ಲೆಗೆ ವರದಾನವಾಗಿ ಸಿಕ್ಕಿರುವ ಕೊಡಗು ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾಗಿ ಬೆಳವಣಿಗೆಯ ಹಾದಿಯಲ್ಲಿರುವಾಗಲೇ ಇದನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೇ ವಿದ್ಯಾರ್ಥಿಗಳ ಸಂಘ ತೀವ್ರವಾಗಿ ವಿರೋಧಿಸುವುದಾಗಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಗತ್ತಿನ ಯಾವುದೇ ದೇಶದಲ್ಲಿ ಹಣಕಾಸಿನ ಕ್ಷುಲ್ಲಕ ಕಾರಣ ನೀಡಿ ಶಿಕ್ಷಣ ಸಂಸ್ಥೆಗಳನ್ನು ಸರ್ಕಾರ ಮುಚ್ಚಿದ ನಿದರ್ಶನಗಳು ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಉಪಸಮಿತಿಯ ಈ ಅವೈಜ್ಞಾನಿಕ ಹಾಗೂ ಅವಾಸ್ತವಿಕ ಪ್ರಸ್ತಾವನೆಯನ್ನು ತಕ್ಷಣ ತಿರಸ್ಕರಿಸಬೇಕು. 2025ರ ಆಯವ್ಯಯದಲ್ಲಿ ಅಗತ್ಯ ಅನುದಾನ ಕೊಡಗು ವಿಶ್ವವಿದ್ಯಾಲಯಕ್ಕೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಗುಣಮಟ್ಟದ ನಾಗರಿಕ ಮೂಲಭೂತ ಸೌಕರ್ಯಗಳಿಲ್ಲ. ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರಗಳು ಇಲ್ಲ. ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ನಾಡಿನ ಪ್ರಗತಿಯ ಸಂಕೇತವಾಗಿದೆ. ಆದರೆ ಕೊಡಗು ಜಿಲ್ಲೆಯ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವು ಕೇವಲ ಶೇ.18 ಆಗಿದ್ದು, ರಾಜ್ಯದಲ್ಲಿ 26ನೇ ಸ್ಥಾನದಲ್ಲಿದೆ. ಇದು ಉನ್ನತ ಶಿಕ್ಷಣದ ಪೂರಕ ವ್ಯವಸ್ಥೆಗಳ ಕೊರತೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ. ಕೊಡಗಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಆಶೋತ್ತರಗಳನ್ನು ಗುರುತಿಸಿ, ಉಳಿಸಿ ಬೆಳೆಸುವ ನಿಟ್ಟಿನಲ್ಲಿ 2023 ರಲ್ಲಿ ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯಾಗಿರುವುದು ಒಂದು ಪ್ರಮುಖ ಮೈಲುಗಲ್ಲಾಗಿದೆ. ಪದವಿ, ಸ್ನಾತಕೋತ್ತರ, ಸಂಶೋಧನೆಯ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣವನ್ನು ಕೌಶಲ್ಯ ತರಬೇತಿಯನ್ನು ಸ್ಥಳೀಯವಾಗಿ ಪಡೆಯಲು ಇದೊಂದು ಐತಿಹಾಸಿಕ ಅವಕಾಶವಾಗಿದೆ. ಕೊಡಗಿನ ಸಮುದಾಯ, ಭಾಷೆ, ಇತಿಹಾಸ, ಸಂಸ್ಕೃತಿ, ಪರಂಪರೆ, ಜಾನಪದ ಇತ್ಯಾದಿಗಳನ್ನು ಮತ್ತು ಇಂದಿನ ಅಗತ್ಯಗಳನ್ನು ವಸ್ತುನಿಷ್ಠವಾಗಿ ಇಲ್ಲಿಯೇ ಅಧ್ಯಯನ ಮಾಡಲು ಸುಯೋಗವಾಗಿದೆ. ಆದರೆ ವಿವಿ ಸ್ಥಾಪನೆಯಾದ ದಿನದಿಂದಲೂ ಅನುದಾನದ ಕೊರತೆಯಿಂದ ತೊಂದರೆಗಳನ್ನು ಎದುರಿಸುತ್ತಿದೆ. ವಿವಿಧ ಕೊರತೆಗಳ ನಡುವೆಯೂ ಕೊಡಗು