
ಮಡಿಕೇರಿ ಮಾ.1 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಮಾ.7 ರಂದು ಮಂಡಿಸುವ ಬಜೆಟ್ ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬಲ ತುಂಬಬೇಕು ಹಾಗೂ ಕೊಡಗಿನ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕೊಡಗು ಘಟಕ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ‘ಕೊಡಗು ಜಿಲ್ಲೆಯ ಜನತಾ ಬಜೆಟ್-2025’ ಎಂಬ ಎಸ್ಡಿಪಿಐಯ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ‘ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್-2025’ ಎನ್ನುವ ಬೇಡಿಕೆಗಳ ಕೈಪಿಡಿಯನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಬಿಡುಗಡೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನಕ್ಕೆ ಪಕ್ಷ ಮುಂದಾಗಿದೆ ಎಂದರು.
:: ಕೊಡಗು ವಿವಿ ಉಳಿಸಿ :: ಕೊಡಗು ವಿಶ್ವ ವಿದ್ಯಾಲಯ ಸೇರಿದಂತೆ ರಾಜ್ಯದ ಒಟ್ಟು 9 ನೂತನ ವಿವಿಗಳನ್ನು ಮುಚ್ಚುವ ದೂರದೃಷ್ಟಿ ರಹಿತವಾದ ಚಿಂತನೆಯನ್ನು ಸರ್ಕಾರ ಮಾಡಿದೆ. ಶಿಕ್ಷಣ ಕ್ಷೇತ್ರದ ಪ್ರಗತಿಯ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದ ಸರ್ಕಾರ ವಿವಿಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಕೊಡಗು ವಿವಿ ರದ್ದುಗೊಳಿಸುವ ಸಚಿವ ಸಂಪುಟ ಸಮಿತಿಯ ಪ್ರಸ್ತಾಪವನ್ನು ಕೈಬಿಡಬೇಕೆಂದು ಆಗ್ರಹಿಸಿದರು.
:: ಕಾನೂನು ಕಾಲೇಜು ಬೇಕು :: ಕೊಡಗಿನ ಆಸಕ್ತ ವಿದ್ಯಾರ್ಥಿಗಳು ಕಾನೂನಿನ ಶಿಕ್ಷಣವನ್ನು ಪಡೆಯುವ ಸಲುವಾಗಿ ದೂರದೂರುಗಳನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ ಜಿಲ್ಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಜೆಟ್ನಲ್ಲಿ ಕೊಡಗಿಗೊಂದು ಕಾನೂನು ಕಾಲೇಜು ಘೋಷಿಸಬೇಕು. ಐಪಿಎಸ್, ಐಎಎಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು. ಈ ಹಿಂದಿನ ಬಜೆಟ್ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ.4 ಹಣಕಾಸನ್ನು ಮೀಸಲಿಡಲಾಗಿತ್ತು, ಪ್ರಸ್ತುತ ಶೇ.15 ರಷ್ಟು ಹಣವನ್ನು ಒದಗಿಸಬೇಕು. ಮಡಿಕೇರಿಯಲ್ಲಿ ನೂತನ ಎಂಆರ್ಐ ಸ್ಕ್ಯಾನಿಂಗ್ ಅಳವಡಿಸಿದ್ದರು, ರೋಗಿಗಳು ಸೌಲಭ್ಯಕ್ಕಾಗಿ ಮೂರು ನಾಲ್ಕು ವಾರಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ಸಮಸ್ಯೆಗೆ ಪರಿಹಾರ ಒದಗಿಸುವ ಅಗತ್ಯವಿದೆ. ಕೊಡಗು ಜಿಲ್ಲೆಯಲ್ಲಿ ಕ್ಯಾನ್ಸರ್ ಸೆಂಟರ್ ತೆರೆಯಲು ಬಜೆಟ್ನಲ್ಲಿ ಅಗತ್ಯ ಅನುದಾನ ಒದಗಿಸಬೇಕು. ಇತ್ತೀಚಿನ ದಿನಗಳಲ್ಲಿ ನವಜಾತ ಶಿಶುಗಳ ಮರಣ ಪ್ರಕರಣಗಳು ರಾಜ್ಯದ ವಿವಿಧೆಡೆ ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ‘ಶಿಶು ಪಾಲನಾ ಕೇಂದ್ರ’ವನ್ನು ಕೊಡಗಿನಲ್ಲಿ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿಗೆ ದೂರದ ಬೆಂಗಳೂರು ಮೊದಲಾದ ನಗರ ಪ್ರದೇಶಗಳನ್ನು ಕೊಡಗಿನ ಜನತೆ ಅವಲಂಬಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೋಗಗಳಿಗೂ ಸೂಕ್ತ ಚಿಕಿತ್ಸೆ ದೊರಕುವಂತಹ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಜಿಲ್ಲೆಗೊಂದು ಏರ್ ಅಂಬ್ಯುಲೆನ್ಸ್ ಕಲ್ಪಿಸಬೇಕೆಂದು ಅಮಿನ್ ಮೊಹಿಸಿನ್ ಆಗ್ರಹಿಸಿದರು.
:: ಭೂ ಗುತ್ತಿಗೆ ರದ್ದು ಮಾಡಿ :: ಜಿಲ್ಲೆಯ ಭೂ ಮಾಲೀಕರು ಒತ್ತುವರಿ ಮಾಡಿದ ಭೂಮಿಯನ್ನು, ಭೂ ಗುತ್ತಿಗೆಯ ಆಧಾರದಲ್ಲಿ ನೀಡುವ ಆದೇಶವನ್ನು ರದ್ದು ಪಡಿಸಿ, ಆ ಭೂಮಿಯನ್ನು ಭೂ ರಹಿತರಿಗೆ ವಿತರಿಸಬೇಕು. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಈ ಹಿಂದಿನಿಂದಲು ಕೊಡಗಿಗೆ ರೈಲ್ವೆ ಸಂಪರ್ಕದ ಪ್ರಸ್ತಾಪಗಳಾಗುತ್ತಿದ್ದರು ಅವು ಕಾರ್ಯಗತವಾಗಿಲ್ಲ. ಈ ಹಿನ್ನೆಲೆ ರೈಲ್ವೆ ಸಂಪರ್ಕಕ್ಕೆ ಒತ್ತು ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು. ಕಾಡಾನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ, ಮುಂಗಾರಿನ ಅನಾಹುತಗಳ ತಡೆಗೆ ನದಿ ತೊರೆಗಳ ಹೂಳೆತ್ತಲು ಕ್ರಮ, ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೆ 5 ಸಾವಿರ ಕೊಟಿ ರೂ.ಗಳನ್ನು ಮೀಸಲಿಡಬೇಕು. ಜಿಲ್ಲೆಯ ತಾಲ್ಲೂಕು ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು, ಮಸೀದಿಯ ಇಮಾಮ್, ಮೋಝಿನ್ಗಳ ಮಾಸಾಶನ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
:: ಸಂಸತ್-ಮೂರು ವಿಧಾನ ಸಭಾ ಕ್ಷೇತ್ರ ಒದಗಿಸಿ :: ಕೊಡಗಿಗೆ ಪ್ರತ್ಯೇಕವಾದ ಸಂಸತ್ ಸ್ಥಾನವನ್ನು ಒದಗಿಸಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಮತ್ತು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಈ ಹಿಂದಿನಂತೆ ಮೂರು ವಿಧಾನಸಭಾ ಕ್ಷೇತ್ರಗಳನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಎಸ್ಡಿಪಿಐ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ, ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ, ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಮೇರಿ ವೇಗಸ್ ಉಪಸ್ಥಿತರಿದ್ದರು.









