
ಮಡಿಕೇರಿ ಫೆ.25 NEWS DESK : ನಗರದ ಫೀ.ಮಾ.ಕಾರ್ಯಪ್ಪ ವೃತ್ತದ ಬಳಿಯಲ್ಲಿರುವ ‘ಅಂಬೇಡ್ಕರ್ ಭವನ’ಕ್ಕೆ ಸಂಬಂಧಿಸಿದಂತೆ ಉದ್ಭವಿಸಿರುವ ಗೊಂದಲವನ್ನು ಮುಂದಿನ ಮೂರು ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಬಗೆಹರಿಸಬೇಕು, ಇಲ್ಲವಾದಲ್ಲಿ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕರು ಹಾಗೂ ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷರಾದ ಹೆಚ್.ಎಲ್.ದಿವಾಕರ್, ಅಂಬೇರ್ಕರ್ ಭವನಕ್ಕೆ ಜಾಗವನ್ನು ಪಡೆದುಕೊಳ್ಳುವ ಹಾಗೂ ಭವನ ನಿರ್ಮಾಣ ಹಂತದಲ್ಲಿ ರಚಿಸಲಾಗಿದ್ದ ಬಿ.ಆರ್.ಅಂಬೇಡ್ಕರ್ ಭವನ ಸಮಿತಿಯಲ್ಲಿ ಜಿಲ್ಲೆಯ ಎಲ್ಲಾ ಭಾಗಗಳ ದಲಿತ ಪ್ರಮುಖರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಗಿತ್ತು. ಆ ನಂತರ ಸಮಿತಿಯ ಅಧ್ಯಕ್ಷರ ಬದಲಾವಣೆಯೊಂದಿಗೆ ಸಮಿತಿಯಲ್ಲಿದ್ದ ಸದಸ್ಯರುಗಳನ್ನು ತೆಗೆಯುತ್ತಾ ಬಂದಿದ್ದು, ಪ್ರಸ್ತುತ ಕೇವಲ 12 ಸದಸ್ಯರು ಮಾತ್ರ ಇದ್ದಾರೆ ಎಂದು ತಿಳಿಸಿದರು. ಭವನ ನಿಮಾಣದ ಸಂದರ್ಭ ಅದಕ್ಕಾಗಿ ಜನಪ್ರತಿನಿಧಿಗಳ ಹಾಗೂ ನಗರಸಭೆಯ ಅನುದಾನವನ್ನು ವಿನಿಯೋಗಿಸಲಾಗಿದೆ. ದಲಿತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಭವನ ಮೀಸಲಾಗಿದೆ. ಆದರೆ ಪ್ರಸ್ತುತ ಅಂಬೇಡ್ಕರ್ ಭವನದ ಆಡಳಿತ ಸಮರ್ಪಕವಾಗಿ ನಡೆಯದ ಕಾರಣ ಅಂಬೇಡ್ಕರ್ ಭವನ ಸಮಿತಿಯನ್ನು ಹೋರಾಟ ಸಮಿತಿಯ ಮುಖಂಡರೆಲ್ಲ ಚರ್ಚಿಸಿ ವಿಸರ್ಜಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಮೂರು ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ತಿಳಿಸಿದರು. ಅಂಬೇಡ್ಕರ್ ಭವನ ಉಳಿಸಿ ಹೋರಾಟ ಸಮಿತಿಯ ಉಪಾಧ್ಯಕ್ಷ ಟಿ.ಎನ್.ಗೋವಿಂದಪ್ಪ ಅವರು ಮಾತನಾಡಿ, ಅಂಬೇಡ್ಕರ್ ಭವನ ಯಾವುದೇ ಒಬ್ಬರ ಸ್ವತ್ತಲ್ಲ, ಪ್ರಸ್ತುತ ಸೃಷ್ಟಿಯಾಗಿರುವ ಗೊಂದಲ ಸೌಹಾರ್ದಯುತವಾಗಿ ಬಗೆಹರಿಯುವ ಮೂಲಕ ಅಂಬೇಡ್ಕರ್ ಭವನದ ಸೌಲಭ್ಯ ಎಲ್ಲರಿಗೂ ದೊರಕುವಂತಾಗಬೇಕೆಂದರು. ಸಮಿತಿಯ ಪ್ರಮುಖ ದೀಪಕ್ ಮಾತನಾಡಿ, ಸಮಸ್ಯೆಯನ್ನು ಸಂಧಾನದ ಮೂಲಕ ಬಗೆಹರಿಸುವ ದಸಂಸ ಮುಖಂಡರ ಪ್ರಯತ್ನಗಳಿಗೆ ಸೂಕ್ತ ಸ್ಪಂದನ ದೊರಕದ ಹಿನ್ನೆಲೆ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಹೆಚ್.ಎಂ.ಸೋಮಪ್ಪ, ಗಾಯತ್ರಿ ನರಸಿಂಹನ್ ಹಾಗೂ ಹೆಚ್.ಕೆ.ಪ್ರೇಮಾ ಉಪಸ್ಥಿತರಿದ್ದರು.