ವಿಶ್ವವಿದ್ಯಾಲಯ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತನ್ನ ಸ್ವಂತ ಸಂಪನ್ಮೂಲದಿಂದ ಬೋಧಕ-ಬೋಧಕೇತರ ಸಿಬ್ಬಂದಿಗಳಿಗೆ ಸಂಬಳವನ್ನು ನೀಡುತ್ತಿದೆ. ಕೊಡಗು ಗುಡ್ಡಗಾಡು ಪ್ರದೇಶ ಮತ್ತು ವಿಶಿಷ್ಟ ಜಿಲ್ಲೆಯಾಗಿದ್ದು, ಜನಸಂಖ್ಯೆಯು ಬಯಲು ಪ್ರದೇಶಕ್ಕೆ ಹೋಲಿಸಿದರೆ ಕಡಿಮೆಯಿದೆ. ಇಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಮತ್ತು ನಾಗರೀಕ ಸೇವೆಗಳಿಗೆ ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳನ್ನು ಅವಲಂಬಿಸುತ್ತಾ ಬಂದಿದ್ದಾರೆ. ಉನ್ನತ ಶಿಕ್ಷಣದ ಸಾಮಾನ್ಯ ಮತು ವೃತ್ತಿಪರ ಕ್ಷೇತ್ರಗಳಾದ ವೈದ್ಯಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆ, ಕಾನೂನು, ಕೌಶಲ್ಯ, ವಾಣಿಜ್ಯ ಮತ್ತು ನಿರ್ವಹಣೆ, ಮಾಹಿತಿ ತಂತ್ರಜ್ಞಾನ, ಹಣಕಾಸು, ಆರೋಗ್ಯ, ಕೃಷಿ, ಅರಣ್ಯ, ನರ್ಸಿಂಗ್, ಸಮಾಜ ವಿಜ್ಞಾನ ಇತ್ಯಾದಿಗಳ ಅಧ್ಯಯನಕ್ಕೆ ಹೊರ ಜಿಲ್ಲೆಗಳಿಗೆ ಮಕ್ಕಳನ್ನು ಕಳುಹಿಸಬೇಕಾದ ದುಸ್ಥಿತಿ ಇದೆ. ಕೊಡಗಿನ ಗ್ರಾಮೀಣ ಭಾಗದ ಬಡವರ, ದುರ್ಬಲ ವರ್ಗದವರ, ದೀನ-ದಲಿತರ, ಆರ್ಥಿಕವಾಗಿ ಹಿಂದುಳಿದವರ ಮಕ್ಕಳು ಎಲ್ಲಿಗೆ ಹೋಗಬೇಕು, ಅವರು ಉನ್ನತ ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿತರಾಗಬೇಕೆ ಎಂದು ಬೊಳ್ಳಜಿರ ಬಿ.ಅಯ್ಯಪ್ಪ ಪ್ರಶ್ನಿಸಿದ್ದಾರೆ. ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿ, ಅಂತರರಾಷ್ಟ್ರೀಯ ದರ್ಜೆಯ ಉನ್ನತ ಶಿಕ್ಷಣದ ಕೇಂದ್ರವನ್ನಾಗಿ ಬೆಳೆಸುವುದು ಕೊಡಗಿನ ಜನಪ್ರತಿನಿಧಿಗಳ, ರಾಜಕೀಯ ಧುರೀಣರ, ಸಂಘ-ಸಂಸ್ಥೆಗಳ, ಸಾಮಾನ್ಯ ನಾಗರೀಕರ ಜವಾಬ್ದಾರಿಯಾಗಿದೆ. ಆರೋಗ್ಯ, ಶಿಕ್ಷಣ, ವಸತಿ, ನೆಲ, ಜಲ, ನಾಡು, ನುಡಿಯ ವಿಚಾರದಲ್ಲಿ ಎಲ್ಲರ ಚಿಂತನೆ ಪಕ್ಷಾತೀತವಾಗಿ ಇರಬೇಕು. ಅದು ಸಮಾಜದ ಕಲ್ಯಾಣಕ್ಕಾಗಿಯೇ ಹೊರತು ಯಾರ ಸಾಂದರ್ಭಿಕ ಸ್ವಾರ್ಥಕ್ಕಾಗಿ ಅಲ್ಲ. ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು, ನಾಗರಿಕ ಸೇವೆಗಳ ಸಂಪನ್ಮೂಲಗಳನ್ನು ಇಂದು ನಾವು ನಮಗಾಗಿ ಕಟ್ಟಿಕೊಳ್ಳುವ, ಪಡೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಕೊಡಗು ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಪಕ್ಷಾತೀತವಾಗಿ ಸ್ವಾಭಿಮಾನದಿಂದ ಮತ್ತು ಒಗ್ಗಟ್ಟಿನಿಂದ ನಮ್ಮ ಸಾಂವಿಧಾನಿಕ ಹಕ್ಕನ್ನು ಜನಾಂದೋಲನದ ಮೂಲಕ ಪಡೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.








