
ಮಡಿಕೇರಿ ಮಾ.8 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಜನರ ಹಿತ ಕಾಯುವ ದಾಖಲೆಯ ಬಜೆಟ್ ನ್ನು ಮಂಡಿಸಿದ್ದು, ಹಿಂದೆಂದೂ ಕಂಡರಿಯದಷ್ಟು ಲಾಭ ಕೊಡಗು ಜಿಲ್ಲೆಗೆ ಆಗಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎನ್.ರವೂಫ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿರೋಧ ಪಕ್ಷಗಳು ಬಜೆಟ್ ನ್ನು ವಿರೋಧಿಸಬೇಕೆಂದೇ ವಿರೋಧಿಸುವುದು ಸರಿಯಲ್ಲ. ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರ ಪ್ರಯತ್ನದ ಫಲವಾಗಿ ಹಲವು ಉತ್ತಮ ಕಾರ್ಯಕ್ರಮಗಳನ್ನು ಕೊಡಗು ಜಿಲ್ಲೆಗೆ ನೀಡಲಾಗಿದೆ. ವಿರಾಜಪೇಟೆಯಲ್ಲಿ 400 ಹಾಸಿಗೆಗಳ ಆಸ್ಪತ್ರೆಯ ನಿರ್ಮಾಣ, ಕುಶಾಲನಗರ ಆಸ್ಪತ್ರೆಯ ಅಭಿವೃದ್ಧಿ, ಮಡಿಕೇರಿ- ದೋಣಿಗಲ್ ನಡುವೆ ಅಂತರರಾಷ್ಟ್ರೀಯ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರು, ಬುಡಕಟ್ಟು ಜನಾಂಗದವರಿಗೆ ಮೂಲಸೌಕರ್ಯಗಳನ್ನು ಒದಗಿಸಲು 200 ಕೋಟಿ ರೂ. ಮೀಸಲಿಟ್ಟಿರುವುದು, ಮಳೆಹಾನಿಯ ರಸ್ತೆ ಮತ್ತು ಸೇತುವೆಗಳನ್ನು 20 ಕೋಟಿ ರೂ. ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲು ಕ್ರಮ ಕೈಗೊಂಡಿರುವುದು, ಕೂಡಿಗೆ ಕ್ರೀಡಾ ಶಾಲೆಯ ಉನ್ನತೀಕರಣಕ್ಕಾಗಿ 3 ಕೋಟಿ ರೂ. ಒದಗಿಸಿರುವುದು, ಮಾನವ-ಆನೆ ಸಂಘರ್ಷವನ್ನು ತಡೆಗಟ್ಟಲು 150 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿಗಳಿಗಾಗಿ 2025-26ನೇ ಸಾಲಿನಲ್ಲಿ 60 ಕೋಟಿ ರೂ. ಮೀಸಲಿರಿಸಿರುವುದು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಹಣ ಘೋಷಿಸಿರುವುದರಿಂದ ಕೊಡಗು ಜಿಲ್ಲೆಯ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆತಂತ್ತಾಗಿದೆ. ಈ ಹಿಂದಿನ ಎಲ್ಲಾ ಬಜೆಟ್ ಗಳಿಗಿಂತ ಪ್ರಸ್ತುತ ವರ್ಷ ಮಂಡಿಸಿರುವ ಬಜೆಟ್ ವಿಭಿನ್ನವಾಗಿದ್ದು, ಮುಖ್ಯಮಂತ್ರಿಗಳು ಕೊಡಗು ಜಿಲ್ಲೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಜಿಲ್ಲೆಗೆ ಇಷ್ಟೊಂದು ದೊಡ್ಡ ಪ್ರಮಾಣದ ಲಾಭ ದೊರೆಯಲು ಶಾಸಕದ್ವಯರ ನಿರಂತರ ಪ್ರಯತ್ನದ ಫಲವೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
::: ಟೀಕೆ ಸರಿಯಲ್ಲ ::: ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸಬೇಕೆಂದು ವಿದ್ಯಾರ್ಥಿಗಳ ವಿದೇಶಿ ವಿದ್ಯಾರ್ಥಿ ವೇತನದ ಮಿತಿಯನ್ನು 20 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವ ಸರ್ಕಾರ ಪರಿಶಿಷ್ಟ ವಿದ್ಯಾರ್ಥಿಗಳ ಶೈಕ್ಷಣಿಕೆ ಪ್ರಗತಿಗೂ ಸಾಕಷ್ಟು ಅನುದಾನ ಒದಗಿಸಿದೆ. ಉರ್ದು ಶಾಲೆ, ಹಜ್ ಭವನ ಮತ್ತು ವಕ್ಫ್ ಖಬರಸ್ತಾನ್ ಗಳ ಅಭಿವೃದ್ಧಿ ಕುರಿತು ಬಜೆಟ್ ನಲ್ಲಿ ಕಾಳಜಿ ತೋರಿರುವುದು ಸ್ವಾಗತಾರ್ಹ. ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಅಲ್ಪಸಂಖ್ಯಾತರಿಗೆ ಮಾತ್ರ ದೊಡ್ಡ ಪ್ರಮಾಣದ ಅನುದಾನ ಮೀಸಲಿಟ್ಟಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುವುದು ಸರಿಯಲ್ಲ. ರಾಜ್ಯದ ಬಜೆಟ್ ಗಾತ್ರ 4ಲಕ್ಷ ಕೋಟಿ ರೂ.ಗಳ ಗಡಿ ದಾಟಿರುವುದು ಒಂದು ಹೊಸ ದಾಖಲೆಯಾಗಿದೆ. ಇಷ್ಟು ದೊಡ್ಡ ಗಾತ್ರದ ಬಜೆಟ್ ನಲ್ಲಿ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಎಲ್ಲಾ ಸಮುದಾಯಗಳ ಅಭ್ಯುದಯಕ್ಕಾಗಿ ಮೀಸಲಿಟ್ಟಿರುವ ಹಣ 4ಸಾವಿರ ಕೋಟಿ ರೂ. ಮಾತ್ರ. ಅನುದಾನ ಹಂಚಿಕೆಯಲ್ಲಿ ಸಮಾನತೆ ಎದ್ದು ಕಾಣುತ್ತಿದೆ, ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎಂದು ಪ್ರಧಾನಮಂತ್ರಿಗಳು ಹೇಳುವ ಮಾತನ್ನು ಒಪ್ಪಿಕೊಳ್ಳುವ ಬಿಜೆಪಿ ಮಂದಿ ಕರ್ನಾಟಕದ ವಿಚಾರದಲ್ಲಿ ಯಾಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಎಂ.ಎನ್.ರವೂಫ್ ಪ್ರಶ್ನಿಸಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ಪರಿಶಿಷ್ಟರು ಸೇರಿದಂತೆ ಎಲ್ಲಾ ಸಮುದಾಯದ ಜನರ ಹಿತಕಾಯುವ ಬಜೆಟ್ ಇದಾಗಿದ್ದು, ಈ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಒತ್ತಾಯಿಸಿದ್ದಾರೆ.









