
ಮಡಿಕೇರಿ ಫೆ.25 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಸುಂಟಿಕೊಪ್ಪನಾಡು ಕೊಡವ ಸಮಾಜದ ಜಂಟಿ ಆಶ್ರಯದಲ್ಲಿ ‘ಸುಂಟಿಕೊಪ್ಪ ನಾಡ್ ಕೊಡವ ಸಾಂಸ್ಕೃತಿಕ ನಮ್ಮೆ’ಯನ್ನು ಮಾ.21ರಂದು ನಡೆಸಲು ತೀರ್ಮಾನಿಸಲಾಗಿದೆ. ಸುಂಟಿಕೊಪ್ಪ ಕೊಡವ ಸಮಾಜ ಅಧ್ಯಕ್ಷ ಚೇಂದ್ರಿಮಾಡ ಕರುಂಬಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ನಾಡೊರ್ಮೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಸುಂಟಿಕೊಪ್ಪ ಭಾಗದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಸಾಂಸ್ಕೃತಿಕ ನಮ್ಮೆಯನ್ನು ಇದೇ ಮೊಟ್ಟ ಮೊದಲಾಗಿ ಆಯೋಜಿಸುತ್ತಿರುವುದು ಸಂತೋಷದ ವಿಷಯ. ನಮ್ಮೆಗೆ ಈ ನಾಡಿನ ಸರ್ವ ಜನಾಂಗಬಾಂಧವರ ಸಹಕಾರ ಹಾಗೂ ಸಹಭಾಗಿತ್ವ ಅತ್ಯವಶ್ಯವಾಗಿದ್ದು, ನಾಡೊರ್ಮೆಯನ್ನು ಸುಂಟಿಕೊಪ್ಪ ಪಟ್ಟಣದಲ್ಲಿ ಮೆರವಣಿಗೆ ನಡೆಸುವುದರೊಂದಿಗೆ ಸಾಹಿತಿಕ-ಸಾಂಸ್ಕೃತಿಕಸಿರಿವಂತಿಕೆಯಲ್ಲಿ ನೆರವೇರಿಸುವಂತೆ ಮನವಿ ಮಾಡಿದರು. ನಾಡೊರ್ಮೆಯಲ್ಲಿ ಸುಂಟಿಕೊಪ್ಪ ಭಾಗದಲ್ಲಿ ಜನಾಂಗ, ಸಾಂಸ್ಕೃತಿಕ, ಸಾಹಿತ್ಯ ಹಾಗೂ ನುಡಿಗೆ ದುಡಿದ ಖ್ಯಾತವೆತ್ತ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವಂತೆ ತೀರ್ಮಾನಿಸಲಾಯಿತು. ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸುವುದಲ್ಲದೆ ಸ್ಥಳೀಯ ವಿಚಾರವಂತರಿಂದ ವಿಚಾರಮಂಡನೆ, ಕವಿಗೋಷ್ಠಿಯಂತಹ ಕಾರ್ಯಕ್ರಮಗಳನ್ನು ನಾಡೊರ್ಮೆಯಲ್ಲಿ ನಡೆಸುವಂತೆ ಒಕ್ಕೊರಲಿನ ತೀರ್ಮಾನ ಮಾಡಲಾಯಿತು. ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಸುಂಟಿಕೊಪ್ಪ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಅಜ್ಜಿಕುಟ್ಟಿರ ಸಿ.