
ಮಡಿಕೇರಿ ಮಾ.3 NEWS DESK : 2017-18, 2018-19 ಹಾಗೂ 2019-20ರ ತೆರಿಗೆ ಬಾಕಿ ಪಾವತಿಸಿ ದಂಡ ಹಾಗೂ ಬಡ್ಡಿಯ ಮನ್ನಾ ಮಾಡುವ ಯೋಜನೆಯ ಉಪಯೋಗ ಪಡೆದುಕೊಳ್ಳುವಂತೆ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಪಿ.ಪರಮೇಶ್ವರ ಗೌಡ ಜಿಎಸ್ ಟಿ ನೊಂದಾಯಿತರಿಗೆ ಕರೆ ನೀಡಿದರು. ಮೈಸೂರು ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು (ಆಡಳಿತ) ನೇತೃತ್ವದಲ್ಲಿ ಕೊಡಗು ಜಿಲ್ಲಾ ಕೈಗಾರಿಕಾ ಮಂಡಳಿ, ಲೆಕ್ಕಪರಿಶೋಧಕರ ಸಂಘ ಹಾಗೂ ತೆರಿಗೆ ಸಲಹೆಗಾರರ ಸಹಕಾರದೊಂದಿಗೆ ಮಡಿಕೇರಿ ನಗರದ ಹೋಟೆಲ್ ಲೀ ಕೂರ್ಗ್ ಸಭಾಂಗಣದಲ್ಲಿ “ಜಿಎಸ್ಟಿ ಆಮ್ನೆಸ್ಟಿ ಯೋಜನೆ” ಕುರಿತು ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು. ಈ ಯೋಜನೆಯು ಜಿಎಸ್ಟಿ ಕಾಯ್ದೆಯ ಸೆಕ್ಷನ್ 73ರಡಿ 2017-18 ರಿಂದ 2019-20 ರ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶಗಳಿಗೆ, 2017-18 ರಿಂದ 2020-21ರವರೆಗೆ ಸೆಕ್ಷನ್ 16(4)ರಡಿ ನಿಗದಿತ ಅವಧಿಯ ನಂತರ ಪಡೆದುಕೊಂಡಿರುವ ಹೂಡುವಳಿ ತೆರಿಗೆ ಪ್ರಕರಣಗಳಿಗೆ ಅನ್ವಯಿಸುವುದಾಗಿ ತಿಳಿಸಿದರು. ವಾಣಿಜ್ಯ ತೆರಿಗೆ ಅಧಿಕಾರಿ ನಾಗೇಂದ್ರ ಮಾತನಾಡಿ, ಜಿಎಸ್ಟಿ ಕಾಯ್ದೆಯ ಅಡಿಯಲ್ಲಿ ಜಾರಿಗೆ ತರಲಾಗಿರುವ ಜಿಎಸ್ ಟಿ ಆಮ್ನೆಸ್ಟಿ ಯೋಜನೆಯ ಬಗ್ಗೆ ಸಂಪೂರ್ಣ ವಿವರಗಳನ್ನು ಒಳಗೊಂಡ ಪ್ರಾತ್ಯಕ್ಷಿಕೆಯ ಮೂಲಕ ವಿವರಣೆ ನೀಡಿದರು. ಸಹಾಯಕ ಆಯುಕ್ತ ಶ್ರೀಕಂಠಮೂರ್ತಿ ಮಾತನಾಡಿ ಜಿಎಸ್ ಟಿ ಆಮ್ನೆಸ್ಟಿ ಯೋಜನೆಯಡಿ ಇರುವ ಉಪಯೋಗಗಳ ಬಗ್ಗೆ ವಿವರವಾಗಿ ಚರ್ಚಿಸಿದರು ಹಾಗೂ ಯಾವುದೇ ಸಂದೇಹಗಳಿದ್ದಲ್ಲಿ ಮಡಿಕೇರಿಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಛೇರಿ, ಉಪ ಸರಕು ಮತ್ತು ಸೇವಾ ತೆರಿಗೆ ಕಛೇರಿ, ವಿರಾಜಪೇಟೆ ಅಥವಾ ಮೈಸೂರು ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿಯಲ್ಲಿ ಸಂಪರ್ಕಿಸಬಹುದೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಎಂ.ವಿ.ಮಹೇಶ್ , ಜಗದೀಶ, ನವೀನ್ ರಾವ್ ಹಾಗೂ ತೆರಿಗೆ ಇಲಾಖೆಯ ಸಿಬ್ಬಂದಿಗಳಾದ ಎಂ.ಕೆ.ಧನರಾಜ್, ಚೆಂಗಪ್ಪ, ನೀಲಕಂಠ ಹಾಗೂ ಇತರ ಸಿಬ್ಬಂದಿಗಳು, ಚಾರ್ಟರ್ಡ್ ಅಕೌಂಟೆಂಟ್ ಅಮರ್ ಶರ್ಮಾ, ಸುದರ್ಶನ ಜೋಷಿ, ವಾಣಿಜ್ಯೋದ್ಯಮಿಗಳ ಪರವಾಗಿ ನವೀನ್ ಅಂಬೇಕಲ್, ಮೋಂತಿ ಗಣೇಶ್ ಹಾಗೂ ಮಡಿಕೇರಿ ನಗರ ಜಿಲ್ಲೆಯ ವಿವಿಧ ತಾಲ್ಲೂಕಿನ ಲೆಕ್ಕಪರಿಶೋಧಕರುಗಳು ಭಾಗವಹಿಸಿ ಯೋಜನೆಯ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿದರು.









