
ಮಡಿಕೇರಿ ಮಾ.3 NEWS DESK : ಕೃತಕ ಬುದ್ಧಿ ಮತ್ತೆ ಅಥವಾ (ಎಐ) ತಂತ್ರಜ್ಞಾನದ ಬಗ್ಗೆ ಸೂಕ್ತ ಅರಿವು ಬೆಳೆಸಿಕೊಳ್ಳುವುದು ಅತೀ ಅವಶ್ಯಕ ಎಂದು ಸಿಐಟಿ ಕಾಲೇಜಿನ ಸಹ ಪ್ರಾಧ್ಯಾಪಕ ರಾಮಕೃಷ್ಣ ತಿಳಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಹಾಗೂ ಕೊಡಗು ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಗೋಣಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಫೆಬ್ರವರಿ 28 ರಂದು ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಭಾರತದ ಶ್ರೇಷ್ಠ ವಿಜ್ಞಾನಿ ಡಾ. ಸಿ.ವಿ.ರಾಮನ್ ಅವರು ರಾಮನ್ ಪರಿಣಾಮದ ಆವಿಷ್ಕಾರದ ಸ್ಮರಣಾರ್ಥ ಮತ್ತು ಸಾರ್ವಜನಿಕರಲ್ಲಿ ವಿಜ್ಞಾನದ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. ಪ್ರಸ್ತುತ ನಾವು ಕೃತಕ ಬುದ್ಧಿ ಮತ್ತೆ ಅಥವಾ (ಎಐ) ತಂತ್ರಜ್ಞಾನದ ಕಾಲಘಟ್ಟದಲ್ಲಿದ್ದು, ಈ ಆವಿಷ್ಕಾರಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಬಾಲ್ಯದಿಂದಲೇ ವಿಜ್ಞಾನದ ಅರಿವು ನಮ್ಮಲ್ಲಿ ಜಾಗೃತವಾಗಿರಬೇಕು. ಎಐ ತಂತ್ರಜ್ಞಾನವನ್ನು ನಕಾರಾತ್ಮಕ ಕಾರ್ಯಗಳಿಗೆ ಬಳಸಿಕೊಳ್ಳಬಾರುದು. ಬದಲಿಗೆ ರಾಷ್ಟ್ರದ ಮತ್ತು ಸಮಾಜದ ಹಿತಕ್ಕೆ ಪೂರಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಸಿಐಟಿ ಕಾಲೇಜಿನ ಮತ್ತೊಬ್ಬ ಸಹ ಪ್ರಾಧ್ಯಾಪಕರಾದ ಡಾ. ಕಿಶನ್ ಕರುಂಬಯ್ಯ ಅವರು ಮಾತನಾಡಿ ವೈದ್ಯಕೀಯ ಕ್ಷೇತ್ರದಲ್ಲಿ ರೋಬೊಟಿಕ್ ಶಸ್ತ್ರಚಿಕಿತ್ಸೆಯಂತಹ ಆವಿಷ್ಕಾರಗಳು ನಡೆಯುತ್ತಿದೆ. ಇದಲ್ಲದೆ ಚಾಲಕ ರಹಿತ ಕಾರುಗಳನ್ನೂ ಸಹ ನಾವು ಕಾಣುತ್ತಿದ್ದು, ಪ್ರತಿ ದಿನವೂ ಹಲವಾರು ನೂತನ ವಿದ್ಯಮಾನಗಳು ನಮ್ಮ ನಡುವೆ ನಡೆಯುತ್ತಿದೆ. ಈ ಬಗ್ಗೆ ಅರಿವು ಹೊಂದಿರಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಪ್ರಂಬಂಧ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ಗೋಣಿಕೊಪ್ಪ ಪ್ರೌಢ ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಸೌಮ್ಯ ಪ್ರಥಮ, ಕೀರ್ತನಾ ದ್ವಿತೀಯ ಮತ್ತು ನಿಶಾಂತ್ ತೃತೀಯ ಬಹುಮಾನ ಪಡೆದರು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ವಿದ್ಯಾರ್ಥಿಗಳಿಂದ ವಿಜ್ಞಾನದ ಪ್ರಯೋಗವನ್ನು ಮಾಡಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ಬಳಿಕ ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕೊಡಗು ಜಿಲ್ಲಾ ಪಂಚಾಯತ್ ಎನ್.ಆರ್.ಡಿ.ಎಂ.ಎಸ್ ವಿಭಾಗದ ಪ್ರಾಜೆಕ್ಟ್ ಅಸೋಸಿಯೆಟ್ ಇಂಚರ, ಶಾಲಾ ಮುಖ್ಯೋಪಾಧ್ಯಾಯ ಮಹೇಶ್ ಹಾಜರಿದ್ದರು.









