
ವಿರಾಜಪೇಟೆ ಮಾ.11 NEWS DESK : ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಸಮಾಜ ಸೇವಕಿ ಹಾಗೂ ವಿರಾಜಪೇಟೆ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್ ಸಲಹೆ ನೀಡಿದರು. ಹೆಗ್ಗಳದಲ್ಲಿ ಏಳು ದಿನಗಳ ಕಾಲ ನಡೆದ ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳು ಆದರ್ಶ ಪುರುಷರತತ್ವ ಸಿದ್ಧಾಂತಗಳನ್ನು ಅನುಸರಿಸಬೇಕು. ನಮ್ಮ ಭವಿಷ್ಯ ದ ಅಭಿವೃದ್ಧಿ ನಮ್ಮಿಂದಲೇ ಆಗಿದೆ. ಪರಸ್ಪರ ಸ್ನೇಹ, ಸಹಕಾರವಿದ್ದಾಗ ಮಾತ್ರ ಸಮಾಜ ಸೇವೆಗೆ ಅರ್ಥ ಬರುತ್ತದೆ. ಸಮಾಜದ ಸೇವೆಯು ಪುಣ್ಯ ಕೆಲಸ ಮಾಡಿದಂತೆ ಎಂದ ಅವರು, ಗುರು ಹಿರಿಯರನ್ನು ಗೌರವಿಸಿ ಎಂದು ಕರೆ ಕೊಟ್ಟರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು, ಗ್ರಾಮದ ಸರ್ವ ಜನರ ಸಹಕಾರದಿಂದ ಶಿಬಿರವು ಯಶಸ್ವಿಯಾಗಿ ನಡೆದಿದೆ. ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತದನ್ನು ಜೀವನದಲ್ಲಿ ಅಳವಡಿಸುವುದರ ಮೂಲಕ ಶಿಸ್ತು ಬದ್ದ ಜೀವನವನ್ನು ನಡೆಸಿ ಎಂದು ಕರೆ ನೀಡಿದರು. ಸ್ಥಳೀಯರು ಹಾಗೂ ಭಾರತೀಯ ಭೂ ಸೇನೆಯ ನಿವೃತ ಕ್ಯಾಪ್ಟನ್ ಬಿ.ವಿ.ಭವಾನಿಶಂಕರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ದೃಢ ನಿರ್ಧಾರ ಕೈಗೊಳ್ಳಲು ಇಂತಹ ಶಿಬಿರಗಳು ಪ್ರಮುಖವಾಗಿದೆ. ವಿದ್ಯಾರ್ಥಿಗಳು ಶಿಸ್ತು ಹಾಗೂ ಪ್ರಾಮಾಣಿಕತೆ ಕಲಿಯಲು ಎನ್ ಎಸ್ ಎಸ್ ಉತ್ತಮ ವೇದಿಕಯಾಗಿದೆ ಎಂದರು. ಇಲ್ಲಿ ಕಲಿತದನ್ನು ಶ್ರದ್ಧೆಯಿಂದ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು. ಗೋಣಿಕೊಪ್ಪಲು ಕಾವೇರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಪಟ್ಟಡ ಪೂವಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜದ ಸೇವೆಯನ್ನು ಮಾಡಲು ಎನ್ ಎಸ್ ಎಸ್ ಉತ್ತಮ ಅವಕಾಶವನ್ನು ನೀಡುತ್ತದೆ. ಉತ್ತಮ ಆರೋಗ್ಯ, ತ್ಯಾಗದ ಮನೋಭಾವನೆ, ಮಾಡುವ ಕೆಲಸದಲ್ಲಿ ಗೌರವವಿದ್ದಲ್ಲಿ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ಸಂವಹನ ಕೌಶಲ್ಯ ಹಾಗೂ ವೃತ್ತಿ ಕೌಶಲ್ಯ ಗಳನ್ನು ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು. ಬೆಟೋಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಶಿಬಿರದಲ್ಲಿ ವಿದ್ಯಾರ್ಥಿಗಳು ಮಾಡಿದ ಶ್ರಮದಾನ, ಸ್ವಚ್ಛತಾ ಅಭಿಯಾನ, ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹೆಗ್ಗಳ ಸ. ಹಿ.ಪ್ರಾ. ಶಾಲೆ ಮುಖ್ಯ ಶಿಕ್ಷಕಿ ಹೇಮಲತಾ ಮಾತನಾಡಿ, ನಮ್ಮ ಶಾಲೆಯಲ್ಲಿ ಎನ್ ಎಸ್ ಎಸ್ ಶಿಬಿರ ನಡೆದಿರುವುದು ಸಂತಸ ತಂದಿದೆ. ಸ್ವಯಂ ಸೇವಾ ವಿದ್ಯಾರ್ಥಿಗಳ ಸಮಯಪಾಲನೆ, ಶಿಸ್ತು, ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ ಸಂಸ್ಥೆಯ ವತಿಯಿಂದ ಪ್ರತಿವರ್ಷವೂ ಎನ್ ಎಸ್ ಎಸ್ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು ಈ ವರ್ಷವೂ ಸಹ ಹೆಗ್ಗಳ ಸರ್ಕಾರಿ ಶಾಲೆಯಲ್ಲಿ ಶಿಬಿರವು ಯಶಸ್ವಿಯಾಗಿ ನಡೆದಿದೆ. ಇದರಲ್ಲಿ ನಮ್ಮ ವಿದ್ಯಾರ್ಥಿಗಳ ಶ್ರಮ ಅಡಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ರಾಜೇಶ್, ಉಪನ್ಯಾಸಕಿ ವಿಲೀನ, ಬೆಟೋಳಿ ಗ್ರಾಮ ಪಂಚಾಯತ್ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು, ಎಲ್ಲಾ ಸ್ವಯಂ ಸೇವಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿ ಗುಂಪುಗಳಿಗೆ ಅತಿಥಿಗಳು ಬಹುಮಾನವನ್ನು ನೀಡಿದರು. ನಿವೃತ್ತ ಕ್ಯಾಪ್ಟನ್ ಭವಾನಿಶಂಕರ್ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಾಮಿ ಜಗದಾತ್ಮಾನಂದಜೀ ಅವರ “ಬದುಕಲು ಕಲಿಯಿರಿ” ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಎನ್ ಎಸ್ ಎಸ್ ಘಟಕದ ಹಾಗೂ ತಂಡಗಳ ನಾಯಕರು ಶಿಬಿರದ ಅನುಭವವನ್ನು ವೇದಿಕೆಯಲ್ಲಿ ಹಂಚಿಕೊಂಡರು. ಈ ಸಂದರ್ಭ ನಿವೃತ ಕ್ಯಾಪ್ಟನ್ ಬಿ. ವಿ. ಭವಾನಿ ಶಂಕರ್, ಪೂಜಾ ಸಜೇಶ್, ಹೇಮಲತ ಹಾಗೂ ಬಿ.ಆರ್.ರಾಜೇಶ್ ಅವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಎನ್ ಎಸ್ ಎಸ್ ಅಧಿಕಾರಿ ಬಿ. ಎನ್. ಶಾಂತಿಭೂಷಣ್ ಪ್ರಾಸ್ತಾವಿಕ ನುಡಿ ಹಾಗೂ ಸ್ವಾಗತಿಸಿ, ವಿದ್ಯಾರ್ಥಿನಿ ನಿಶಿ ನಿರೂಪಿಸಿ, ವಿದ್ಯಾರ್ಥಿನಿ ಪ್ರಕೃತಿ ವಂದಿಸಿದರು.