ಗಿರೀಶ್ ಸಭೆಗೆ ಆಗಮಿಸಿದ್ದ ಸರ್ವರನ್ನು ಸ್ವಾಗತಿಸಿ, ನಾಡೊರ್ಮೆ ನಡೆಸುವ ಉದ್ದೇಶದ ಬಗ್ಗೆ ತಿಳಿಸಿದರು. ನಾಡೊರ್ಮೆಗೆ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಮೊಳ್ಳೆರ ಪಿ.ಗಣೇಶ ಅವರನ್ನು ಆಹ್ವಾನಿಸುವ ಬಗ್ಗೆ ಪ್ರಸ್ತಾಪಿಸಿದಾಗ ಸರ್ವರೂ ಒಪ್ಪಿಗೆ ವ್ಯಕ್ತಪಡಿಸಿದರು. ನಾಡಿನ ಖ್ಯಾತ ಹಾಕಿ ವೀಕ್ಷಕ ವಿವರಣೆಗಾರರಾದ ಚೆಪ್ಪುಡಿರ ಎ. ಕಾರ್ಯಪ್ಪರನ್ನು ಆಹ್ವಾನಿಸುವಂತೆ ತೀರ್ಮಾನಿಸಲಾಯಿತು. ನಾಡೊರ್ಮೆಯ ವಿಚಾರ ಮಂಡನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಉನ್ನತ ಅಧಿಕಾರಿ ಅಪ್ಪಚೆಟ್ಟೋಳಂಡ ಸೋಮಯ್ಯ ಹಾಗೂ ಉಪನ್ಯಾಸಕಿ ಅಜ್ಜಿಕುಟ್ಟಿರ ಸುನಿತ ಗಿರೀಶ್ರವರಿಂದ ನಡೆಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನಾ ಬೋಜಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ನಾಪಂಡ ಗಣೇಶ್ ಹಾಗೂ ಸುಂಟಿಕೊಪ್ಪ ಕೊಡವ ಸಮಾಜದ ಸದಸ್ಯರಾದ ಪುಲ್ಲೆರ ಎಸ್. ಬೋಪಯ್ಯ, ಕೊಂಗೇಟಿರ ಯಶೋಧ ಕಾಳಪ್ಪ, ಅಪ್ಪಚೆಟ್ಟೋಳಂಡ ಸೋಮಯ್ಯ, ಅಪ್ಪಚೆಟ್ಟೋಳಂಡ ಶಾಂತಿ, ಮುಕ್ಕಾಟಿರ ಸುಮ ದಿನೇಶ್, ಎಂ. ಕೆ. ಪೊನ್ನಣ್ಣ, ಮಾಳೆಯಂಡ ಅಶ್ವಿನಿ ಪೆಮ್ಮಯ್ಯ, ನಾಯಡ ಚಿಟ್ಟಿ ಮುತ್ತಣ್ಣ, ಮಂಡುವಂಡ ಪೂಜಾ ಪೂಣಚ್ಚ, ಮಾತಂಡ ರಾಣಿ ಬೋಪಯ್ಯ, ಜಗ್ಗಾರಂಡ ಸಬಿತ ನಂದ, ಕುಪ್ಪಂಡ ಎಂ. ಪೂಣಚ್ಚ, ಮೋಟಂಡ ಎ. ಕುಟ್ಟಪ್ಪ, ಮುಕ್ಕಾಟಿರ ರಘು, ಕೋಟೆರ ಶಾಶ್ವತ್ ಬೋಪಣ್ಣ, ಚೇನಂಡ ಆಶೀಶ್, ಪುಡಿಯಂಡ ಎಂ. ಕಾರ್ಯಪ್ಪ, ಕಂಜಿತಂಡ ಅಯ್ಯಣ್ಣ, ಚೆಪ್ಪುಡಿರ ಟಿ. ಸತೀಶ್, ದಾಸಂಡ ರಮೇಶ್ ಚಂಗಪ್ಪ, ಕಣ್ಣಚಂಡ ಡ್ಯೂಕ್, ಚಂಗ್ರಾಂದಿರ ದೀಪು ಇತರರು ಇದ್ದರು. ಬೊಳಂದಂಡ ಸರೋಜಿನಿ ದೇವಯ್ಯ ಪ್ರಾರ್ಥಿಸಿದರು. ಸಮಾಜದ ಉಪಾಧ್ಯಕ್ಷ ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಚೆಟ್ಟಿರ ಕ್ಲೈವ್ ಪೊನ್ನಪ್ಪ ಮಾತನಾಡಿ ಸರ್ವರಿಗೂ ವಂದಿಸಿದರು.









