
ಕುಶಾಲನಗರ ಫೆ.28 NEWS DESK : ಗ್ಯಾರಂಟಿ ಯೋಜನೆಗಳಿಂದ ದಿವಾಳಿಯಾಗಿರುವ ರಾಜ್ಯ ಸರ್ಕಾರ ಈಗ ಶಿಕ್ಷಣ ಕ್ಷೇತ್ರವನ್ನು ಹೊಸಕಿ ಹಾಕಲು ಮುಂದಾಗಿದ್ದು, ಹೊಸದಾಗಿ ಸ್ಥಾಪಿಸಲಾಗಿರುವ ಹತ್ತು ವಿಶ್ವವಿದ್ಯಾಲಯಗಳ ಪೈಕಿ ಒಂಬತ್ತನ್ನು ಮುಚ್ಚಲು ನಿರ್ಧರಿಸಿರುವುದು ಸರಿಯಲ್ಲ. ನಮ್ಮ ಕೊಡಗು ವಿಶ್ವವಿದ್ಯಾಲಯವನ್ನು ಮುಚ್ಚಲು ನಿರ್ಧರಿಸಿವುದನ್ನು ಖಂಡಿಸಿ ಕುಶಾಲನಗರದಲ್ಲಿ ಪಾದಯಾತ್ರೆ ನಡೆಸಲಾಗಿದೆ. ಈ ನಿರ್ಧರ ಹಿಂತೆಗೆದುಕೊಳ್ಳುವವರೆಗೂ ನಮ್ಮ ದನಿಯನ್ನು ಗಟ್ಟಿಗೊಳಿಸುತ್ತೇವೆ ಎಂದು ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ವಿಶ್ವವಿದ್ಯಾಲಯದಿಂದ ಕುಶಾಲನಗರದವರೆಗೂ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಸಂಸದ ಯದುವೀರ್ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆ ಖಂಡನೀಯ. ಇಂಥ ನಿರ್ಧಾರಗಳನ್ನು ಕೈಗೊಂಡಿರುವ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕತೆ ಇಲ್ಲ. ಆಡಳಿತ ನಡೆಸಲು ಆಗದಿದ್ದರೆ ಕೆಳಗಿಳಿಯಲಿ ಎಂದು ಸಂಸದ ಯದುವೀರ್ ಗುಡುಗಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ ಎಂದು ಜನರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ, ಅತ್ತ ಫಲಾನುಭವಿಗಳಿಗೆ ಹಣ ನೀಡುತ್ತಿಲ್ಲ, ಇತ್ತ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿಲ್ಲ. ಜನರಿಗೆ ತೀವ್ರ ತೊಂದರೆ ಕೊಡುತ್ತಿದೆ ಎಂದು ಸಂಸದರು ಆರೋಪಿಸಿದರು. ಯುವ ಸಮುದಾಯದಲ್ಲಿ ಜ್ಞಾನ ಜ್ಯೋತಿ ಬೆಳಗುವ, ದೇವಾಲಯದ ಸ್ವರೂಪದಂತಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಿರ್ಧರಿಸಿರುವುದು ಅತ್ಯಂತ ದಡ್ಡತನದ ನಿರ್ಧಾರ. ವಿದ್ಯೆ ನೀಡದಿದ್ದರೆ ಯುವ ಸಮುದಾಯದ ಭವಿಷ್ಯ ರೂಪಿಸುವುದು ಹೇಗೆ. ಕಿಂಚಿತ್ತಾದರೂ ನೈತಿಕತೆ ಇದ್ದರೆ ಸರ್ಕಾರವನ್ನು ಮುನ್ನಡೆಸುತ್ತಿರುವ ನಾಯಕರು ತಮ್ಮ ನಿರ್ಧಾರ ಹಿಂಪಡೆಯಲಿ ಇಲ್ಲವಾದರೆ ಅಧಿಕಾರದ ಕುರ್ಚಿಯಿಂದ ಕೆಳಗಳಿಯಲಿ ಎಂದು ಯದುವೀರ್ ಕುಟುಕಿದರು. ನಮ್ಮ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಈ ಪಾದಯಾತ್ರೆಯಲ್ಲಿ, ನಮ್ಮ ನಾಯಕರಾದ ಅಪ್ಪಚ್ಚು ರಂಜನ್, ವಿವಿಧ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು ಪಾಲ್ಗೊಂಡು, ಸರ್ಕಾರದ ನಿರ್ಧಾರದ ವಿರುದ್ಧ ದನಿ ಎತ್ತಿದ್ದಾರೆ. ವಿವಿ ಬಂದ್ ಮಾಡುವ ನಿರ್ಧಾರವನ್ನು ಸರ್ಕಾರ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಸಂಸದ ಯದುವೀರ್ ಸ್ಪಷ್ಟಪಡಿಸಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಈ ಉರಿ ಬಿಸಿಲಿನಲ್ಲೂ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಬಲ ಪ್ರದರ್ಶನ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕಾರ್ಯಕರ್ತರ ಹೋರಾಟ ಶ್ಲಾಘನೀಯ. ನೀವು ಸಲ್ಲಿಸಿರುವ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸುತ್ತೇನೆ ಎಂದು ಸಂಸದ ಯದುವೀರ್ ತಿಳಿಸಿದರು. ಸಂಸತ್ತಿನಲ್ಲಿ ಸೂಕ್ತ ಸಮಯ ಬಳಸಿಕೊಂಡು ಈ ವಿಷಯವನ್ನು ಪ್ರಸ್ತಾಪಿಸಿ ವಿಶ್ವವಿದ್ಯಾಲಯ ಉಳಿಸುವ ಕಾರ್ಯಕ್ಕೆ ಕೈ ಜೋಡಿಸುತ್ತೇನೆ. ವಿದ್ಯಾರ್ಥಿಗಳ ಭವಿಷ್ಯವನ್ನು ಸುಂದರವಾಗಿ ರೂಪಿಸುವುದಕ್ಕೆ ಆದ್ಯತೆ ನೀಡುತ್ತೇನೆ ಎಂದು ಸಂಸದರು ವಿವರಿಸಿದರು. ಸ್ಥಳೀಯ ಶಾಸಕರು ವಿಧಾನಸಭೆಯಲ್ಲಿ ಈ ವಿಷಯದ ಕುರಿತು ದನಿ ಎತ್ತಲಿ ಎಂದು ಒಡೆಯರ್ ಆಗ್ರಹಿಸಿದರು. ಆದರ್ಶಪೂರ್ಣ ಸಮಾಜ ನಿರ್ಮಾಣ ಮಾಡಲು ಅನ್ನ, ಅಕ್ಷರ, ಆರೋಗ್ಯ ಮುಖ್ಯ. ಆದರೆ ಕಾಂಗ್ರೆಸ್ ಸರ್ಕಾರದ ಅಸಮರ್ಥ ಆಡಳಿತದಿಂದ ದಿವಾಳಿಯಾಗಿದ್ದು, ಎಲ್ಲ ಕ್ಷೇತ್ರಕ್ಕೂ ತೊಂದರೆಯಾಗುತ್ತದೆ. ಬೆಲೆ ಏರಿಕೆಯಿಂದ ಜೀವನ ದುಸ್ತರವಾಗಿದೆ. ಪ್ರಮುಖವಾಗಿ ಅನುದಾನ ಕೊರತೆಯಿಂದ ವಿವಿಗಳನ್ನು ಮುಚ್ಚಲು ಮುಂದಾಗಿರುವುದು ಅಕ್ಷಮ್ಯ. ಇದು ಸರ್ಕಾರದ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಸಂಸದರು ಗುಡುಗಿದರು. ರಾಜ್ಯದ ಒಂಬತ್ತು ವಿವಿಗಳನ್ನು ಮುಚ್ಚಲು ನಿರ್ಧರಿಸಿರುವುದು ಸರಿಯಲ್ಲ. ಇದು ರಾಜಕೀಯದ ಹೋರಾಟವಲ್ಲ. ಶಿಕ್ಷಣ ಕ್ಷೇತ್ರ ಉಳಿಸಲು ನಡೆಸುತ್ತಿರುವ ಹೋರಾಟ. ಇದಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕಾಗಿದೆ. ವಿದ್ಯಾರ್ಥಿಗಳ ಪರವಾಗಿ ನಾವು ಜನಪ್ರತಿನಿಧಿಗಳು ಒಗ್ಗೂಡಿ ಪರಿಹಾರ ಕೊಡಿಸಬೇಕಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಮುಚ್ಚಲು ನಿರ್ಧರಿಸಿರುವ ವಿವಿಗಳು :: ಹಾಸನ ವಿಶ್ವವಿದ್ಯಾಲಯ, ಚಾಮರಾಜನಗರ ವಿಶ್ವವಿದ್ಯಾಲಯ, ಹಾವೇರಿ ವಿಶ್ವವಿದ್ಯಾಲಯ, ಕೊಡಗು ವಿಶ್ವವಿದ್ಯಾಲಯ, ಕೊಪ್ಪಳ ವಿಶ್ವವಿದ್ಯಾಲಯ, ಬಾಗಲಕೋಟ ವಿಶ್ವವಿದ್ಯಾಲಯ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ ನೃಪತುಂಗ ವಿಶ್ವವಿದ್ಯಾಲಯ











