
ನಾಪೋಕ್ಲು ಫೆ.24 NEWS DESK : ಶ್ರೀ ಕೃಷ್ಣನ ಕೊಳಲಿನ ಹಬ್ಬವೆಂದು ಖ್ಯಾತಿ ಪಡೆದ ಅಯ್ಯಂಗೇರಿ ಗ್ರಾಮದ ಶ್ರೀ ಚಿನ್ನತಪ್ಪ ಉತ್ಸವ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ಶ್ರೀ ಕೃಷ್ಣನ ಕೊಳಲ ಹಬ್ಬದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಅಯ್ಯಂಗೇರಿ ಗ್ರಾಮದಲ್ಲಿ ವರ್ಷಂಪ್ರತಿ ಗ್ರಾಮಸ್ಥರು ವಿಜ್ರಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಚಿನ್ನತಪ್ಪ ಉತ್ಸವದ ಪಟ್ಟಣಿಹಬ್ಬ ಜರುಗಿತು. ಅಧಿಕ ಸಂಖ್ಯೆಯಲ್ಲಿ ಭಕ್ತರು ಉತ್ಸವಕ್ಕೆ ಆಗಮಿಸಿ ಶ್ರೀ ಕೃಷ್ಣನ ಕೊಳಲಿನ ನಾದವನ್ನು ಆಲಿಸಿ ದೇವಾಲಯದಲ್ಲಿ ಹರಕೆ, ಪೂಜೆ ಸಲ್ಲಿಸಿದರು. ಚಿನ್ನತಪ್ಪ ದೇವರ ವಾರ್ಷಿಕ ಉತ್ಸವ ಮುಂಜಾನೆ ಅನುರಾಧ ನಕ್ಷತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು. ಶನಿವಾರ ದೇವಾಲಯದಿಂದ ಶ್ರೀಕೃಷ್ಣನದು ಎನ್ನಲಾದ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆಯಲಾಯಿತು. ಹಬ್ಬಕ್ಕೆ ನಿಗದಿಪಡಿಸಿದ ಕುಟುಂಬದ ಹಿರಿಯರಾದ ಬಿದ್ದಂಡ ಹರೀಶ್ ಕೊಳಲನ್ನು ಹಿಡಿದು ನಿರ್ದಿಷ್ಟ ಸ್ಥಳಗಳಲ್ಲಿ ಮೂರು ಬಾರಿ ನುಡಿಸುತ್ತಾ ಊರ ಮಂದ್ ಗೆ ಆಗಮಿಸಿದರು. ಅಶ್ವತ್ಥ ವೃಕ್ಷದ ಕೆಳಗೆ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಕೃಷ್ಣನ ಕೊಳಲನ್ನು ನುಡಿಸಲಾಯಿತು. ಶ್ವೇತವಸ್ತ್ರಧರಿಸಿದ ಮಹಿಳೆಯರು ಚೆಂಬುಚೆರ್ಕ್ ಹೊತ್ತು ಊರಮಂದ್ ನಲ್ಲಿ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡರು. ಪ್ರತಿ ವರ್ಷದಂತೆ ಎತ್ತು ಪೋರಾಟ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಯಿತು. ತಪ್ಪಡ್ಕ ಸಲ್ಲಿಸಿದ ಬಳಿಕ ಶುದ್ಧಮುದ್ರಿಕೆಯವರನ್ನು ಮೀನಿಗೆ ಅಕ್ಕಿ ಹಾಕಲು ಆಹ್ವಾನಿಸಲಾಯಿತು. ಧಾರಾಪೂಜೆ ನಡೆದ ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಮೀನಿಗೆ ಅಕ್ಕಿ ಹಾಕಿದ ಬಳಿಕ ದೇವಾಲಯಕ್ಕೆ ತೆರಳುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಈ ಸಂದರ್ಭ ದೇವ ತಕ್ಕರು ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಬಿದ್ಧಿಯಂಡ ಶುಭಾಷ್, ಕಾರ್ಯದರ್ಶಿ ತೊತ್ತಿಯಂಡ ಜೀವನ್, ಖಜಾಂಚಿ ಆಚೀರ ಲವ, 14 ಕುಳದ ತಕ್ಕ ಮುಖ್ಯಸ್ಥರು, ಉತ್ಸವ ಸಮಿತಿ ಸದಸ್ಯರು, ಹಾಗೂ ಗೊಲ್ಲಜನಾಂಗ ಬಾಂಧವರೊಂದಿಗೆ ಊರ ಹಾಗೂ ಪರ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









