
ಮಡಿಕೇರಿ ಮಾ.3 NEWS DESK : ಕೊಡಗು ವಿವಿ ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಗುಡ್ಡೆಹೊಸೂರು ಗ್ರಾ.ಪಂ ಆಡಳಿತ ಮಂಡಳಿ ಖಂಡಿಸಿತು. ಕೊಡಗು ವಿವಿ ಬಡ ವಿದ್ಯಾರ್ಥಿಗಳ ಪಾಲಿನ ಜ್ಞಾನದೇಗುಲವಾಗಿದ್ದು, ಯಾವ ಕಾರಣಕ್ಕೂ ಸರ್ಕಾರ ಮುಚ್ಚಲು ಮುಂದಾಗಬಾರದು. ಕೊಡಗು ವಿವಿ ಯಿಂದ ಜಿಲ್ಲೆಯ ಬಡ ಮಕ್ಕಳು ಮೈಸೂರು, ಮಂಗಳೂರು ವಿವಿ ಗಳಿಗೆ ತೆರಳುವ ಪ್ರಯಾಸದ ಪ್ರಯಾಣ ತಪ್ಪಿದೆ. ಊರ ಬಾಗಿಲಲ್ಲಿ ವಿವಿ ಇರುವಾಗ ಅಪಾರ ಮಂದಿ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ ಎಂದು ಸ್ನಾತಕೋತ್ತರ ಪದವೀಧರೆ ಹಾಗೂ ಗ್ರಾಪಂ ಸದಸ್ಯೆ ವೈ.ಬಿ.ಉಮಾ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸದಸ್ಯರಾದ ಶಿವಪ್ಪ, ಸೌಮ್ಯ, ನಾರಾಯಣ, ಪ್ರದೀಪ್, ಚಿದಾನಂದ, ಸೇರಿದಂತೆ ಇಡೀ ಆಡಳಿತ ಮಂಡಳಿ ಮೇಜು ತಟ್ಟಿ ಸರ್ಕಾರದ ಕ್ರಮವನ್ನು ಖಂಡಿಸಿದರು. ಸಭಾಧ್ಯಕ್ಷ ಪ್ರವೀಣ್ ಕುಮಾರ್ ಈ ಬಗ್ಗೆ ಸರ್ಕಾರಕ್ಕೆ ನಿಯೋಗ ತೆರಳಲು ಸಿದ್ಧ ಎಂದರು.








