
ಕಣಿವೆ ಮೇ 16 NEWS DESK : ವಿದ್ಯಾರ್ಥಿಗಳು ಕ್ರೀಡೆಗೆ ತೋರುವ ಆಸಕ್ತಿಗಿಂತಲೂ ಮಿಗಿಲಾಗಿ ಗ್ರಂಥಾಲಯದಲ್ಲಿನ ಪುಸ್ತಕಗಳನ್ನು ಅಭ್ಯಸಿಸಲು ಹೆಚ್ಚು ಒತ್ತು ನೀಡಬೇಕೆಂದು ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಹೇಳಿದರು. ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕ್ರೀಡೆ, ಸಾಹಿತ್ಯ, ಸಾಂಸ್ಕ್ರತಿಕ ಚಟುವಟಿಕೆಗಳು ಕೂಡ ಮುಖ್ಯ. ಆದರೆ, ಇವೆಲ್ಲಕ್ಕಿಂತಲೂ ವಿದ್ಯಾರ್ಥಿ ಅವಧಿಯಲ್ಲಿ ತರಗತಿಗಳ ಪಠ್ಯದ ವ್ಯಾಸಾಂಗವೂ ಅಷ್ಟೇ ಮುಖ್ಯವಾದ ಅಂಶವಾಗಬೇಕು ಎಂದರು. ವಿವಿ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಹಾಗೂ ಸಾಂಸ್ಕ್ರತಿಕ ಉತ್ಸವಗಳನ್ನು ಏರ್ಪಡಿಸುವ ಇರಾದೆಯನ್ನು ಕುಲಪತಿಗಳು ವ್ಯಕ್ತಪಡಿಸಿದರು. ಕಾಲೇಜು ಪ್ರಾಂಶುಪಾಲ ಡಾ.ಪುಟ್ಟರಾಜು ಮಾತನಾಡಿ, ಕುಲಪತಿಗಳ ಕರೆಯಂತೆ ವಿದ್ಯಾರ್ಥಿಗಳು ಕ್ರೀಡೆಗಳಿಗೆ ಕೊಡುವ ಪ್ರಾಮುಖ್ಯತೆಯನ್ನು ಪುಸ್ತಕಗಳ ಓದಿಗೆ ನೀಡುವ ಮೂಲಕ ಹೆಚ್ಚು ಜ್ಞಾನಾರ್ಜನೆ ಹೊಂದುವುದು ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ತರ ಸಾಧನೆಯಾಗಿದೆ. ಜ್ಞಾನದ ಮುಂದೆ ಎಲ್ಲವೂ ಗೌಣ ಎಂದು ಪ್ರಾಂಶುಪಾಲರು ಅಭಿಪ್ರಾಯಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಟಿ.ಪಿ.ಜಯಂತಿ, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ.ಕುಮಾರ್, ಕಾಲೇಜಿನ ಅರ್ಥಶಾಸ್ತ್ರದ ಮುಖ್ಯಸ್ಥರಾದ ರಮೇಶ್ ಚಂದ್ರ , ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಡಾ.ದೀಪಾ, ಆಂಗ್ಲಭಾಷೆ ಉಪನ್ಯಾಸಕಿ ಡಾ.ರಶ್ಮಿ, ಉಪನ್ಯಾಸಕರಾದ ಚರಣ್ ರಾಜ್, ಮಧುಶ್ರೀ, ಸುನಿಲ್, ಡಾ.ಸಿದ್ದಪ್ಪಾಜಿ ಇದ್ದರು. ಡಾ.ರಶ್ಮಿ ಪ್ರಾರ್ಥಿಸಿದರು. ಡಾ.ಜಯಂತಿ ಸ್ವಾಗತಿಸಿದರು. ಡಾ. ಟಿ.ಎಂ.ದೀಪಾ ನಿರೂಪಿಸಿದರು. ಡಾ.ಎನ್.ಸಿದ್ದಪ್ಪಾಜಿ ವಂದಿಸಿದರು.










